ಮಡಿಕೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮುಂದೆ ಸವಾಲಿನ ಮಹಾಪೂರ!
ಮಡಿಕೇರಿ, ಜುಲೈ 19: ಕಳೆದೊಂದು ವರ್ಷದಿಂದ ಕೊಡಗಿನಲ್ಲಿ ಜಿಲ್ಲಾ ಅಧ್ಯಕ್ಷಗಾದಿಗಾಗಿ ಆಕಾಂಕ್ಷಿಗಳು ತೆರೆಮರೆಯ ಕಸರತ್ತು ನಡೆಸಿದ್ದರೂ ಕೆಪಿಸಿಸಿ ದಕ್ಷಿಣಕೊಡಗಿನ ಕಾಂಗ್ರೆಸ್ ಮುಖಂಡ ಶಿವು ಮಾದಪ್ಪ ಅವರಿಗೆ ಸ್ಥಾನ ಕರುಣಿಸಿ ಕೈ ತೊಳೆದುಕೊಂಡಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ.
ಪ್ರಭಾರ ಅಧ್ಯಕ್ಷರಾಗಿದ್ದ ಟಿ.ಪಿ.ರಮೇಶ್ ಅವರು ಡಿಸಿಸಿ(ಜಿಲ್ಲಾ ಕಾಂಗ್ರೆಸ್ ಸಮಿತಿ) ಅಧ್ಯಕ್ಷರಾಗಲು ತೆರೆಮರೆಯ ಪ್ರಯತ್ನ ನಡೆಸಿದ್ದರು, ಇದಕ್ಕಾಗಿ ಒಂದಿಷ್ಟು ಮುಖಂಡರ ಸಹಿ ಪಡೆದು ಕೆಪಿಸಿಸಿ ಅಂಗಳಕ್ಕೆ ತಲುಪಿಸಿದ್ದರು. ಇದು ಕಾಂಗ್ರೆಸ್ ನ ಇತರೆ ನಾಯಕರ ಅಸಮಾಧಾನಕ್ಕೂ ಕಾರಣವಾಗಿತ್ತು.
ಈ ಹಿಂದೆಯೇ ಹಿರಿಯ ಮುಖಂಡ ಮಿಟ್ಟುಚಂಗಪ್ಪ ಅವರಿಗೆ ಡಿಸಿಸಿ ಅಧ್ಯಕ್ಷ ಸ್ಥಾನ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಅದಕ್ಕಿಂತ ಮೊದಲು ಕಾಂಗ್ರೆಸ್ಸಿನಲ್ಲಿರುವ ಕೊಡವೇತರ ಮುಖಂಡರು ಪ್ರತಿಭಾರಿಯೂ ಕೊಡವರಿಗೆ ಪ್ರಾತಿನಿಧ್ಯ ನೀಡಲಾಗುತ್ತಿದ್ದು, ಈ ಬಾರಿ ಬೇರೆ ಸಮುದಾಯದವರಿಗೆ ಆದ್ಯತೆ ನೀಡಿ ಎಂಬ ಒತ್ತಡವನ್ನು ತಂದಿದ್ದರು.
ಇದನ್ನೆಲ್ಲ ಗಮನಿಸಿದ ಮಿಟ್ಟು ಚಂಗಪ್ಪ ಅವರು ತಮಗೆ ಒಲಿದು ಬಂದ ಅಧ್ಯಕ್ಷ ಸ್ಥಾನವನ್ನು ಸಾರಾಸಗಟಾಗಿ ನಿರಾಕರಿಸಿಬಿಟ್ಟರು. ಇದು ಕೆಪಿಸಿಸಿಯ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿತ್ತು.
ಮುಂದಿನ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರ ಬರುತ್ತಿರುವುದರಿಂದ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಬಿಜೆಪಿ ವಿರುದ್ಧ ಪ್ರಬಲ ತಂತ್ರಗಳನ್ನು ಒಡ್ಡುವಂತಹ ನಾಯಕರು ಬೇಕಾಗಿರುವುದರಿಂದ ಜತೆಗೆ ಕಾಂಗ್ರೆಸ್ಸಿನಲ್ಲಿರುವ ಆಕಾಂಕ್ಷಿಗಳಲ್ಲಿ ಯಾರಿಗಾದರೂ ಒಬ್ಬರಿಗೆ ಸ್ಥಾನ ನೀಡಿದರೂ ಇತರರು ಮುನಿಸಿಕೊಳ್ಳುವ ಕಾರಣಗಳು ಇದ್ದಿದ್ದರಿಂದ ದಕ್ಷಿಣ ಕೊಡಗಿನಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಉತ್ಸಾಹಿಯಾಗಿದ್ದ ಕೊಡವ ಸಮುದಾಯದ ಮುಕ್ಕಾಟೀರ ಶಿವುಮಾದಪ್ಪ ಅವರನ್ನು ತಂದು ಕೂರಿಸಲಾಗಿದೆ. ಆ ಮೂಲಕ ಅಧ್ಯಕ್ಷ ಸ್ಥಾನದ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

