ಕೊಡಗಿನ ನಿರಾಶ್ರಿತರ ಶಿಬಿರಗಳಲ್ಲಿ ಸಂಗೀತ, ನೃತ್ಯ, ಯೋಗ...
ಮೈಸೂರು, ಆಗಸ್ಟ್ 26: ಕೊಡಗಿನ ಜಲಪ್ರಳಯಕ್ಕೆ ತತ್ತರಿಸಿ ಇದೀಗ ಮಾನಸಿಕ ಖಿನ್ನತೆಗೆ ಒಳಗಾಗಿರುವ ನೆರೆ ಸಂತ್ರಸ್ತರ ದುಗುಡ ದೂರ ಮಾಡಿ ವಾಸ್ತವ ಬದುಕಿನತ್ತ ಕರೆ ತರಲು ಕೆಲವು ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದಾರೆ.
ಮಕ್ಕಳಿಂದ ಹಿಡಿದು ಅನೇಕರು ನಿರಾಶ್ರಿತರ ಶಿಬಿರಗಳಲ್ಲಿ ಸಂಗೀತ, ನೃತ್ಯ, ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ನಡೆಸುವ ಮೂಲಕ ನೋವಿನಲ್ಲಿ ನಗು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಮಡಿಕೇರಿಯಲ್ಲಿ ಹೊಸ ಬದುಕಿಗೆ ಕಾಲಿಟ್ಟ ಸಂತ್ರಸ್ತ ಕುಟುಂಬದ ಯುವತಿ!
ಮನೆಯನ್ನು ಕಳೆದುಕೊಂಡು ಇದೀಗ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ ಮನಸ್ಸಿನ ಮೇಲಾಗಿರುವ ಅಘಾತ ನಿವಾರಿಸಲು ಎನ್ ಸಿಸಿ ಹಾಗೂ ಅನೇಕ ಎನ್ ಜಿ ಓ ಗಳ ತಂಡದ ಸದಸ್ಯರು ಮುಂದಾಗುತ್ತಿದ್ದಾರೆ.
ವಿವಿಧ ಕ್ಯಾಂಪ್ ಗಳಲ್ಲಿ ವಿವಿಧ ಚಟುವಟಿಕೆ ನಡೆಸುವ ಮೂಲಕ ಜನರ ಮನಸ್ಸಿನಲ್ಲಿರುವ ದುಗುಡ, ನೋವು, ಸಂಕಟ ಹಾಗೂ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಸ್ವಯಂ ಸೇವಕರು.
ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಕಾರ್ಯಕರ್ತರು ಕ್ಯಾಂಪ್ ನಲ್ಲಿದ್ದವರು ವಿವಿಧ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಪ್ರಾರ್ಥನೆ, ಶಿಶುಗೀತೆ, ಗಾಯನ, ಕೊಡಗು ಸಾಂಪ್ರದಾಯಿಕ ಸಂಗೀತಕ್ಕೆ ನೃತ್ಯ, ಮಕ್ಕಳಿಗೆ ಏಕಾಪಾತ್ರಾಭಿನಯ, ಚಿತ್ರಕಲೆ, ಗಾಯನ ಸ್ಪರ್ಧೆ ನಡೆಸುತ್ತಿದ್ದಾರೆ.
ಇದರಿಂದ ಅಲ್ಲಿರುವವರ ಚಿಂತೆ ದೂರವಾಗುತ್ತಿದೆ. ಮನಸ್ಸಲ್ಲಿ ಸಂತೋಷ ಮನೆ ಮಾಡುತ್ತಿದೆ.
ಕಾರ್ಯಕರ್ತ ಲಾರೆನ್ಸ್ ಪ್ರಕಾರ, ಈ ತೆರನಾದ ಕಾರ್ಯಕ್ರಮಗಳನ್ನು ಮಾಡುವುದರಿಂದ ಜನರಿಗೆ ಮನರಂಜನೆ ನೀಡಿದಂತಾಗುತ್ತದೆ. ಸ್ವಲ್ಪ ನಿರಾಳವಾಗುತ್ತಾರೆ. ಇಂದು ಭಾನುವಾರ ಇವರೆಲ್ಲರೂ ಸೇರಿ ಯಾವುದಾದರೊಂದು ಚಲನಚಿತ್ರ ತೋರಿಸಲು ತಿಳಿಸಿದ್ದಾರೆ. ಅದು ಕೂಡ ಪ್ಲಾನ್ ಮಾಡಲಾಗುತ್ತಿದೆ ಎಂದು ಸಂತಸದಿಂದಲೇ ನುಡಿದರು.