ಎಲ್ಲೆಂದರಲ್ಲಿ ಕಲಬೆರಕೆ ಜೇನು ಮಾರಾಟ..ಕಹಿಯಾದ ‘ಕೊಡಗಿನ ಜೇನು’..!
ಮಡಿಕೇರಿ, ನವೆಂಬರ್ 21: ಕೊಡಗಿನ ಜೇನು ಮೊದಲಿನಿಂದಲೂ ಜನಪ್ರಿಯತೆ ಹೊಂದಿದೆ. ಹೀಗಾಗಿ ದೂರದಿಂದ ಬರುವ ಪ್ರವಾಸಿಗರು ಇಲ್ಲಿಂದ ಜೇನು ಕೊಂಡೊಯ್ಯಲು ಇಷ್ಟಪಡುತ್ತಾರೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಜೇನು ಕೃಷಿ ಜಿಲ್ಲೆಯಲ್ಲಿ ಮೊದಲಿನಂತೆ ನಡೆಯುತ್ತಿಲ್ಲ. ಆದ್ದರಿಂದ ಕೊಡಗಿನ ಜೇನಿನ ಹೆಸರಲ್ಲಿ ಕಲಬೆರಕೆ ಜೇನು ಯಥೇಚ್ಛವಾಗಿ ಮಾರಾಟವಾಗುತ್ತಿರುವುದು ಸುಳ್ಳೇನಲ್ಲ.
ಒಂದು ಕಾಲದಲ್ಲಿ ಕೊಡಗಿನ ಜೇನು ಕಾಫಿ, ಏಲಕ್ಕಿ, ಕಿತ್ತಳೆಯಷ್ಟೇ ವಿಶ್ವ ಶ್ರೇಷ್ಠವಾಗಿತ್ತು. ಆದರೆ ಅದು ಕೂಡ ರೋಗಕ್ಕೆ ಬಲಿಯಾಗಿ ವಿನಾಶದ ಅಂಚಿಗೆ ಹೋಗಿದ್ದು ಇತಿಹಾಸ. ಕೊಡಗಿನ ಬೆಳೆಗಾರರ ಪ್ರತಿ ತೋಟಗಳಲ್ಲಿ ಉಪಕಸುಬಾಗಿ ಕಂಗೊಳಿಸುತ್ತಿದ್ದ ಜೇನುಪೆಟ್ಟಿಗೆಗಳು ನಿಧಾನವಾಗಿ ಮರೆಯಾಗಿ ಹೋಗಿವೆ. ಸಾಮಾನ್ಯವಾಗಿ ಪ್ರತಿ ಮನೆಗಳಲ್ಲಿ ಒಂದೆರಡು ಜೇನುಪೆಟ್ಟಿಗೆಗಳು ಕಾಣಿಸುತ್ತಿದ್ದವಾದರೂ ಇತ್ತೀಚೆಗಿನ ದಿನಗಳಲ್ಲಿ ಅದರ ಸಂಖ್ಯೆ ಕ್ಷೀಣಿಸುತ್ತಿದೆ. ಜೇನಿಗೆ ಉತ್ತಮ ಬೆಲೆ ದೊರೆಯುತ್ತಿದ್ದರೂ ಜೇನು ಕೃಷಿ ಮಾಡುವುದು ಕಷ್ಟವಾಗಿ ಪರಿಣಮಿಸಿದೆ.

ಪ್ರತಿ ವರ್ಷ ಜನವರಿ ತಿಂಗಳಿನಿಂದ ಮೇ ತಿಂಗಳಿನ ಅವಧಿಯು ಕೊಡಗಿನಲ್ಲಿ ಜೇನು ಉತ್ಪಾದನೆಯ ಕಾಲವಾಗಿದೆ. ಈ ಐದು ತಿಂಗಳುಗಳಲ್ಲಿ ಸುಮಾರು ನೂರಇಪ್ಪತ್ತು ಬಗೆಯ ಹೂವುಗಳು ಕೊಡಗಿನ ಹಸಿರ ಪರಿಸರದಲ್ಲಿ ಅರಳಿ ನಿಲ್ಲುತ್ತವೆ. ಪರಾಗ ಸ್ಪರ್ಷದ ಮೂಲಕ ಮಕರಂದವನ್ನು ಹೀರುವ ಜೇನು ನೊಣಗಳು ಅದನ್ನು ಗೂಡಿನಲ್ಲಿಟ್ಟು ಜೇನನ್ನು ಉತ್ಪಾದಿಸುತ್ತವೆ.
