ಕೊಡಗಿನ ಅಯ್ಯಂಗೇರಿ ಕೃಷ್ಣ ದೇಗುಲದಲ್ಲಿ ಚಿನ್ನತಪ್ಪ ಹಬ್ಬ..
ಕೊಡಗಿನ ಅಯ್ಯಗೇರಿಯಲ್ಲಿ ನಡೆಯುವ ಚಿನ್ನತಪ್ಪ ಹಬ್ಬ ಆಚರಣೆಗೆ ನಂಬಿಕೆ ಜೀವಾಳ. ಕೃಷ್ಣನ ಕೊಳಲು ಸಿಕ್ಕ ಧನ್ಯತಾ ಭಾವದಿಂದ ಅಚರಿಸುವ ಮೂರು ದಿನದ ಹಬ್ಬದಲ್ಲಿ ಎಷ್ಟೆಲ್ಲ ಕಟ್ಟುನಿಟ್ಟಾಗಿ ನಿಯಮಗಳನ್ನು ಅನುಸರಿಸುತ್ತಾರೆ.
ಕೊಡಗಿನಲ್ಲೇ ಏಕೈಕ ದೇಗುಲ ಎಂಬ ಖ್ಯಾತಿಗೊಳಗಾಗಿರುವ ಅಯ್ಯಂಗೇರಿಯ ಕೃಷ್ಣ ದೇಗುಲದಲ್ಲಿ ಚಿನ್ನತಪ್ಪ ಹಬ್ಬ ನಡೆಯುತ್ತಿದ್ದು, ಇಡೀ ಊರಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ.
ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಿಂದ ನಾಪೋಕ್ಲು ಮೂಲಕ ಭಾಗಮಂಡಲಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 40 ಕಿ.ಮೀ. (ಭಾಗಮಂಡಲಕ್ಕೆ 6 ಕಿಮೀ) ದೂರದಲ್ಲಿ ಅಯ್ಯಂಗೇರಿ ಗ್ರಾಮವಿದೆ. ಇಲ್ಲಿ ಶ್ರೀಕೃಷ್ಣನ ದೇವಾಲಯವಿದೆ. ಇಲ್ಲಿ ಬೇಸಿಗೆಯಲ್ಲಿ ಮೂರು ದಿನಗಳ ಕಾಲ ಹಬ್ಬ ನಡೆಯುತ್ತದೆ.
ಭಾನುವಾರದಿಂದ (ಫೆಬ್ರವರಿ 19) ಹಬ್ಬ ಆರಂಭವಾಗಿದ್ದು ಮಂಗಳವಾರಕ್ಕೆ ಸಮಾಪ್ತಿಗೊಳ್ಳಲಿದೆ. ಈ ಹಬ್ಬದಲ್ಲಿ ಒಂದಷ್ಟು ವಿಶೇಷತೆ ಕಾಣಬಹುದಾದರೂ ಕೃಷ್ಣನ ಕಾಲದ್ದು ಎನ್ನಲಾದ ಕೊಳಲಿಗೆ ವಿವಿಧ ವಿಧಿ- ವಿಧಾನದೊಂದಿಗೆ ಪೂಜೆ ಸಲ್ಲಿಸುವುದು ಹಬ್ಬದ ವಿಶೇಷವಾಗಿದೆ.[ಕೊಡಗಿಗೆ ರೈಲು, ನದಿತಿರುವು, ರೆಸಾರ್ಟ್ ಬೇಡವೇಬೇಡ!]

