ಸೆ.1 ರಂದು ಕೊಡಗಿನ ಚೆಟ್ಟಳ್ಳಿಯಲ್ಲಿ ಬೊಡಿನಮ್ಮೆ!
ಮಡಿಕೇರಿ, ಆಗಸ್ಟ್ 19: ಒಂದು ಕಾಲದಲ್ಲಿ ಕೊಡಗಿನ ಹೆಚ್ಚಿನ ಮನೆಗಳಲ್ಲಿ ಕೋವಿಗಳಿರುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೆಗಲ ಮೇಲೆ ಕೋವಿಯನ್ನಿಟ್ಟುಕೊಂಡು ಶಿಕಾರಿಗೆ ಹೋಗುತ್ತಿದ್ದವರು ಕಾಣಸಿಗುತ್ತಿದ್ದರು. ಕಾಡಿನಿಂದ ನಾಡಿಗೆ ಬಂದು ಕಾಟ ಕೊಡುತ್ತಿದ್ದ ಹುಲಿಯನ್ನು ಗುಂಡಿಟ್ಟು ಕೊಂದರೆ ಅವನನ್ನು ಬೇಟೆಗಾರ ಎಂದು ಕರೆಯಲಾಗುತ್ತಿತ್ತಲ್ಲದೆ, ಹುಲಿ ಪಕ್ಕ ನಿಲ್ಲಿಸಿ ಮದುವೆ ಮಾಡಿ ಊರ ತುಂಬಾ ಮೆರವಣಿಗೆ ಮಾಡಲಾಗುತ್ತಿತ್ತು. ಇದನ್ನು ಕೊಡವ ಭಾಷೆಯಲ್ಲಿ ನರಿಮಂಗಲ ಎಂದು ಕರೆಯಲಾಗುತ್ತಿತ್ತು.
ಇನ್ನು ಮಳೆಗಾಲದಲ್ಲಿ ಗದ್ದೆಕೆಲಸದಲ್ಲಿ ನಿರತರಾಗುತ್ತಿದ್ದರಿಂದ ಕೋವಿಗಳಿಗೆ ವಿರಾಮ. ಮಳೆಗಾಲ ಕಳೆಯುತ್ತಿದ್ದಂತೆಯೇ ಮತ್ತೆ ಕೋವಿಯನ್ನು ಹೆಗಲಿಗೇರಿಸಿಕೊಂಡು, ಬೇಟೆಗೆ ತೆರಳಿ ಕಾಡು ಪ್ರಾಣಿಗಳನ್ನು ಬೇಟೆ ಮಾಡಿ ತರಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಬೇಟೆ ನಿಷೇಧಿಸಲಾಗಿದೆ.

ಕಳೆದ ಕೆಲವು ದಶಕಗಳಿಂದ ಕೈಲ್ ಮುಹೂರ್ತ ಹಬ್ಬದ ಸಂದರ್ಭ ಇಲ್ಲಿನವರು ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಿ ಅದರಲ್ಲಿ ಗೆದ್ದವನಿಗೆ ಗುರಿಕಾರ ಎಂಬ ಪಟ್ಟವೂ ನೀಡಲಾಗುತ್ತಿದೆ. ಇದು ಸಾಮಾನ್ಯವಾಗಿ ಎಲ್ಲ ಗ್ರಾಮಗಳಲ್ಲಿ ನಡೆಯುತ್ತಾ ಬಂದಿತ್ತು. ಇದರಲ್ಲಿ ಪುರುಷರು, ಮಹಿಳೆಯರೆನ್ನದೆ ಎಲ್ಲರಿಗೂ ಅವಕಾಶ ನೀಡುತ್ತಾ ಬರಲಾಗುತ್ತಿದೆ. ಇದೆಲ್ಲದರ ನಡುವೆ ಕಳೆದ ನಾಲ್ಕು ವರ್ಷಗಳಿಂದ ಕೈಲ್ ಪೆಳ್ವ ಹಬ್ಬದ ಅಂಗವಾಗಿ ಪುತ್ತರಿರ ಕುಟುಂಬಸ್ಥರು ಸೆ.1 ರಂದು ರಾಜ್ಯಮಟ್ಟದ ಬೊಡಿನಮ್ಮೆ(ಕೋವಿ ಹಬ್ಬ)ಯನ್ನು ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದಾರೆ.
ಈ ತೋಟದ ಕೋವಿಯಿಂದ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ವರ್ಧೆ ಹಾಗೂ ಪಿಸ್ತೂಲ್ ರಿವಾಲ್ವರ್, ಏರ್ರೈಫಲ್ ನಿಂದ ಗುರಿಯಿಟ್ಟು ಹೊಡೆಯುವ ಸ್ವರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುತ್ತದೆ. ಕೋವಿ ಲೈಸನ್ಸ್ ಹೊಂದಿರುವ ಸಾರ್ವಜನಿಕರೆಲ್ಲರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಮಾಹಿತಿಗೆ 9901014607, 9845781899 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.












Click it and Unblock the Notifications