ಕೊಡಗಿನಲ್ಲಿ ಜೇನು ಉತ್ಪಾದನೆ ಕುಂಠಿತ
ಜೇನು ಕೃಷಿಯಿಂದ ಕೇವಲ ಜೇನಿನ ಲಾಭ ಮಾತ್ರವಲ್ಲದೆ, ಪರಾಗ ಸ್ಪರ್ಶದಿಂದ ತೋಟಗಳಲ್ಲಿ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ ಮತ್ತು ಪರಿಸರದ ಸಂರಕ್ಷಣೆಯಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಿಂದ ಹನಿ ಗೂಡಿ ಹಳ್ಳ ಎನ್ನುವಂತೆ ಸಣ್ಣ ಸಣ್ಣ ಜೇನು ನೊಣಗಳು ಸಂಗ್ರಹಿಸಿದ ಜೇನಿನಲ್ಲಿ ರೋಗ ನಿರೋಧಕ ಶಕ್ತಿಯೂ ಅಡಕವಾಗಿರುತ್ತದೆ. ಇದೇ ಕಾರಣಕ್ಕೆ ಕೊಡಗಿನ ಜೇನಿಗೆ ಹೆಚ್ಚು ಬೇಡಿಕೆ ಇದೆ. ಕಳೆದ ಒಂದೆರಡು ದಶಕಗಳಿಂದ ದೇಶ-ವಿದೇಶಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದೆ. ಆದರೆ ಬೇಡಿಕೆ ಪೂರೈಸುವಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ಜೇನು ಉತ್ಪಾದನೆಯಾಗುತ್ತಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ.

ಕಳೆದ ಎರಡು ದಶಕಗಳಲ್ಲಿ ಕೊಡಗಿನ ಜೇನನ್ನು ಕಾಡಿದ ರೋಗ ಬಾಧೆಯ ಆತಂಕ ಕೃಷಿಕರಿಂದ ಇನ್ನೂ ಕೂಡ ದೂರವಾಗಿಲ್ಲ. ಇದೇ ಕಾರಣಕ್ಕೆ ಇಂದು ಕೊಡಗಿನಲ್ಲಿ ಜೇನು ಕೃಷಿಯನ್ನೇ ಪ್ರಮುಖವಾಗಿ ಯಾರೂ ಕೈಗೆತ್ತಿಕೊಂಡಿಲ್ಲ. ಉಪಕಸುಬಾಗಿ ಜೇನು ಕೃಷಿ ನಡೆಯುತ್ತಿದ್ದು, ಕೆಲವೇ ಕೆಲವು ಕೃಷಿಕರು ದೊಡ್ಡ ಸಂಖ್ಯೆಯಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿಕೊಂಡು ಜೇನು ಉತ್ಪಾದಿಸುತ್ತಿದ್ದಾರೆ. ಒಂದು ಪೆಟ್ಟಿಗೆಯಲ್ಲಿ ಕನಿಷ್ಠ 6 ರಿಂದ 8 ಕೆಜಿ ಜೇನನ್ನು ಪಡೆಯಬಹುದಾಗಿದೆ. ಆದರೆ ಒಂದೆರಡು ದಶಕಗಳ ಅತ್ಯತ್ತಮ ಪರಿಸರ ಮತ್ತು ರಾಸಾಯನಿಕಗಳ ಬಳಕೆ ಕಡಿಮೆಯಿದ್ದುದರಿಂದ ಆಗ 20 ರಿಂದ 25 ಕೆಜಿಯಷ್ಟು ಜೇನು ಉತ್ಪಾದನೆಯಾಗುತ್ತಿತ್ತು ಎನ್ನುವುದು ಜೇನು ಕೃಷಿಕರ ಅನುಭವದ ಮಾತಾಗಿದೆ.