ಹಿಂದಿನ ಕಾಲದಲ್ಲಿ ಗ್ರಾಮದ ಚೀಂಗಂಡ ಹಾಗೂ ಬಿದ್ದಿಯಂಡ ಕುಟುಂಬದ ಹಿರಿಯರು ಗದ್ದೆ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀಕಷ್ಣನ ಕೊಳಲು ನದಿಯೊಂದರಲ್ಲಿ ತೇಲಿ ಬರುತ್ತಿದ್ದುದನ್ನು ಕಂಡು, ಅದು ನದಿನೀರಲ್ಲಿ ಕೊಚ್ಚಿ ಹೋಗುವುದನ್ನು ತಪ್ಪಿಸಿ ಬಿದ್ದಿಯಂಡ ಕುಟುಂಬದ ಐನ್ಮನೆಗೆ ಕೊಂಡೊಯ್ದು ಪೂಜಿಸುತ್ತಾ ಬಂದರಂತೆ. ಇದು ಕೊಳಲಿನ ಬಗ್ಗೆ ಗ್ರಾಮಸ್ಥರಲ್ಲಿರುವ ನಂಬಿಕೆಯಾಗಿದೆ.
ಈ ಕೊಳಲನ್ನು ಶ್ವೇತ ವಸ್ತ್ರಗಳಿಂದ ಮುಚ್ಚಿ, ವೀಕ್ಷಕರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸುವುದು ಇಲ್ಲಿನ ಮತ್ತೊಂದು ವಿಶೇಷ. ಹಾಗಾಗಿ ಇದುವರೆಗೆ ಕೃಷ್ಣನ ಕೊಳಲು ಹೇಗಿದೆ ಎಂಬುವುದು ಕೊಳಲನ್ನು ಊದುವ ತಕ್ಕ ಮುಖ್ಯಸ್ಥರ ಹೊರತು ಬೇರೆಯವರಿಗೆ ತಿಳಿದಿಲ್ಲ.[ಕೊಡಗಿನಲ್ಲಿ ಶಾತವಾಹನರ ಕಾಲದ ಶಿಲಾಶಾಸನ ಪತ್ತೆ!]
'ಚಿನ್ನತಪ್ಪ' ಹಬ್ಬವನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಹಬ್ಬ ಆಚರಣೆಯ ಮುನ್ನ ಅಶ್ವತ್ಥ ವೃಕ್ಷಕ್ಕೆ ಕಟ್ಟು ಕಟ್ಟಲಾಗುತ್ತದೆ. ಅದರಂತೆ ಅಂದಿನಿಂದ ಹಬ್ಬ ಮುಗಿಯುವ ತನಕ ಊರೊಳಗೆ ಪ್ರಾಣಿ ಹಿಂಸೆ, ಮಾಂಸ ಸೇವನೆ ಸೇರಿದಂತೆ ಮದುವೆ ಇನ್ನಿತರ ಶುಭಕಾರ್ಯ ಮಾಡುವಂತಿಲ್ಲ. ಅಲ್ಲದೆ ಹಬ್ಬದ ಸಂದರ್ಭ ಗ್ರಾಮದಲ್ಲಿ ಮಂಚದಲ್ಲಿ ಮಲಗುವಂತಿಲ್ಲ. ಎಲ್ಲರೂ ಮನೆಯಲ್ಲಿ ಅವಲಕ್ಕಿಯನ್ನೇ ಸೇವಿಸಬೇಕು ಎಂಬಂತಹ ಕಟ್ಟುಪಾಡು ಆಚರಣೆಯಲ್ಲಿರುತ್ತದೆ.

ಮುಖ್ಯಸ್ಥರಿಂದ ಹಬ್ಬಕ್ಕೆ ಚಾಲನೆ
ಧಾರೆಪೂಜೆ, ಪಟ್ಟಣಿ, ಭಂಡಾರ ಹಾಕುವುದು ಹೀಗೆ ಮೂರು ದಿನಗಳ ಕಾಲ ನಡೆಯುವ ಹಬ್ಬದ ಆಚರಣೆ ಕೂಡ ವಿಭಿನ್ನವೂ, ವಿಶಿಷ್ಟವೂ ಆಗಿರುತ್ತದೆ. ಹಬ್ಬದ ಮೊದಲ ದಿನ ಬೆಳಗ್ಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಾಲಯಕ್ಕೆ ಆಗಮಿಸುವ ತಕ್ಕ ಮುಖ್ಯಸ್ಥರು ಹಬ್ಬಕ್ಕೆ ಚಾಲನೆ ನೀಡುತ್ತಾರೆ.