ಜಿಲ್ಲಾಧ್ಯಕ್ಷರ ಮುಂದೆ ಸವಾಲು
ಈಗ ಸವಾಲು ನೂತನ ಅಧ್ಯಕ್ಷರಾಗಿರುವ ಶಿವು ಮಾದಪ್ಪ ಅವರ ಮುಂದಿದ್ದು, ಈಗಾಗಲೇ ಅಸಮಾಧಾನಗೊಂಡಿರುವ ಒಂದಷ್ಟು, ತಟಸ್ಥವಾಗಿರುವ ಮತ್ತೊಂದಷ್ಟು ನಾಯಕರು, ಕಾರ್ಯಕರ್ತರನ್ನೆಲ್ಲ ಜೊತೆಯಲ್ಲಿ ಕರೆದೊಯ್ದುಕೊಂಡು ಹೋಗಬೇಕಾಗಿದೆ. ಕಾರಣ ಅವರ ಶಕ್ತಿ ಸಾಮರ್ಥ್ಯವನ್ನು ಅಲ್ಪಾವಧಿಯಲ್ಲಿ ತೋರಿಸಬೇಕಾಗಿದೆ. ಮುಂದಿರುವುದು ಚುನಾವಣಾ ಕಾಲವಾಗಿದೆ. ಕೇವಲ ದಕ್ಷಿಣಕೊಡಗಿಗಷ್ಟೆ ಸೀಮಿತವಾಗಿದ್ದ ಅವರು ಈಗ ನಾಯಕತ್ವವನ್ನು ಜಿಲ್ಲೆಯಾದ್ಯಂತ ತೋರಿಸಿಕೊಡಬೇಕಾಗಿದೆ.

ಪಕ್ಷ ಸಂಘಟನೆಯ ಗುರಿ
ಇದೀಗ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಂಪೂರ್ಣ ಬೆಂಬಲವನ್ನು ಅವರಿಗೆ ನೀಡುವುದಾಗಿ ಹೇಳಿದೆ. ನಗರಾಧ್ಯಕ್ಷರಾದ ಕೆ.ಯು.ಅಬ್ದುಲ್ರಜಾಕ್ ಅವರು ನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಶಿವುಮಾದಪ್ಪ ಅವರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದು, ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದ್ದಾರೆ.

ಸಂಪೂರ್ಣ ಬೆಂಬಲ
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರ ಉಪಾಧ್ಯಕ್ಷರಾದ ಎಂ.ಹೆಚ್.ಜಫ್ರುಲ್ಲ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ಪ್ರಮುಖರಾದ ಎಸ್.ಎನ್.ವಸಂತ್ ಭಟ್, ಎ.ಜಿ.ರಮೇಶ್, ಸ್ವರ್ಣಲತಾ, ಪುಷ್ಪಪೂಣಚ್ಚ, ಜಗ್ಗ, ಯತೀಶ್, ಸುನೀಲ್, ಚಂದ್ರ, ಇಬ್ರಾಹಿಂ, ಇಸ್ಮಾಯಿಲ್, ಮುನೀರ್ ಮಚಾರ್, ಎಂ.ಎಂ.ಹನೀಫ್, ಮೊಣ್ಣಪ್ಪ ಮೊದಲಾದವರು ಶಿವು ಮಾದಪ್ಪ ಅವರಿಗೆ ಎಲ್ಲ ರೀತಿಯಲ್ಲಿಯೂ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದ್ದಾರೆ.

ಬಿಜೆಪಿ ಭದ್ರಕೋಟೆಗೆ ಲಗ್ಗೆ ಇಡುತ್ತಾರಾ?
ಈಗಾಗಲೇ ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಹೀಗಿರುವಾಗ ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ ಮೂಲಕ ಕಾಂಗ್ರೆಸ್ಸಿಗರು, ಬಿಜೆಪಿಯ ಭದ್ರಕೋಟೆಗೆ ಯಾವ ರೀತಿಯಲ್ಲಿ ಲಗ್ಗೆಯಿಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications