ಲಖಿಂಪುರ್ ಹಿಂಸಾಚಾರ: ಆಶಿಶ್ ಜಾಮೀನು ಅರ್ಜಿ ತಿರಸ್ಕೃತ, ಅಂಕಿತ್ ದಾಸ್ ನ್ಯಾಯಾಂಗ ಬಂಧನ
ಲಕ್ನೋ, ಅಕ್ಟೋಬರ್ 13: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಮತ್ತು ಆತನ ಸ್ನೇಹಿತ ಆಶಿಶ್ ಪಾಂಡೆಯ ಜಾಮೀನು ಅರ್ಜಿಯನ್ನು ಸಿಜೆಎಂ ಕೋರ್ಟ್ ತಿರಸ್ಕರಿಸಿದೆ.
ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ಮೇಲ್ವಿಚಾರಣಾ ಸಮಿತಿಯು ಅಂಕಿತ್ ದಾಸ್ ಅವರನ್ನು ಬುಧವಾರ ಬಂಧಿಸಿದೆ. ಅಂಕಿತ್ ದಾಸ್ ಅವರು ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಒಡನಾಡಿಯಾಗಿದ್ದಾರೆ. ಇಂದು ಅವರು ಅಪರಾಧ ವಿಭಾಗದ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಅಂಕಿತ್ ದಾಸ್ ಘಟನೆ ನಡೆದ ಬಳಿಕ ತಾವು ನೇಪಾಳಕ್ಕೆ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಲಖಿಂಪುರ್ ಖೇರಿ ಘಟನೆಯ ಸಂದರ್ಭದಲ್ಲಿ ಅವರು ಫಾರ್ಚೂನರ್ ವಾಹನದಲ್ಲಿ ಆಶಿಶ್ ಮಿಶ್ರಾರ ಉಪಸ್ಥಿತಿಯನ್ನು ನಿರಾಕರಿಸಿದರು. ಘಟನಾ ಸ್ಥಳದಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಹೇಳಿದ್ದಾರೆ.
ಲಖಿಂಪುರ ಖೇರಿ ಗಲಭೆ; ಯಪಿ ಸರ್ಕಾರದ ತನಿಖೆ ಬಗ್ಗೆ ಸುಪ್ರೀಂ ಅತೃಪ್ತಿ
ಅಕ್ಟೋಬರ್ 3 ರಂದು ದಾಸ್ ಅವರ ಪಾತ್ರದ ತನಿಖೆಗಾಗಿ ಅಪರಾಧ ವಿಭಾಗವು ಆತನನ್ನು ವಶಕ್ಕೆ ಪಡೆಯಲು ಅರ್ಜಿ ಸಲ್ಲಿಸಿತ್ತು. ಅಂಕಿತ್ ದಾಸ್ ಮತ್ತು ಆತನ ಚಾಲಕ ಶೇಖರ್ ಭಾರತಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಯನ್ನು ತನಿಖಾ ಸಮಿತಿಯು ಕೋರಿತು. ಇದರದ ಬೆನ್ನಲ್ಲೆ ಆಶಿಶ್ ಮಿಶ್ರಾ ಅವರ ಆಪ್ತ ಸ್ನೇಹಿತನೆಂದು ಹೇಳಲಾಗುವ ಅಂಕಿತ್ ದಾಸ್ನನ್ನು ಲಖಿಂಪುರ್ ಸಿಜೆಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಘಟನೆ ಯಾವಾಗ ಸಂಭವಿಸಿತು?
ಅಕ್ಟೋಬರ್ 3 ರಂದು ಲಖಿಂಪುರ್ ನಗರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಟಿಕುನಿಯಾ-ಬನ್ಬೀರ್ ಪುರ್ ರಸ್ತೆಯಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ. ಪ್ರತಿಭಟನಾ ಮೆರವಣಿಗೆ ವೇಳೆ ಏಕಾಏಕಿ ಕಾರು ನುಗ್ಗಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 4 ಜನರು ಕಾರಿನಿಂದಾಗಿ ಮೃತಪಟ್ಟರೆ ಉಳಿದ 4 ಜನರು ಗಲಾಟೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರ ಮೇಲೆ ಕಾರನ್ನು ಚಲಾಯಿಸುತ್ತಿದ್ದರು ಎನ್ನುವ ಗಂಭೀರ ಆರೋಪವಿದೆ. ಘಟನೆಯ ಬಳಿಕ ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಅಸಮಾಧಾನದ ವಾತಾವರಣವಿದೆ.