ಜೇನು ಹುಳುವಿಗೆ ವೈರಸ್ ಕಾಟ
ಇವತ್ತಿಗೂ ಜೇನು ಕೃಷಿಗೆ ತಗಲುವ ವೈರಸ್ ನ್ನು ಸಂಪೂರ್ಣವಾಗಿ ಹತೋಟಿ ಮಾಡಲು ಸಾಧ್ಯವಾಗಿಲ್ಲ. ಕಾರಣ ಅರಣ್ಯ ಪ್ರದೇಶದಿಂದ ಆಗಮಿಸುವ ಜೇನು ನೊಣಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ತೊಡಗುವಾಗ ಇವುಗಳಲ್ಲಿರುವ ವೈರಸ್ ಹೂವುಗಳಿಗೆ ಹರಡುತ್ತವೆ. ಇದೇ ಹೂವುಗಳನ್ನು ಕೃಷಿಕರು ಬೆಳೆಸಿದ ಜೇನುನೊಣಗಳು ಸ್ಪರ್ಶಿಸಿದಾಗ ಅದು ಆರೋಗ್ಯವಂತ ನೊಣಗಳ ಪೆಟ್ಟಿಗೆಗಳಿಗೂ ಹರಡುತ್ತಿದೆ. ಒಂದು ವೇಳೆ ನೊಣಗಳು ಜೇನುಪೆಟ್ಟಿಗೆಯಲ್ಲಿ ಸಾಯಲು ಆರಂಭಿಸಿದರೆ ಉಳಿದ ನೊಣಗಳು ಪೆಟ್ಟಿಗೆಯನ್ನೇ ಬಿಟ್ಟು ಹೋಗಿ ಬಿಡುತ್ತವೆ. ಹೀಗಾಗಿ ಜೇನು ಕುಟುಂಬವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ.

ಇನ್ನು ಅರಣ್ಯ ಇಲಾಖೆ ಸುಪರ್ಧಿಯಲ್ಲಿರುವ ಕಾಡನ್ನು ಹೊರತುಪಡಿಸಿ ಉಳಿದಂತೆ ಮೊದಲಿನಂತೆ ಎಲ್ಲಿಯೂ ಕಾಡುಗಳಿಲ್ಲ. ಜತೆಗೆ ಏಲಕ್ಕಿ ತೋಟವಿದ್ದ ಕಾಲದಲ್ಲಿ ಹೆಮ್ಮರಗಳಿದ್ದವು. ಜತೆಗೆ ಬೇಸಿಗೆಯಲ್ಲಿ ತಂಪಾದ ಮತ್ತು ಹೂಬಿಡುವ ಮರ, ಗಿಡ, ಬಳ್ಳಿಗಳಿದ್ದವು. ಆದರೆ ಕಾಫಿ ತೋಟ ನಿರ್ಮಾಣವಾದ ಬಳಿಕ ಮೊದಲಿನ ವಾತಾವರಣವಿಲ್ಲ. ಇದರ ಜತೆಗೆ ಕಳೆನಾಶಕ ಬಳಕೆ, ಕ್ರಿಮಿನಾಶಕಗಳ ಬಳಕೆಯಿಂದ ಪರಾಗವನ್ನರಸಿ ಬರುವ ಜೇನು ನೊಣಗಳು ಸಾವನ್ನಪ್ಪುತ್ತಿವೆ.
ಅಗ್ಗದ ಜೇನು ಶುದ್ಧವಾಗಿರಲು ಸಾಧ್ಯನಾ?
