ಕೊಡಗು ಪ್ರವಾಹ : ಹಾನಿಯ ಅಂದಾಜಿಗೆ ಬಂದ ಕೇಂದ್ರದ ತಂಡ
ಮಡಿಕೇರಿ, ಸೆಪ್ಟೆಂಬರ್ 12 : ಕೊಡಗಿ ಜಿಲ್ಲೆಯಲ್ಲಿ ಮಳೆ, ಭೂ ಕುಸಿತದಿಂದ ಆಗಿರುವ ಹಾನಿ ಅಂದಾಜಿಸಲು ಕೇಂದ್ರದ ತಂಡ ಆಗಮಿಸಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮನ್ ಕಳೆದ ತಿಂಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮೂವರು ಸದಸ್ಯರ ಕೇಂದ್ರ ತಂಡ ಬುಧವಾರ ಕೊಡಗು ಜಿಲ್ಲೆಗೆ ಆಗಮಿಸಿದೆ. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಂಡದ ಸದಸ್ಯರನ್ನು ಬರಮಾಡಿಕೊಂಡರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ನಿಯೋಗ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ತಂಡ ಕಳುಹಿಸಿಕೊಡುವ ಭರವಸೆ ನೀಡಿದ್ದರು.
ಕೊಡಗಿಗೆ ಮುಖ್ಯ ಕಾರ್ಯದರ್ಶಿ ಭೇಟಿ, ಹಲವು ಗ್ರಾಮಗಳಲ್ಲಿ ಪರಿಶೀಲನೆ
ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಭಾರಿ ಮಳೆಯಾಗಿತ್ತು. ಹಲವು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿತ್ತು. 800ಕ್ಕೂ ಹೆಚ್ಚು ಮನೆಗಳು, 3,400 ಕಿ.ಮೀ. ರಸ್ತೆ, ಸುಮಾರು 4 ಸಾವಿರ ಎಕರೆ ಕಾಫಿ ತೋಟಕ್ಕೆ ಹಾನಿಯಾಗಿತ್ತು. ಕರ್ನಾಟಕ ಸರ್ಕಾರ ಜಿಲ್ಲೆಗೆ 100 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿದೆ.
ಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿ
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿತ್ತು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ.
ಕೊಡಗು ಮಹಾಮಳೆಯ ದುರಂತದ ನಂತರ ಕಾಲೂರಿನ ದುಸ್ಥಿತಿ ಇದು
ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಾಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರಗಳಾದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಪೊನ್ನಂಪೇಟೆಯ ಹಳೇ ನ್ಯಾಯಾಲಯ ಕಟ್ಟಡ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.
ಸಂತ್ರಸ್ತರ ವಿವರ : ಮಡಿಕೇರಿ ತಾಲೂಕಿನ 10 ಪರಿಹಾರ ಕೇಂದ್ರಗಳಲ್ಲಿ 348 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 453 ಪುರುಷರು, ಮತ್ತು 477 ಮಹಿಳೆಯರು ಸೇರಿದಂತೆ 930 ಜನ ಸಂತ್ರಸ್ತರಿದ್ದಾರೆ.
ಸೋಮವಾರಪೇಟೆ ತಾಲೂಕಿನ 2 ಪರಿಹಾರ ಕೇಂದ್ರಗಳಲ್ಲಿ 154 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 189 ಪುರುಷರು ಮತ್ತು 201 ಮಹಿಳೆಯರು ಸೇರಿದಂತೆ ಒಟ್ಟು 390 ಜನ ಸಂತ್ರಸ್ತರಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿರುವ 12 ಪರಿಹಾರ ಕೇಂದ್ರಗಳಲ್ಲಿ ಒಟ್ಟು 502 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 642 ಪುರುಷರು ಮತ್ತು 678 ಮಹಿಳೆಯರು ಸೇರಿದಂತೆ ಒಟ್ಟು 1320 ಜನ ಸಂತ್ರಸ್ತರಿದ್ದಾರೆ.