ಘಟನೆಯಲ್ಲಿ ಅನೇಕರ ಬಂಧನ
ಘಟನೆ ನಡೆದ ಮರುದಿನವೇ ಆಶಿಶ್ ಮಿಶ್ರಾ ಸೇರಿದಂತೆ 14 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇದುವರೆಗೆ 5 ಬಂಧನಗಳನ್ನು ಮಾಡಲಾಗಿದೆ. ಇದರಲ್ಲಿ ಲವಕುಶ, ಆಶಿಶ್ ಪಾಂಡೆ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರರಾದ ಆಶಿಶ್ ಮಿಶ್ರಾ ಮತ್ತು ಚಾಲಕ ಶೇಖರ್ ಸೇರಿದ್ದಾರೆ. ವೈರಲ್ ವೀಡಿಯೊಗಳ ಆಧಾರದ ಮೇಲೆ ಪೊಲೀಸರು ಇದುವರೆಗೆ 20 ಕ್ಕೂ ಹೆಚ್ಚು ಜನರನ್ನು ಗುರುತಿಸಿದ್ದಾರೆ.
'ಕಾರುಗಳಲ್ಲಿ ಇದ್ದದ್ದು ಸಚಿವರ ಮಗ, ಇದು ಯೋಜಿತ ಪಿತೂರಿ' ಎಂದ ಗಾಯಾಳು ರೈತ'
ಕಾಂಗ್ರೆಸ್ ನಿಂದ ಸ್ವತಂತ್ರ ತನಿಖೆಗೆ ಒತ್ತಾಯ
ಬುಧವಾರ ಲಖಿಂಪುರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿತು. ಈ ವೇಳೆ ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆ ಮತ್ತು ಇಬ್ಬರು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆಗೆ ಒತ್ತಾಯಿಸಿದರು.
ಲಖಿಂಪುರ ಹಿಂಸಾಚಾರ ತನಿಖೆ ಬಗ್ಗೆ ಟಿಕಾಯತ್ ಅಸಮಾಧಾನ
ಲಖಿಂಪುರ್ ಖೇರಿ ಪ್ರಕರಣದ ತನಿಖೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಬಿಕೆಯು ನಾಯಕ ರಾಕೇಶ್ ಟಿಕಾಯತ್, ''ಸರ್ಕಾರವು ತನಿಖೆಯನ್ನು ಅಣಕಿಸುವಂತೆ ಮಾಡಿದೆ. ತನಿಖೆಯ ಹೆಸರಿನಲ್ಲಿ ಚಹಾ ಮತ್ತು ಬಿಸ್ಕತ್ತುಗಳನ್ನು ನೀಡಲಾಗುತ್ತಿದೆ. ತನಿಖಾ ಅಧಿಕಾರಿಗಳ ಗುರುತನ್ನು ಪಾರದರ್ಶಕತೆಗಾಗಿ ಅನಾಮಧೇಯವಾಗಿ ಇಡಬೇಕು ಎಂದು ಹೇಳಿದರು. ಲಖಿಂಪುರ್ ಪ್ರಕರಣವನ್ನು ವಿರೋಧಿಸಿ ಅಕ್ಟೋಬರ್ 26 ರಂದು ಕಿಸಾನ್ ಮಹಾಪಂಚಾಯತ್ ಆಯೋಜಿಸಲಾಗಿದ್ದು ಮತ್ತು ಅಕ್ಟೋಬರ್ 18 ರಂದು ದೇಶಾದ್ಯಂತ ರೈಲು ತಡೆ ಅಭಿಯಾನವನ್ನು ಮಾಡಲಾಗುವುದು,'' ಎಂದು ಹೇಳಿದರು.