ತಲಕಾವೇರಿಯಲ್ಲಿ ಅಕ್ಟೋಬರ್ 18ರಂದು ಕಾವೇರಿ ತೀರ್ಥೋದ್ಭವ
ಮಡಿಕೇರಿ, ಅಕ್ಟೋಬರ್ 16 : ಜೀನವದಿ ಕಾವೇರಿಯ ತೀರ್ಥೋದ್ಭವಕ್ಕೆ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಿದ್ಧತೆ ನಡೆದಿದೆ. ಅಕ್ಟೋಬರ್ 18ರಂದು ಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ.
ಅಕ್ಟೋಬರ್ 18ರಂದು ರಾತ್ರಿ 12.59ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿದೆ. ತಲಕಾವೇರಿಯಲ್ಲಿ ಅಕ್ಟೋಬರ್ 17ರ ಬೆಳಗ್ಗೆಯಿಂದಲೇ ವಿವಿಧ ಪೂಜಾ ವಿಧಾನಗಳು ನಡೆಯಲಿವೆ.

ಅಕ್ಟೋಬರ್ 17ರಂದು ಸಂಜೆ ಮಹಾಮಂಗಳಾರತಿ ನಡೆಯಲಿದ್ದು, ಬಳಿಕ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ. ರಾತ್ರಿ 10 ಗಂಟೆಯಿಂದ ಕಾವೇರಿ ತೀರ್ಥೋದ್ಭವದ ತನಕ ಮಂತ್ರ ಪಠಣ ನಡೆಯಲಿದೆ.
ಈ ಬಾರಿ ಮಧ್ಯರಾತ್ರಿ ತೀರ್ಥೋದ್ಭವ ನಡೆಯಲಿದೆ. ಆದ್ದರಿಂದ, ಭಕ್ತಾದಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಿಂದ ತಲಕಾವೇರಿ ಕ್ಷೇತ್ರದ ತನಕ 8 ಕಿ. ಮೀ. ದೂರಕ್ಕೂ ಟ್ಯೂಬ್ ಲೈಟ್ ಅಳವಡಿಸಲಾಗಿದೆ.
ತೀರ್ಥೋದ್ಭವ ನಡೆಯುವ ಕುಂಡಿಕೆ ಸುತ್ತಲೂ ಬೃಹತ್ ಎಲ್ಇಡಿ ಬಲ್ಬ್ ಅಳವಡಿಸಲಾಗಿದೆ. ಪ್ಲಾಸ್ಟಿಕ್ ಬಾಟಲ್ ಹಿಡಿದು ತೀರ್ಥ ತೆಗೆದುಕೊಂಡು ಹೋಗಲು ಅವಕಾಶವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಕಾವೇರಿ ತೀರ್ಥೋದ್ಭವದ ಬಳಿಕ ಒಂದು ತಿಂಗಳ ಕಾಲ ಭಾಗಮಂಡಲದಲ್ಲಿ ಕಾವೇರಿ ಜಾತ್ರೆ ನಡೆಯುತ್ತದೆ. ಸಂಗಮದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಾರೆ. ತಲಕಾವೇರಿಗೆ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳದಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಈ ವರ್ಷ ಬೆಳಗಿನ ಜಾವ 12.59ಕ್ಕೆ ಕಾವೇರಿ ತೀರ್ಥೋದ್ಭವ ನಡೆಯಲಿದೆ. ಆದ್ದರಿಂದ, ಭಕ್ತರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆ ಇದೆ. ಭೂ ಕುಸಿತ ಮತ್ತು ಪ್ರವಾಹದ ನಂತರ ಕಾವೇರಿ ಜಾತ್ರೆಗೆ ಆಗಮಿಸುವ ಹೊರ ರಾಜ್ಯದ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ.












Click it and Unblock the Notifications