ಇನ್ಮುಂದೆ ದೆಹಲಿ ಪರೇಡ್ ಮೈದಾನ ಕಾರ್ಯಪ್ಪ ಮೈದಾನ!
ಮಡಿಕೇರಿ, ಜನವರಿ 7: ಯೋಧರ ನಾಡು ಕೊಡಗು ಜಿಲ್ಲೆ ದೇಶ ರಕ್ಷಣೆಗಾಗಿ ಸಾವಿರಾರು ಯೋಧರನ್ನು ನೀಡಿದೆ. ನೀಡುತ್ತಲೂ ಇದೆ. ಇವರ ಪೈಕಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕೊಡಗಿನ ಹೆಮ್ಮೆಯಾಗಿದ್ದಾರೆ. ಶಿಸ್ತಿನ ಸಿಪಾಯಿಯಾಗಿ ಬದುಕಿದ ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು. ಇದೀಗ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿರುವ ಆರ್ಮಿ ಪರೇಡ್ ಮೈದಾನದಲ್ಲಿ ಕಾರ್ಯಪ್ಪ ಪ್ರತಿಮೆಯನ್ನು ನಿರ್ಮಿಸಿ, ಪರೇಡ್ ಮೈದಾನಕ್ಕೆ ಅವರ ಹೆಸರನ್ನು ನಾಮಕರಣ ಮಾಡಿರುವುದು ಇತಿಹಾಸವಾಗಿದೆ.[ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಾಗ ಹಸ್ತಾಂತರ]
ದೇಶದ ರಕ್ಷಣಾ ಪಡೆಯ ಪ್ರಥಮ ಮಹಾದಂಡನಾಯಕ (ಕಮಾಂಡರ್ ಇನ್ ಚೀಫ್)ರಾಗಿ ಸೇನಾ ಪಿತಾಮಹ ಎಂದು ಖ್ಯಾತಿ ಪಡೆದಿದ್ದ ಕೊಡಗಿನ ಹೆಮ್ಮೆಯ ಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆ ಉದ್ಘಾಟಿಸಿ, ಪರೇಡ್ ಮೈದಾನಕ್ಕೆ ನಾಮಕರಣವನ್ನು ಭೂ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ದಲ್ಬೀರ್ ಸಿಂಗ್ ಇತ್ತೀಚೆಗೆ ಮಾಡಿದ್ದಾರೆ.

ಕೊಡಂದೇರ ದಿವಂಗತ ಮಾದಪ್ಪ- ಕಾವೇರಿ ದಂಪತಿ ಪುತ್ರರಾದ ಕಾರ್ಯಪ್ಪ ಅವರು 1949ರಿಂದ 1952ರ ತನಕ ರಕ್ಷಣಾ ಪಡೆ ಮಹಾದಂಡನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಸೇವೆ ಪರಿಗಣಿಸಿ, 1986ರಲ್ಲಿ ಅವರಿಗೆ ಅತ್ಯುನ್ನತ ಗೌರವವಾದ ಫೀಲ್ಡ್ ಮಾರ್ಷಲ್ ನೀಡಲಾಗಿತ್ತು.
ಇನ್ನೊಂದು ವಿಶೇಷ ಏನೆಂದರೆ ದೇಶದ ರಕ್ಷಣಾ ಪಡೆಯ ಮೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದು ಇವರೊಬ್ಬರೇ. ಅದು ಸೇನಾ ಇತಿಹಾಸವೂ ಹೌದು. ಇಂಥ ಮಹಾನ್ ವ್ಯಕ್ತಿಯ ಹೆಸರನ್ನು ದೆಹಲಿಯಲ್ಲಿರುವ ಪರೇಡ್ ಮೈದಾನಕ್ಕೆ ಇಡಬೇಕೆಂಬುದು ಕೊಡಗಿನ ಯೋಧರ ಬಯಕೆಯಾಗಿತ್ತು.[ದೇಶಕ್ಕಾಗಿ ಪ್ರಾಣತೆತ್ತ ಕೊಡವ ಯೋಧರೆಷ್ಟು ಗೊತ್ತಾ?]
ಈ ಬಗ್ಗೆ ಕೆಲ ತಿಂಗಳ ಹಿಂದೆ ಕೊಡಗಿಗೆ ಆಗಮಿಸಿದ್ದ ಭೂ ಸೇನೆ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರಿಗೆ ಹಿರಿಯ ಸೇನಾಧಿಕಾರಿಗಳು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ಅವರು, ತಮ್ಮ ಸೇವಾ ಅವಧಿಯೊಳಗೆ ಆ ಕಾರ್ಯವನ್ನು ಮಾಡುವ ಮೂಲಕ ಕೊಡಗಿನ ಯೋಧರ ಮಾತಿಗೆ ಮನ್ನಣೆ ನೀಡಿದ್ದಾರೆ.
ಕೊಡಗಿನವರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಲೆಫ್ಟಿನೆಂಟ್ ಜನರಲ್ ಗಳಾಗಿ ಅಪ್ಪಾರಂಡ ಅಯ್ಯಪ್ಪ, ಕೋದಂಡ ಸೋಮಣ್ಣ, ಬಿದ್ದಂಡ ಸಿ.ನಂದ, ಬುಟ್ಟಿಯಂಡ ಕೆ.ಬೋಪಣ್ಣ, ಬಲ್ಲಚಂಡ ಕೆ. ಚಂಗಪ್ಪ ಅವರು ಸೇನೆ ಉನ್ನತಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.[ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಭಾರತ]
ಅಲ್ಲದೆ ಸುಮಾರು 20 ಮಂದಿ ಮೇಜರ್ ಜನರಲ್ ಗಳಾಗಿ ಮತ್ತು ಅದಕ್ಕಿಂತ ಕೆಳ ಮಟ್ಟದ ಅಧಿಕಾರಿಗಳಾಗಿ, ಯೋಧರಾಗಿ ಕಾರ್ಯನಿರ್ವಹಿಸಿದ ಮತ್ತು ಕಾರ್ಯನಿರ್ವಹಿಸುತ್ತಿರುವರಿಗೆ ಇದೊಂದು ಹೆಮ್ಮೆಯಾಗಿದೆ.












Click it and Unblock the Notifications