ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಆತಂಕದಲ್ಲಿ ಜನ
ಕೊಡಗು ಜೂನ್ 28: ಇಂದು ಬೆಳಗ್ಗೆ ಮತ್ತೆ ಕೊಡಗು ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದು, ಇಂದು ಬೆಳಗ್ಗೆ 7.45 ಸುಮಾರಿಗೆ ಮತ್ತೆ ಭೂಕಂಪವಾದ ಅನುಭವಾಗಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಮಡಿಕೇರಿ ತಾಲೂಕಿನ ಕರಿಕೆ, ಸಂಪಾಜೆ ಕರ್ಣಂಗೇರಿ ಹಾಗೂ ಪೆರಾಜೆ ಭಾಗಮಂಡಲ ಹಲವೆಡೆ ಭೂ ಕಂಪಿಸಿರುವುದಾಗಿ ಜನ ಹೇಳಿಕೊಂಡಿದ್ದಾರೆ.
ಕೊಡಗು ಸೇರಿದಂತೆ ಜಿಲ್ಲೆಗೆ ಹೊಂದಿಕೊಂಡಂತಿರುವ ಹಾಸನ, ದಕ್ಷಿಣಕನ್ನಡ ಭಾಗಗಳಲ್ಲಿ ಇದೇ ಜೂನ್ 25ರಂದು ಭೂಮಿ ಕಂಪಿಸಿದ ಅನುಭವವಾಗಿತ್ತು. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಮಡಿಕೇರಿ ತಾಲೂಕಿನ ಚೆಂಬು, ಕರಿಕೆ ಸಂಪಾಜೆ ವ್ಯಾಪ್ತಿಯಲ್ಲಿ ಹಾಗೂ ಗಡಿಭಾಗವಾದ ದ.ಕ ಜಿಲ್ಲೆಯ ಕಲ್ಲುಗುಂಡಿ, ಗೂನಡ್ಕ ಭಾಗದಲ್ಲಿ (ಜೂ.25) ಶನಿವಾರ ಬೆಳಗ್ಗೆ 9.10 ಸುಮಾರು 3 ರಿಂದ 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿತ್ತು. ಕಂಪನದಿಂದ ಭೂಮಿಯೊಳಗಿನಿಂದ ವಿಚಿತ್ರ ಶಬ್ಧ ಕೇಳಿಬಂದಿತ್ತು.

2018ರಲ್ಲಿ ಕೊಡಗಿನಲ್ಲಿ ಇಂತಹದ್ದೇ ಅನುಭವವಾಗಿತ್ತು. ಭೂಕುಸಿತವಾದ ಪ್ರದೇಶದಲ್ಲಿ ಭೂಮಿಯೊಳಗೆ ನೀರು ಹರಿವ ಸದ್ದು ಕೇಳಿಸಿತ್ತು. ಜತೆಗೆ ಭಾರಿ ಸದ್ದು ಕೇಳಿ ಬಂದಿತ್ತು. ಅದಾದ ನಂತರ ಸುರಿದಿದ್ದೇ ಮಹಾಮಳೆ ಜತೆಗೆ ಭಾರಿ ಪ್ರಮಾಣದ ಭೂಕುಸಿತ. ಆ ನಂತರ ಮೂರು ವರ್ಷಗಳ ಕಾಲ ಜಿಲ್ಲೆಯಲ್ಲಿ ಎಡೆಬಿಡದೆ ಭೂಕುಸಿತ ಸಂಭವಿಸಿದೆಯಲ್ಲದೆ, ಒಂದಷ್ಟು ಜನರ ಬಲಿ ಪಡೆದಿದೆ.

Recommended Video
ಇನ್ನು ಜೂ.25ರಂದು ಹಾಸನದ ಹೊಳೆ ನರಸೀಪುರ, ಅರಕಲಗೂಡು ಸೇರಿದಂತೆ ಒಂದಷ್ಟು ಊರು ಹಾಗೂ ಕೊಡಗಿನ ಸೋಮವಾರಪೇಟೆ, ಮಡಿಕೇರಿ ತಾಲೂಕಿನ ಕೆಲವೆಡೆ ಕೂಡ ಭೂಮಿ ಕಂಪಿಸಿತ್ತು. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಈಗಾಗಲೆ ಭೂಕಂಪ ಸಂಭವಿಸಿ ಸಾವಿರಕ್ಕೂ ಹೆಚ್ಚು ಜನರ ಸಾವಾಗಿದೆ. ಈ ಕಾರಣದಿಂದ ಕಳೆದ ಎರಡು ದಿನಗಳ ಈ ಭೂಕಂಪ ಕರುನಾಡಿನ ಕೆಲುವ ಭಾಗದಲ್ಲಿನ ಜನತೆಯಲ್ಲಿ ಆತಂಕವನ್ನು ಉಂಟುಮಾಡಿದೆ.












Click it and Unblock the Notifications