ದಸರಾಗೆ ಮೆರುಗು ತರಲಿರುವ ಫಲಪುಷ್ಪ ಪ್ರದರ್ಶನ!
ಮೈಸೂರು, ಸೆಪ್ಟೆಂಬರ್ 19: ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನದಲ್ಲಿ ಜನಮನಸೆಳೆಯಲೆಂದೇ ಈ ಬಾರಿ ಸೋಮನಾಥಪುರದ ಶ್ರೀಚನ್ನಕೇಶವ ದೇವಾಲಯವನ್ನು ಮೂವತ್ತೇಳು ಅಡಿ ಅಗಲ, ಹದಿನೆಂಟು ಅಡಿ ಎತ್ತರ ಹಾಗೂ ಹದಿನಾರು ಅಡಿ ಉದ್ದದ ವಿಸ್ತೀರ್ಣದಲ್ಲಿ ವಿವಿಧ ಬಣ್ಣದ ಮೂರು ಲಕ್ಷ ಗುಲಾಬಿ ಹೂಗಳಿಂದ ನಿರ್ಮಾಣ ಮಾಡಲಾಗುತ್ತಿದೆ.
ಇದು ಸೆಪ್ಟೆಂಬರ್ 21 ರಿಂದ ಆರಂಭವಾಗಿ ಅಕ್ಟೋಬರ್ 1ರವರೆಗೆ ಕುಪ್ಪಣ್ಣಪಾರ್ಕ್ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಆಕರ್ಷಣೆಯಾಗಲಿದೆ. ಇನ್ನು ಫಲಪುಷ್ಪ ಪ್ರದರ್ಶನವನ್ನು ಜನಾಕರ್ಷಕವಾಗಿ ಮಾಡುವಲ್ಲಿ ತೋಟಗಾರಿಕಾ ಇಲಾಖೆ ಮುಂದಾಗಿದ್ದು ಹತ್ತು ಹಲವು ವಿಶೇಷತೆಗೆ ಆದ್ಯತೆ ನೀಡಿದೆ.
ಆರ್ಕಿಡ್ಸ್ ಹೂಗಳಿಂದ ಬಾರ್ಬಿಗಲ್ರ್ಸ್, ವಿವಿಧ ಹೂಗಳನ್ನು ಬಳಕೆ ಮಾಡಿ ನವಿಲು, ಅಸ್ಪಾರಾಗಸ್ನಿಂದ ಮೂರು ಆನೆಗಳು, ಐಫಲ್ ಟವರ್, ದೊಡ್ಡ ಗಡಿಯಾರ, ಹಲವು ಧಾನ್ಯಗಳ ಬಳಕೆ ಮಾಡಿ ಬುದ್ಧ, ಬಸವಣ್ಣ, ಡಾ. ಅಂಬೇಡ್ಕರ್ ಅವರ ಮೂರ್ತಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು ಇವುಗಳ ಆಕರ್ಷಣೆ ಹೆಚ್ಚಿಸಲು ಮತ್ತು ಜನರನ್ನು ಸೆಳೆಯಲು ಲೇಸರ್ ಶೋ ವಿಶೇಷ ಮೆರಗನ್ನು ನೀಡಲಾಗುತ್ತಿದೆ. ಇನ್ನು 2,15,000 ವಿವಿಧ ಜಾತಿಯ ಹೂವಿನ ಗಿಡಗಳ ಕುಂಡಗಳ ಜೋಡಣೆಯೂ ನಡೆಯಲಿದೆ.
ತರಕಾರಿ ಹಾಗೂ ಹಣ್ಣಿನ ಕೆತ್ತನೆ ವಿವಿಧ ಬಗೆಯ ಹೂವಿನ ಬಳ್ಳಿಗಳ ಜೋಡಣೆ, ಉತ್ತಮ ಗುಣಮಟ್ಟದ ಹೂವು, ಅಲಂಕಾರಿಕ ಗಿಡ ಹಾಗೂ ತೋಟಗಾರಿಕೆಗೆ ಪೂರಕ ಪರಿಕರಗಳನ್ನು ತಲುಪಿಸಲು ವಿವಿಧ ಖಾಸಗಿ ನರ್ಸರಿಗಳ ಮೂಲಕ ಮಾರಾಟ ಕೇಂದ್ರವನ್ನು ತೆರೆಯಲಾಗುತ್ತಿದೆ.
ಇದೆಲ್ಲದರ ನಡುವೆ ಆರ್ಕಿಡ್ಸ್, ಬೊನ್ಸಾಯ್, ಕ್ಯಾಕ್ರರ್ಸ್, ಅಂಥೋರಿಯಂ, ತರಕಾರಿ ಕೆತ್ತನೆ ವಿವಿಧ ರೀತಿಯ ಹೂವಿನ ಜೋಡಣೆ, ಒಣಗಿದ ಹೂಗಳ ಜೋಡಣೆಯೂ ಪುಷ್ಪಪ್ರೇಮಿಗಳನ್ನು ಆಕರ್ಷಿಸಲಿದೆ. ಈ ಬಾರಿಯ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿ ಜಪಾನೀಸ್ ಗಾರ್ಡ್ನ್ ಭೂದೃಶ್ಯವನ್ನು ಅನಾವರಣಗೊಳಿಸಲಾಗುತ್ತದೆ.
ಔಷಧಿ ಹಾಗೂ ಸುಗಂಧ ಗಿಡಗಳು, ಸಾವಯವ ಮಳಿಗೆ, ಜೇನು ಮಾರಾಟ ಕೇಂದ್ರ, ಟೆರಾಕೋಟ ಹಾಗೂ ಕರಕುಶಲ ವಸ್ತುಗಳ ಮಳಿಗೆಗಳನ್ನು ತೆರೆಯಲಾಗುತ್ತಿದ್ದು ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಖಾಸಗಿ ಗೃಹಗಳು, ಕಾರ್ಖಾನೆಗಳು, ವಿದ್ಯಾಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳ ಉದ್ಯಾನವನಗಳ ಸ್ಪರ್ಧೆ, ಮ್ಯೂಸಿಕಲ್ ಫೌಂಟನ್, ಪುಡ್ಕೋರ್ಟ್ ಸಹ ಪ್ರದರ್ಶನದಲ್ಲಿದೆ. ಇನ್ನು ಪ್ರತಿದಿನವೂ ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡ ಮನಸೆಳೆಯಲಿವೆ.