ಕೊವಿಡ್-19 ಪರೀಕ್ಷೆಗೂ ಮೊದಲು ಅಖಿಲೇಶ್ ಯಾದವ್ ಪ್ರಚಾರದಿಂದ ಆತಂಕ!?
ಲಕ್ನೋ, ಡಿಸೆಂಬರ್ 18: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಭೀತಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
'ನನ್ನ ಪತ್ನಿಗೆ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ. ತಾವು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಗೃಹ ದಿಗ್ಬಂಧನಕ್ಕೆ ಒಳಗಾಗಿರುವುದಾಗಿ' ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ. ಆದರೆ, ಅವರು ಟ್ವೀಟ್ ಮಾಡಿರುವ ಮರುದಿನ ಅಂದರೆ ಗುರುವಾರ ಚುನಾವಣಾ ಪ್ರಚಾರ ನಡೆಸಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಅಖಿಲೇಶ್ ಯಾದವ್ ಬಳಿಕ ಯುಪಿ ಸಿಎಂ ವಿರುದ್ಧ ಪ್ರಿಯಾಂಕಾ ಗಂಭೀರ ಆರೋಪ
"ನಾನು ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ನಾನು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದು, ಯಾವುದೇ ಸೋಂಕಿನ ಲಕ್ಷಣಗಳನ್ನು ಹೊಂದಿರಲಿಲ್ಲ. ನನ್ನ ಹಾಗೂ ಇತರರ ಸುರಕ್ಷತೆ ದೃಷ್ಟಿಯಿಂದ ನಾನು ಸ್ವಯಂ ಪ್ರೇರಿತರಾಗಿ ಐಸೋಲೇಟ್ ಆಗುತ್ತಿದ್ದೇನೆ," ಎಂದು ಅಖಿಲೇಶ್ ಯಾದವ್ ಪತ್ನಿ ಹಾಗೂ ಮಾಜಿ ಸಂಸದೆ ಡಿಂಪಲ್ ಯಾದವ್ ಟ್ವೀಟ್ ಮಾಡಿದ್ದಾರೆ. ಇತ್ತೀಚಿಗೆ ತಮ್ಮನ್ನು ಭೇಟಿ ಮಾಡಿದ ಎಲ್ಲರೂ ಮುನ್ನೆಚ್ಚರಿಕೆ ಕ್ರಮವಾಗಿ ಕೊವಿಡ್-19 ಸೋಂಕಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಡಿಂಪಲ್ ಯಾದವ್ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಅಖಿಲೇಶ್?
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೊವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಂದೆ ಮುಲಾಯಂ ಸಿಂಗ್ ಯಾದವ್ ಲಸಿಕೆ ಪಡೆಯಲು ನಿರ್ಧರಿಸಿದ ನಂತರ ಅಖಿಲೇಶ್ ಕೂಡ ಲಸಿಕೆ ಹಾಕಿಸಿಕೊಳ್ಳುವುದಾಗಿ ಹೇಳಿದ್ದರು. ಇದಕ್ಕೂ ಮೊದಲು ಕೇಂದ್ರ ಸರ್ಕಾರ ನೀಡುತ್ತಿರುವ ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ಅಖಿಲೇಶ್ ಹೇಳಿದ್ದರು. ಅಖಿಲೇಶ್ ಯಾದವ್ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಅಖಿಲೇಶ್ ಯಾದವ್ ಪ್ರಚಾರ ಕಾರ್ಯದಿಂದ ಹೆಚ್ಚಿತಾ ಆತಂಕ?
