ಮಡಿಕೇರಿಯಲ್ಲಿ ಎಟಿಎಂ ಮಾಹಿತಿ ಪಡೆದು ಹಣದೋಚಿದ ಅಪರಿಚಿತ
ಮೋಸ ಹೋಗುವವರು ಇರುವವರೆಗೂ, ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಮಡಿಕೇರಿ ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.
ಮಡಿಕೇರಿ, ಮೇ 19: ಬ್ಯಾಂಕಿನವರೆಂದು ಸುಳ್ಳು ಹೇಳಿಕೊಂಡು, ಎಟಿಎಂ ಕಾರ್ಡಿನ ವಿವರ ಪಡೆದು ಹಣ ದೋಚುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಈ ಬಗ್ಗೆ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸುವ ಕೆಲಸವಾಗುತ್ತಿದ್ದರೂ, ಇಂದಿಗೂ ಮೋಸ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದಕ್ಕೊಂದು ತಾಜಾ ನಿದರ್ಶನ ಮಡಿಕೇರಿಯಲ್ಲಿ ನಡೆದಿದೆ.
ಇಲ್ಲಿನ ಸೋಮವಾರಪೇಟೆಯ ತೋಳೂರುಶೆಟ್ಟಳ್ಳಿ ನಿವಾಸಿ ಡಿ.ಎಲ್. ಜಗದೀಶ್ ಎಂಬುವರು ಇದೇ ರೀತಿ ಮೋಸ ಹೋಗಿ ಹತ್ತು ಸಾವಿರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇವರ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ ನಾನು ಎಸ್ಬಿಐ ಬೆಂಗಳೂರಿನ ಗಾಂಧಿನಗರ ಶಾಖೆಯ ಮ್ಯಾನೇಜರ್ ಆಗಿದ್ದು, ನಿಮ್ಮ ಎಟಿಎಂ ಕಾರ್ಡ್ ರಿನ್ಯೂವಲ್ ಮಾಡಬೇಕು. ದಯವಿಟ್ಟು ನಿಮ್ಮ ಎಟಿಎಂ ಸಂಖ್ಯೆ ನೀಡಿ ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ.[ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನ ವಿತರಣೆಗೆ ಚಾಲನೆ]

ತಕ್ಷಣಕ್ಕೆ ಏನೂ ತೋಚದ ಅವರು ಮೋಸ ಹೋಗುತ್ತಿದ್ದೇನೆಂಬುದು ಗೊತ್ತಾಗದೆ, ತಮ್ಮ ಎಟಿಎಂ ಸಂಖ್ಯೆಯನ್ನು ನೀಡಿದ್ದಾರೆ. ಇದಾಗಿ ಕೆಲ ನಿಮಿಷಗಳ ನಂತರ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ ಏರ್ಟೆಲ್ ಮನಿ ಹೆಸರಿನಿಂದ ಒಮ್ಮೆಗೆ ರೂ. 8,899 ಹಾಗೂ ಮತ್ತೊಮ್ಮೆ 1000 ರೂಪಾಯಿ ಡ್ರಾ ಮಾಡಲಾಗಿದೆ.
ಇದರಿಂದ ಆತಂಕಗೊಂಡ ಜಗದೀಶ್ ಅವರು ಮತ್ತೆ ಆ ಮೊಬೈಲ್ ಗೆ ಕರೆ ಮಾಡಿದಾಗ, ಅತ್ತಲಿಂದ ಮಾತನಾಡಿದ ವ್ಯಕ್ತಿ, ನಿಮ್ಮ ಎಟಿಎಂ ಸಮಸ್ಯೆ ಬಗೆಹರಿದಿದೆ, ನಿಮ್ಮ ಮನೆಯವರ ಎಟಿಎಂ ಸಂಖ್ಯೆ ನೀಡಿದರೆ ಅವರ ಸಮಸ್ಯೆಯನ್ನೂ ಬಗೆಹರಿಸುತ್ತೇನೆ ಎಂದಿದ್ದಾನೆ. ಆಗ ತಮ್ಮ ಎಟಿಎಂ ನಿಂದ ಹಣ ಡ್ರಾ ಆಗಿರುವ ಕುರಿತು ದಬಾಯಿಸಿ, ಪೊಲೀಸರಿಗೆ ದೂರು ನೀಡುವ ಬಗ್ಗೆ ಹೇಳುತ್ತಿದ್ದಂತೆಯೇ ಕರೆಯನ್ನು ಕಡಿತಗೊಳಿಸಿದ ವ್ಯಕ್ತಿ ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ.
ಈಗಾಗಲೇ ಹಲವರಿಗೆ ಇಂತಹ ಅನುಭವಗಳಾಗಿದ್ದು, ಬ್ಯಾಂಕ್ ಅಧಿಕಾರಿಗಳು ಕೂಡ ಯಾರಿಗೂ ಬ್ಯಾಂಕ್ ಖಾತೆಯ ಬಗ್ಗೆಯಾಗಲೀ ಎಟಿಎಂ ಬಗ್ಗೆಯಾಗಲೀ ಮಾಹಿತಿ ನೀಡಬೇಡಿ ಎಂಬ ಸಂದೇಶಗಳನ್ನು ಮೊಬೈಲ್ ಗಳಿಗೆ ರವಾನಿಸುತ್ತಿದ್ದಾರೆ. ಆದರೂ ಈ ಬಗ್ಗೆ ಅರಿವಿಲ್ಲದ ಹಲವರು, ಅಪರಿಚಿತ ವ್ಯಕ್ತಿಗಳು ಮಾಡುವ ಕರೆಯನ್ನು ನಂಬಿ ಮೋಸ ಹೋಗುತ್ತಿದ್ದಾರೆ.
ದಯವಿಟ್ಟು ನಿಮ್ಮಬ್ಯಾಂಕ್ ಖಾತೆಗೆ ಸಂಬಂಧಿಸಿಸದಂತೆ ಯಾವುದೇ ವ್ಯಕ್ತಿ ಕರೆ ಮಾಡಿ ವಿವರ ಕೇಳಿದರೂ ನೀಡಬೇಡಿ, ಅನುಮಾನವಿದ್ದರೆ ನಿಮ್ಮ್ ಬ್ಯಾಂಕ್ ಖಾತೆಗೆ ಭೇಟಿ ನೀಡಿ, ಅಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳಿ.
{promotion-urls}












Click it and Unblock the Notifications