ಏಪ್ರಿಲ್ 22 ರಿಂದ ಬ್ಯಾಂಕ್ ಅವಧಿಯಲ್ಲಿ ಬದಲಾವಣೆ
ಮಡಿಕೇರಿ, ಏಪ್ರಿಲ್ 21; ಜನರನ್ನು ಕಂಗೆಡಿಸಿರುವ ಕೊರೊನಾ ವೈರಸ್ನ ಎರಡನೇ ಅಲೆಯ ಸೋಂಕು ಹರಡದಂತೆ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿ ಹೊರಡಿಸಿದೆ.
ಬುಧವಾರ ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಬ್ಯಾಂಕುಗಳ ಶಾಖೆಗಳು ವಲಯ, ಕ್ಷೇತ್ರೀಯ ಕಾರ್ಯಾಲಯಗಳಿಗೆ 2021ರ ಏಪ್ರಿಲ್ 21 ರಂದು ನೀಡಿದ ನಿರ್ದೇಶನದಂತೆ ಬ್ಯಾಂಕುಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್. ಕೆ. ಬಾಲಚಂದ್ರ ಹೇಳಿದ್ದಾರೆ.
ಬ್ಯಾಂಕಿಂಗ್ ವ್ಯವಹಾರದ ಸಮಯ ವಾರದ ಎಲ್ಲಾ ದಿನಗಳಲ್ಲಿ (ಭಾನುವಾರ, 2ನೇ ಶನಿವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಕೆಲಸದ ಸಮಯವು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ (ಆಡಳಿತ ಕಚೇರಿಗಳು ಸೇರಿದಂತೆ).

ಶಾಖೆಗಳು ಕೇವಲ ಮೂಲಭೂತ ಬ್ಯಾಂಕಿಂಗ್ ಸೇವೆಗಳಾದ ನಗದು ವ್ಯವಹಾರಗಳು, ಕ್ಲಿಯರಿಂಗ್ ಸೇವೆಗಳು, ಹಣ ವರ್ಗಾವಣೆ ಹಾಗೂ ಸರ್ಕಾರಿ ವ್ಯವಹಾರಗಳಿಗಾಗಿ ಮಾತ್ರ ತೆರೆದಿರುತ್ತದೆ.
ಗ್ರಾಹಕರು ಡಿಜಿಟಲ್ ಸೇವೆಗಳಾದ ಎಟಿಎಂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಸೇವೆಗಳನ್ನು ಉಪಯೋಗಿಸಿಕೊಂಡು ಬ್ಯಾಂಕುಗಳಿಗೆ ಭೇಟಿ ನೀಡುವ ಸಂದರ್ಭವನ್ನು ಕಡಿಮೆಗೊಳಿಸಲು ಕೋರಲಾಗಿದೆ.
ಬ್ಯಾಂಕಿಂಗ್ ಮಿತ್ರರ ಸೇವೆಗಳನ್ನು (ಅಂಚೆ ಕಚೇರಿಯ ಬ್ಯಾಂಕ್ ಮಿತ್ರರ ಸೇವೆಯೂ ಸೇರಿ) ಆಯಾಯ ಗ್ರಾಮಗಳಲ್ಲಿ ಲಭ್ಯವಿರುವುದರಿಂದ ಗ್ರಾಹಕರು ತಮ್ಮ ತಮ್ಮ ಗ್ರಾಮಗಳಲ್ಲಿ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.
ಸಾರ್ವಜನಿಕರು ಬ್ಯಾಂಕಿಂಗ್ ವ್ಯವಹಾರಗಳಿಗೆ ಶಾಖೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಇತರ ಕೋವಿಡ್ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಮನವಿ ಮಾಡಿದ್ದಾರೆ.












Click it and Unblock the Notifications