ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಗೆ 'ಕೊಡಗು ರತ್ನ'
ಮಡಿಕೇರಿ, ಅಕ್ಟೋಬರ್ 19: ನಟ ಶಿವರಾಜಕುಮಾರ್ ಅವರಿಗೆ ಬಾರವಿ ಕಾವೇರಿ ಕನ್ನಡ ಸಂಘವು ಕೊಡಗು ರತ್ನ ಬಿರುದು ನೀಡಿ ಸನ್ಮಾನಿಸಿದೆ. ಕುಶಾಲನಗರದ ಬಾರವಿ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ಕೊಪ್ಪ ಕಾವೇರಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಳ್ಳಿ ಕಿರೀಟ ತೊಡಿಸಿ, ಕಾವೇರಿ ಮಾತೆ ವಿಗ್ರಹ ನೀಡುವ ಮೂಲಕ ಬಿರುದು ಪ್ರದಾನ ಮಾಡಲಾಯಿತು.
ಆ ನಂತರ ಮಾತನಾಡಿದ ನಟ ಶಿವರಾಜಕುಮಾರ್, ಜೀವನದಿ ಕಾವೇರಿ ಸಂರಕ್ಷಣೆ ವಿಚಾರದಲ್ಲಿ ರಾಜ್ಯದ ಜನತೆ ಜಾತಿ, ಧರ್ಮ, ಭಾಷೆಯ ಹಂಗು ತೊರೆದು ಸಂಘಟಿತರಾಗಿ ಹೋರಾಡುವುದು ಅಗತ್ಯ ಎಂದು ಹೇಳಿದರು.
ಮಹಾದಾಯಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಈ ವಿಚಾರವಾಗಿ ನೆರೆ ರಾಜ್ಯ ಹಾಗೂ ಅಲ್ಲಿನ ಜನತೆ ಬಗ್ಗೆ ದ್ವೇಷ ಸಾಧನೆ ಸಲ್ಲದು. ಸಾರ್ವಜನಿಕ ಸ್ವತ್ತಿಗೆ ಹಾನಿಯುಂಟು ಮಾಡದೆ ಶಾಂತಿಯುತವಾಗಿ ಹೋರಾಟದಲ್ಲಿ ಪಾಲ್ಗೊಂಡು, ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ನೆಲೆಸಿರುವ ಎಲ್ಲರೂ ಜೀವನದಿಗಳ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಋಣವನ್ನು ತೀರಿಸಬೇಕಿದೆ ಎಂದರು.[ಯುವ ದಸರಾದಲ್ಲಿ ಟುವ್ವಿ ಟುವ್ವಿ ಎಂದ ಶಿವರಾಜ್ ಕುಮಾರ್]
ಮಳೆಂ ಕೊರತೆ ಕಾರಣಕ್ಕೆ ರಾಜ್ಯದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಉತ್ತಮ ಮಳೆಯಾಗಿ ರೈತರು ಹಾಗೂ ಜನತೆಯ ಸಂಕಷ್ಟ ಪರಿಹಾರವಾಗಲಿ ಎಂದು ಹೇಳಿದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ಕೇಂದ್ರ ಸರಕಾರ ಗಂಗಾ ನದಿ ಶುದ್ಧೀಕರಣಕ್ಕೆ ಯೋಜನೆ ರೂಪಿಸಿರುವಂತೆ ಕಾವೇರಿ ನದಿ ಸಂರಕ್ಷಣೆಗೆ ಕೂಡ ಯೋಜನೆ ರೂಪಿಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.[ಸಿನ್ಮಾಕ್ಕೂ ಮುನ್ನ 'ಸಂತ್ಯಾಗ ನಿಂತಾನ ಕಬೀರ' ಪುಸ್ತಕ ಬಿಡುಗಡೆ]
ಟಿಬೆಟಿಯನ್ ನಿರಾಶ್ರಿತರ ಶಿಬಿರದ ಬೌದ್ಧ ಧರ್ಮಗುರು ಕರ್ಮ ರಿಂಪೋಚೆ, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ರಾಮಣ್ಣ, ಕುಶಾಲನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕರಾದ ಆರ್.ಎಸ್.ಕಾಶೀಪತಿ, ಉದ್ಯಮಿ ಸಾತಪ್ಪನ್, ಬಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.[ಮೂಢನಂಬಿಕೆ: ಮುಖ್ಯಮಂತ್ರಿಗಳಿಗೆ ನಟ ಶಿವಣ್ಣ ನೀಡಿದ ಗಂಭೀರ ಸಲಹೆ]
ಇದಕ್ಕೂ ಮುನ್ನ ಶಿವರಾಜಕುಮಾರ್ ಕಾವೇರಿ ಮಾತೆಯ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಿದರು. ಚಲನಚಿತ್ರ ಗೀತೆಗಳನ್ನು ಹಾಡಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.