ಈ ಸಂದರ್ಭ ದೇವಾಲಯದ ಒಂದು ಪಾರ್ಶ್ವದಲ್ಲಿ ಚಂಡೆ ಸದ್ದು ನೀರವ ಮೌನವನ್ನು ಸೀಳಿ ಹಬ್ಬಕ್ಕೆ ರಂಗು ನೀಡುತ್ತದೆ. ಇದೇ ಸಂದರ್ಭದಲ್ಲಿ ಶ್ವೇತ ವಸ್ತ್ರದಿಂದ ಮುಚ್ಚಲಾದ ಶ್ರೀಕೃಷ್ಣನ ಕೊಳಲನ್ನು ಹೊರತರಲಾಗುತ್ತದೆ. ಬಳಿಕ ಅದನ್ನು 'ಊರ್ಮಂದ್'ನ ಗದ್ದೆ ಬಳಿಯಲ್ಲಿರುವ ನಿರ್ದಿಷ್ಟ ಸ್ಥಳಕ್ಕೆ ತಂದು, ಆ ನಂತರ ದೇವಾಲಯಕ್ಕೆ ಹಿಂತಿರುಗಿಸಲಾಗುತ್ತದೆ.[ಕೊಂಬೊ ಮೀಸೆರ ಬಂಬೋ ಆದ ಲೋಕೇಶ್ ಅಚ್ಚಪ್ಪ]
ಈ ಸಂದರ್ಭದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಮಾತ್ರವಲ್ಲದೆ, ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅಂದು ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ ತಕ್ಕ ಮುಖ್ಯಸ್ಥರು ಕೊಳಲಿನೊಂದಿಗೆ ದೇವಾಲಯದ ಎಡಭಾಗದಲ್ಲಿರುವ ಕಲ್ಲುಹೊಳೆಗೆ ತೆರಳಿ, ಅಲ್ಲಿ ರಾತ್ರಿ 7.30 ರಿಂದ ಮರುದಿನ ಮುಂಜಾನೆ 3.30ರವರೆಗೆ ಧಾರೆಪೂಜೆಯನ್ನು ನೆರವೇರಿಸುತ್ತಾರೆ. ಧಾರೆಪೂಜೆ ಬಳಿಕ ಕೊಳಲನ್ನು ಮತ್ತೆ ದೇವಸ್ಥಾನಕ್ಕೆ ತರಲಾಗುತ್ತದೆ.

ಎತ್ತುಪೋರಾಟ
ಎರಡನೆಯ ದಿನ ನಡೆಯುವುದು ಪಟ್ಟಣಿ ಹಬ್ಬವಾಗಿದ್ದು, ಅಂದು ಬೆಳಗ್ಗೆಯಿಂದ ಪೂಜಾ ಕಾರ್ಯಕ್ರಮಗಳು ನಡೆದು, ಮಧ್ಯಾಹ್ನವಾಗುತ್ತಿದ್ದಂತೆಯೇ ತಕ್ಕ ಮುಖ್ಯಸ್ಥರಲ್ಲದೆ, ಬಿದ್ದಿಯಂಡ ಹಾಗೂ ಚೀಂಗಂಡ ಕುಟುಂಬದಿಂದ ತಲಾ ಒಬ್ಬರಂತೆ ಸೇರಿ ವಸ್ತ್ರದಿಂದ ಮುಚ್ಚಲಾದ ಕೊಳಲನ್ನು ನಿರ್ದಿಷ್ಟ ಸ್ಥಳದಲ್ಲಿ ನುಡಿಸುತ್ತಾ ಊರ್ಮಂದ್ಗೆ ಬರುತ್ತಾರೆ.
