ಅಕ್ಟೋಬರ್ 17ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ
ಮಡಿಕೇರಿ, ಸೆಪ್ಟೆಂಬರ್ 28 : ಭಾರಿ ಮಳೆ, ಗುಡ್ಡ ಕುಸಿತದಿಂದ ಕೊಡಗಿನಲ್ಲಿ ಅಪಾರ ನಷ್ಟವಾಗಿದೆ. ನಷ್ಟದ ನಡುವೆಯೇ ತಲಕಾವೇರಿಯಲ್ಲಿ ಜಾತ್ರೆ ನಡೆಯಲಿದೆ. ತಲ ಕಾವೇರಿಯಲ್ಲಿ ಅಕ್ಟೋಬರ್ 17ರಂದು ತೀರ್ಥೋದ್ಭವವಾಗಲಿದೆ.
ಈ ವರ್ಷ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ. ಅಕ್ಟೋಬರ್ 17ರಂದು ಸಂಜೆ 6.43ಕ್ಕೆ ತೀರ್ಥೋದ್ಭವವಾಗಲಿದೆ. ಕಳೆದ ವರ್ಷ ಮಧ್ಯಾಹ್ನ 12.15ಕ್ಕೆ ತೀರ್ಥೋದ್ಭವವಾಗಿತ್ತು.
ಭಾಗಮಂಡಲದ ತಕ್ಕಮುಖ್ಯಸ್ಥರು, ಜ್ಯೋತಿಷಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಥೋದ್ಭವದ ಸಮಯವನ್ನು ತೀರ್ಮಾನಿಸಲಾಗಿದೆ. ಸೆ.27ರಂದು ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಸಾಂಪ್ರದಾಯಿಕ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅಕ್ಟೋಬರ್ 5ರಂದು ಬೆಳಗ್ಗೆ 10.15ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅಕ್ಟೋಬರ್ 15ರಂದು ಬೆಳಗ್ಗೆ 10.25ಕ್ಕೆ ಅಕ್ಷಯ ಪಾತ್ರೆ ಇಡುವ ಕಾರ್ಯಕ್ರಮ ನಡೆಯಲಿದೆ.
ಕಾವೇರಿ ಕೊಡಗು ಜನರ ಕುಲದೇವತೆ. ತೀರ್ಥೋದ್ಭವದ ದಿನವನ್ನು ಪ್ರಮುಖ ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನ ತಲಕಾವೇರಿಯಲ್ಲಿ ಜಾತ್ರೆಯೂ ನಡೆಯುತ್ತದೆ. ಸಾವಿರಾರು ಭಕ್ತಾದಿಗಳು ಅಂದು ಆಗಮಿಸುತ್ತಾರೆ.
ತೀರ್ಥೋದ್ಭವದ ದಿನ ತಲಕಾವೇರಿಗೆ ಕರ್ನಾಟಕ ಮಾತ್ರವಲ್ಲ ಅಕ್ಕದ ತಮಿಳುನಾಡು ರಾಜ್ಯದಿಂದಲೂ ನೂರಾರು ಭಕ್ತರು ಆಗಮಿಸುತ್ತಾರೆ. ತೀರ್ಥೋದ್ಭವದ ದಿನ ಕಾವೇರಿ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಒಳ್ಳೆಯದು ಎಂಬ ನಂಬಿಕೆಯೂ ಇದೆ.












Click it and Unblock the Notifications