ತಮ್ಮ ಪತ್ನಿಗೆ ಕೊರೊನಾವೈರಸ್ ಸೋಂಕು ತಗುಲಿದ ಹಿನ್ನೆಲೆ ಈಗ ಅಖಿಲೇಶ್ ಯಾದವ್ ಕೂಡಾ ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ. ಇದರ ಮಧ್ಯೆ ಗುರುವಾರ ಅಲಿಗಢದಲ್ಲಿ ರಾಷ್ಟ್ರೀಯ ಲೋಕದಳದ ನಾಯಕ ಜಯಂತ್ ಚೌಧರಿ ಜೊತೆಗೆ ಜಂಟಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅಖಿಲೇಶ್ ಮಾತನಾಡಲಿದ್ದಾರೆ. ಈ ಹಿಂದೆ ಕಳೆದ ಭಾನುವಾರ ಲಕ್ನೋ ಹಾಗೂ ಸೋಮವಾರ ಉತ್ತರ ಪ್ರದೇಶದ ಕೇಂದ್ರ ಮತ್ತು ಪಶ್ಚಿಮ ವಲಯಗಳಲ್ಲಿ ಪ್ರಚಾರ ನಡೆಸಿದ್ದರು. ಇದು ಈಗ ಒಂದಿಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಮೋದಿ ಫೋಟೋ ಇರುವವರೆಗೂ ನಾನು ಲಸಿಕೆ ಪಡೆಯುವುದಿಲ್ಲ
"ಕೊರೊನಾವೈರಸ್ ಲಸಿಕೆ ನೀಡಿದ ನಂತರದಲ್ಲಿ ಕೊಡುವ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋವನ್ನು ಹಾಕಲಾಗಿದೆ. ಈ ಪ್ರಮಾಣಪತ್ರದಲ್ಲಿ ಮೋದಿ ಫೋಟೋವನ್ನು ತೆಗೆದು ಹಾಕುವವರೆಗೂ ತಾವು ಲಸಿಕೆಯನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ಅಖಿಲೇಶ್ ಯಾದವ್ ಈ ಹಿಂದೆ ಹೇಳಿಕೆ ನೀಡಿದ್ದರು. ಈಗಾಗಲೇ ನನಗೆ ಕೊವಿಡ್-19 ಸೋಂಕು ತಗುಲಿದ್ದು, ವೈಜ್ಞಾನಿಕ ಅಧ್ಯಯನದ ಪ್ರಕಾರ ಮತ್ತೊಮ್ಮ ಸೋಂಕು ಅಂಟಿಕೊಳ್ಳುವುದಿಲ್ಲ. ಲಸಿಕೆ ಪಡೆದುಕೊಂಡವರಿಗೆ ಸೋಂಕು ಅಂಟಬಹುದು, ಆದರೆ ಈ ಮೊದಲು ಸೋಂಕು ಹೊಂದಿದ್ದವರಿಗೆ ಎರಡನೇ ಬಾರಿ ಕೊರೊನಾವೈರಸ್ ಅಂಟಿಕೊಳ್ಳುವುದಿಲ್ಲ. ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಬದಲಿಗೆ ರಾಷ್ಟ್ರಧ್ವಜದ ಭಾವಚಿತ್ರವನ್ನು ಹಾಕಲಿ ಆಗ ನಾನು ಲಸಿಕೆ ಪಡೆದುಕೊಳ್ಳುತ್ತೇನೆ," ಎಂದು ಅಖಿಲೇಶ್ ಯಾದವ್ ಹೇಳಿದ್ದರು.
ತೀವ್ರ ಟೀಕೆಗೆ ಕಾರಣವಾಗಿದ್ದ ಅಖಿಲೇಶ್ ಯಾದವ್ ಟ್ವೀಟ್
ದೇಶದಲ್ಲಿ ಮೊದಲ ಬಾರಿಗೆ 2021ರ ಜನವರಿ 16ರಂದು ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಲಾಗಿತ್ತು. ಆದರೆ ಅಂದು, ಅಖಿಲೇಶ್ ಯಾದವ್ ಯಾವುದೇ ಕಾರಣಕ್ಕೂ "ಬಿಜೆಪಿಯ ಲಸಿಕೆ"ಯನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯು ಆಡಳಿತ ಪಕ್ಷದ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಅದೇ ದಿನ ತಮ್ಮ ಟ್ವೀಟ್ ಸಂದೇಶವನ್ನು ಅವರು ತಿದ್ದುಪಡಿ ಮಾಡಿಕೊಂಡಿದ್ದರು. "ನಾನು ಲಸಿಕೆ ಅಭಿವೃದ್ಧಿಪಡಿಸುವ ಯಾವುದೇ ವಿಜ್ಞಾನಿ ಅಥವಾ ಲಸಿಕೆ ತಯಾರಿಸಲು ಸಹಾಯ ಮಾಡುವ ಯಾವುದೇ ವ್ಯಕ್ತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಿಲ್ಲ. ಬಿಜೆಪಿ ತೆಗೆದುಕೊಂಡ ನಿರ್ಧಾರಗಳಿಂದ ಜನರಿಗೆ ಪಕ್ಷದ ಮೇಲೆ ನಂಬಿಕೆಯಿಲ್ಲದ ಕಾರಣ ನಾನು ಬಿಜೆಪಿ ಮೇಲೆ ಪ್ರಶ್ನೆ ಎತ್ತಿದ್ದೇನೆ," ಎಂದು ಅಖಿಲೇಶ್ ಯಾದವ್ ಬರೆದುಕೊಂಡಿದ್ದರು.
Recommended Video