ಇಲ್ಲಿಗೆ ಸಮೀಪದಲ್ಲಿರುವ ಗದ್ದೆ ಬಳಿ ಕೊಳಲು ನುಡಿಸಲಾಗುತ್ತದೆ. ಅಲ್ಲಿಂದ ನಂತರ 'ನಾಳೆಯಂಡ ಮಾನಿ' ಎಂಬಲ್ಲಿಗೆ ತೆರಳುತ್ತಾರೆ. ಅಲ್ಲಿ ಎತ್ತುಪೋರಾಟವೂ ನಡೆಯುತ್ತದೆ. ಇದೇ ವೇಳೆಗೆ ಶ್ವೇತವಸ್ತ್ರಧಾರಿಣಿ ಸ್ತ್ರೀಯರು ಅಕ್ಕಿ, ಹೂ, ದೀಪವಿರುವ ಹರಿವಾಣವನ್ನು ಹೊತ್ತು ಎತ್ತುಪೋರಾಟದೊಂದಿಗೆ ಊರ್ಮಂದ್ಗೆ ಬರುತ್ತಾರೆ.[ವೃದ್ಧಿ ಕಾಣದ ನಾಯಿಗಾಗಿ ಕೊಡಗಿನಲ್ಲಿ ವಿಶಿಷ್ಟ ಆಚರಣೆ!]
ಗುಂಡು ಹಾರಿಸಿ, ಕಟ್ಟು ಸಡಿಲ
ಅಲ್ಲಿ ಮೂರು ಬಾರಿ ಎತ್ತುಪೋರಾಟ ನಡೆಯುತ್ತದೆ. ನಂತರ ಅಶ್ವತ್ಥ ವೃಕ್ಷದ ಮೇಲೆ ಕಟ್ಟಲಾದ ತೆಂಗಿನಕಾಯಿಗೆ ಗುಂಡು ಹಾರಿಸಿ, ಕಟ್ಟನ್ನು ಸಡಿಲಿಸಲಾಗುತ್ತದೆ. ಬಳಿಕ ಕೊಳಲನ್ನು ನಿರ್ದಿಷ್ಟ ಸ್ಥಳದಲ್ಲಿ ನುಡಿಸುತ್ತಾ ಬಿದ್ದಿಯಂಡ ಮಾನಿಯತ್ತ ತೆರಳುತ್ತಾರೆ. ಈ ಸಂದರ್ಭದಲ್ಲಿ ಎತ್ತುಪೋರಾಟದ ಎತ್ತುಗಳನ್ನು ಓಡಿಸಲಾಗುತ್ತದೆ. ಆಮೇಲೆ ದೇವರ ಜಳಕಕ್ಕೆ ಅನುಮತಿ ಕೋರಿ, ಧಾರೆಪೂಜೆ ನಡೆದ ಸ್ಥಳಕ್ಕೆ ತೆರಳಿ ಎಲ್ಲರೂ ಜಳಕ ಮಾಡಿ ದೇವಾಲಯಕ್ಕೆ ಹಿಂತಿರುಗುತ್ತಾರೆ. ಅಲ್ಲಿಗೆ ಪಟ್ಟಣಿ ಹಬ್ಬ ಮುಗಿಯುತ್ತದೆ.
ಕೊನೆಯ ದಿನ ದೇವರಿಗೆ ಭಂಡಾರ ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ನೂರಾರು ಲೀಟರ್ ಹರಕೆಯ ಎಣ್ಣೆಯನ್ನು ಭಕ್ತರು ದೇವರಿಗೆ ಅರ್ಪಿಸುತ್ತಾರೆ. ಪೂಜೆಯೊಂದಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತದೆ. ಇಲ್ಲಿಗೆ ಮೂರು ದಿನಗಳ ಹಬ್ಬಕ್ಕೆ ತೆರೆ ಬೀಳುತ್ತದೆ.












Click it and Unblock the Notifications