ಮಡಿಕೆರಿಯಲ್ಲಿ ಹಿಂದೂಗಳಿರುವ ಕಡೆ ಪೆಟ್ರೋಲ್ ಬಾಂಬ್ ಬೆದರಿಕೆ; ಇಬ್ಬರ ಬಂಧನ
ಮಡಿಕೇರಿ, ಅ. 17: ನಗರದಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಮಡಿಕೇರಿ ನಗರ ಮುನ್ಸಿಪಲ್ ಕೌನ್ಸಿಲ್ (ಸಿಎಂಸಿ) ಸದಸ್ಯ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ನಗರ ಪಾಲಿಕೆ ಸದಸ್ಯ ಮುಸ್ತಫಾ ಹಾಗೂ ಮಡಿಕೇರಿ ಸಮೀಪದ ಬೆಟಗೇರಿ ನಿವಾಸಿ ಅಬ್ದುಲ್ಲಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಭಾನುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸುರತ್ಕಲ್ ಟೋಲ್ ತೆರವು ಮಾಡುವವರೆಗೂ ಹೋರಾಟ; ಹೋರಾಟ ಸಮಿತಿ
ಪೆಟ್ರೋಲ್ ಬಾಂಬ್ ದಾಳಿ ನಡೆಸುವ ಸಂಭಾಷಣೆಯ ಆಡಿಯೋ ಕ್ಲಿಪ್ ವೈರಲ್ ಆದ ಬಳಿಕ ಶೇಷಪ್ಪ ರೈ ಎನ್ನುವವರು ನೀಡಿದ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಷಪ್ಪ ರೈ ತಮ್ಮ ದೂರಿನಲ್ಲಿ, ಏಪ್ರಿಲ್ 23 ರಂದು ಕೆಲವು ವ್ಯವಹಾರಗಳ ಬಗ್ಗೆ ಮಾತನಾಡಲು ಅಬ್ದುಲ್ಲಾ ಅವರಿಗೆ ಕರೆ ಮಾಡಿದ್ದರು. ಕರೆ ನಂತರ ಆರೋಪಿಗಳು ಕರೆ ಕಟ್ ಮಾಡುವುದನ್ನು ಮರೆತು ಮುಸ್ತಫಾ ಜತೆ ಮಾತನಾಡಲು ಆರಂಭಿಸಿದ್ದರು. ಅವರ ಮಾತುಗಳನ್ನು ಶೇಷಪ್ಪ ರೈ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
'ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರೆ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ' ಎಂದು ಆರೋಪಿಗಳು ಕ್ಲಿಪ್ನಲ್ಲಿ ಹೇಳಿದ್ದಾರೆ. ಮುಂದುವರೆದು, "50 ಸದಸ್ಯರ ತಂಡವನ್ನು ರಚಿಸಬೇಕಾಗಿದೆ. ಈ ಉದ್ದೇಶಕ್ಕೆ ಪ್ರತಿಯೊಬ್ಬರು 50 ಸಾವಿರದಿಂದ 1 ಲಕ್ಷದವರೆಗೆ ದೇಣಿಗೆ ನೀಡಬೇಕು" ಎನ್ನಲಾಗಿದೆ. ಈ ಆಡಿಯೋ ನಗರದಲ್ಲಿ ವೈರಲ್ ಆಗಿ ಜನ ಬೆಚ್ಚಿಬಿದ್ದಿದ್ದರು.
"ತಂಡಗಳ ಮೂಲಕ ಮಡಿಕೇರಿ ನಗರದಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಬೇಕು. ಇಡೀ ಊರೇ ಸುಡಬೇಕು. ಹಿಂದೂಗಳು ಸಾಯಲಿ, ನಾವೂ ಸಾಯೋಣ. ಅವರು ಭಯಭೀತರಾಗಬೇಕು. ಅವರ ಪಕ್ಷ ಕೊನೆಗೊಳ್ಳಬೇಕು. ಬಾಂಬ್ಗಳು ಕನಿಷ್ಠ 50 ಸ್ಥಳಗಳಲ್ಲಿ ಸ್ಫೋಟಗೊಳ್ಳಬೇಕು. ಬಿಜೆಪಿಯ ಜನರು ಚುನಾವಣೆಯಲ್ಲಿ ಸ್ಪರ್ಧಿಸಲೂ ಭಯಪಡಬೇಕು" ಎಂದು ಆರೋಪಿಗಳು ಆಡಿಯೋ ಕ್ಲಿಪ್ನಲ್ಲಿ ಹೇಳಿದ್ದಾರೆ.
"ರಾಜ್ಯದಲ್ಲಿ ಶಾಂತಿ ಕದಡಲು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಮಾನಹಾನಿ ಮಾಡಲು ಪ್ರಯತ್ನಿಸುತ್ತಿರುವ ಸಮಾಜವಿರೋಧಿ ಶಕ್ತಿಗಳ ಬಗ್ಗೆ ಜನರು ಜಾಗೃತರಾಗಬೇಕು. ಆರೋಪಿಗಳು ನಿಷೇಧಿತ ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಜೊತೆ ಸಂಪರ್ಕ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ" ಎಂದು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಹೇಳಿದ್ದಾರೆ.
ಇಬ್ಬರ ವಿರುದ್ಧ ಐಪಿಸಿ 153, 153 ಎ, 120 ಬಿ ಮತ್ತು 505 (2) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಡಿಕೇರಿ ಪೊಲೀಸ್ ವರಿಷ್ಠಾಧಿಕಾರಿ ಎಂ ಅಯ್ಯಪ್ಪ ತಿಳಿಸಿದ್ದಾರೆ.
ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರಿಬ್ಬರಿಗೂ ನಿಷೇಧಿತ ಸಂಘಟನೆಗಳು ಮತ್ತು ಇತರೆ ಸಂಘಟನೆಗಳ ಜೊತೆ ಸಂಪರ್ಕವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಯ್ಯಪ್ಪ ತಿಳಿಸಿದ್ದಾರೆ.
ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಮಡಿಕೇರಿಗೆ ಭೇಟಿ ನೀಡಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