ಕೊಡಗಿನ ಜೇನಿನಲ್ಲಿ ರೋಗ ನಿರೋಧಕ ಶಕ್ತಿ ಇದೆ ಎನ್ನುವ ಕಾರಣಕ್ಕಾಗಿಯೇ ಬೇಡಿಕೆ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲವು ವ್ಯಾಪಾರಿಗಳು ಕಲಬೆರಕೆ ಜೇನಿನ ಮಾರಾಟದ ಮೂಲಕ ಲಾಭ ಗಳಿಸುವ ದಂಧೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಇನ್ನು ಶುದ್ಧ ಜೇನನ್ನು ತೆಗೆದು ಮಾರಾಟ ಮಾಡುವುದು ಸುಲಭವಾಗಿ ಉಳಿದಿಲ್ಲ. ಅದು ದಬಾರಿ ಬೆಲೆ ಕೇಳುತ್ತದೆ. ಹೀಗಿರುವಾಗ ಅಗ್ಗದ ಬೆಲೆಗೆ ದೊರೆಯುವ ಜೇನಿನ ಮೇಲೆ ಸಂಶಯ ಮೂಡದಿರದು.
ಇಷ್ಟಕ್ಕೂ ಜಿಲ್ಲೆಯ ಎಲ್ಲೆಂದರಲ್ಲಿ ಮಾರಾಟವಾಗುತ್ತಿರುವ ಜೇನು ಪರಿಶುದ್ಧವಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕಾಗಿದೆ. ಕೊಡಗಿನ ಜೇನು ಹೆಸರಿನಲ್ಲಿ ಕಲಬೆರಕೆ ಜೇನನ್ನು ಮಾರಾಟ ಮಾಡಿದರೆ ಅದರಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುವ ಸಾಧ್ಯತೆಯಿದೆ. ಹಿಂದಿನ ಕಾಲದಲ್ಲಿಯೇ ಕೊಡಗು ಪ್ರಗತಿಪರ ಜೇನು ಮಾರಾಟ ಕೃಷಿಕರ ಸಹಕಾರ ಸಂಘ ಸ್ಥಾಪನೆಯಾಗಿದ್ದು, ಸಹಕಾರ ಸಂಘವೇ ಕೃಷಿಕರಿಂದ ಜೇನನ್ನು ಸಂಗ್ರಹಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಾ ಬರುತ್ತಿದೆ.
ಕೊಡಗು ಜೇನಿನ ಖ್ಯಾತಿಗೆ ಧಕ್ಕೆಯಾಗದಿರಲಿ
ಇನ್ನೊಂದೆಡೆ ಜೇನಿನ ಗತವೈಭವ ಮರಳಿ ತರಲು ಅರಣ್ಯ ಇಲಾಖೆ ಕೂಡ ಸ್ಪಂದಿಸುತ್ತಾ ಬಂದಿದ್ದು, ಜೇನುಪೆಟ್ಟಿಗೆಯನ್ನು ವಿತರಿಸುತ್ತಾ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಶುದ್ಧ ಜೇನಿನ ಬೆಲೆ ಕೆಜಿಗೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚಿದೆ. ಹೀಗಿರುವಾಗ ಬಾಟಲಿಯಲ್ಲಿ ತುಂಬಿಸಿ ಕಡಿಮೆ ಬೆಲೆಗೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಮಾರಾಟ ಮಾಡುತ್ತಾರೆ ಎಂದರೆ ಅದರ ಬಗ್ಗೆ ಸಂಶಯ ಮೂಡುತ್ತದೆ. ಈ ಜೇನನ್ನು ಎಲ್ಲಿಂದ? ಯಾರಿಂದ ಖರೀದಿಸಿಡಲಾಗುತ್ತಿದೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಇನ್ನಾದರೂ ಜಿಲ್ಲಾಡಳಿತ ಕಲಬೆರಕೆ ಜೇನಿನತ್ತ ಗಮನಹರಿಸಿ ಕೊಡಗು ಜೇನಿನ ಖ್ಯಾತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಿ ಎಂಬುದೇ ಕಳಕಳಿಯಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications