ವಿಕಾಸ್ ದುಬೆ ಎನ್ ಕೌಂಟರ್; ಪೊಲೀಸರ ಮುಂದೆ 5 ಪ್ರಶ್ನೆಗಳು
ಲಕ್ನೋ, ಜುಲೈ 10 : ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಶುಕ್ರವಾರ ಮುಂಜಾನೆ ನಡೆದ ಎನ್ ಕೌಂಟರ್ನಲ್ಲಿ ಮೃತಪಟ್ಟಿದ್ದಾನೆ. ಮಧ್ಯಪ್ರದೇಶದಿಂದ ಕಾನ್ಪುರಕ್ಕೆ ಕರೆತರುವಾಗ ಪೊಲೀಸರ ಬಂದೂಕು ಕಸಿದುಕೊಂಡು ಗುಂಡು ಹಾರಿಸಲು ಆತ ಪ್ರಯತ್ನ ನಡೆಸಿದ್ದ. ಆಗ ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾಗಿದ್ದಾನೆ.
Recommended Video
ವಿಕಾಸ್ ದುಬೆ 8 ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ. ಕಾನ್ಪುರದಿಂದ ಸುಮಾರು 30 ಕಿ.ಮೀ. ದೂರದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಎನ್ ಕೌಂಟರ್ನಲ್ಲಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಪೊಲೀಸರ ಎನ್ ಕೌಂಟರ್ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಇದು ನಕಲಿ ಎನ್ ಕೌಂಟರ್ ಎಂಬ ವಾದವೂ ಕೇಳಿ ಬರುತ್ತಿದ್ದು, ಈ ವಿವಾದ ಈಗ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಚರ್ಚೆಗಳು ನಡೆಯುತ್ತಿವೆ.
ಗುರುವಾರ ಮಧ್ಯಪ್ರದೇಶದಿಂದ ಉಜ್ಜೈನಿಯಲ್ಲಿ ವಿಕಾಸ ದುಬೆ ಬಂಧಿಸಲಾಗಿತ್ತು. ಆತನನ್ನು ಕಾನ್ಪುರಕ್ಕೆ ಕರೆತರುವಾಗ ನಗರದ ಹೊರವಲಯದಲ್ಲಿ ಮೊದಲು ಕಾರು ಅಪಘಾತಗೊಂಡಿದೆ. ಆಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವಿಕಾಸ್ ದುಬೆ ಎನ್ ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ.

ಪೊಲೀಸರಿಗೆ ಪ್ರಶ್ನೆ ; 01
ಎನ್ ಕೌಂಟರ್ಗೆ ಕೆಲವೇ ಗಂಟೆಗಳ ಮೊದಲು ವಿಕಾಸ್ ದುಬೆ ಕಾರನ್ನು ಬದಲಾವಣೆ ಮಾಡಲಾಗಿದೆ. ಮುಂಜಾನೆ 4 ಗಂಟೆ ಟೋಲ್ ಪ್ಲಾಜಾದಲ್ಲಿ ಇದ್ದ ಕಾರಿನಲ್ಲಿ ಎನ್ ಕೌಂಟರ್ ನಡೆಯುವಾಗ ದುಬೆ ಇರಲಿಲ್ಲ. ಎರಡು ಗಂಟೆಗೂ ಮೊದಲು ಪೊಲೀಸರು ಕಾರು ಬದಲಾಯಿಸಿದ್ದು ಏಕೆ?.

ಪೊಲೀಸರಿಗೆ ಪ್ರಶ್ನೆ : 2
ವಿಕಾಸ್ ದುಬೆ ಕರೆತರುತ್ತಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ಮಾಧ್ಯಮಗಳ ವಾಹನಗಳನ್ನು ಎನ್ ಕೌಂಟರ್ ನಡೆದ 2 ಕಿ. ಮೀ. ಹಿಂದೆ ಪೊಲೀಸರು ತಡೆದಿದ್ದು ಏಕೆ?.

ಪೊಲೀಸರಿಗೆ ಪ್ರಶ್ನೆ : 03
ಅಪಘಾತ ಮತ್ತು ಎನ್ ಕೌಂಟರ್ ನಡೆದ ಸ್ಥಳದಲ್ಲಿ ಗುಂಡಿನ ಶಬ್ದ ಮಾತ್ರ ಕೇಳಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅವರನ್ನು ಪೊಲೀಸರು ಸ್ಥಳದಿಂದ ತೆರಳುವಂತೆ ಸೂಚಿಸಿದ್ದು ಏಕೆ?.

ಪೊಲೀಸರಿಗೆ ಪ್ರಶ್ನೆ : 4
60ಕ್ಕೂ ಅಧಿಕ ಪ್ರಕರಣದಲ್ಲಿನ ಆರೋಪಿಯಾಗಿದ್ದ ವಿಕಾಸ್ ದುಬೆ ಕೈಗೆ ಕೋಳವನ್ನು ಏಕೆ ಹಾಕಿರಲಿಲ್ಲ. ಅಪಘಾತವಾದಾಗ ಆತ ಪೊಲೀಸರ ಬಂದೂಕು ಕಸಿಯಲು ಇದೇ ಕಾರಣವಾಯಿತು.

ಪೊಲೀಸರಿಗೆ ಪ್ರಶ್ನೆ : 5
ಅಪಘಾತ ನಡೆದ ಸ್ಥಳದಲ್ಲಿ ರಸ್ತೆಯ ಪಕ್ಕ ಖಾಲಿ ಹೊಲವಿದೆ. ಯಾವುದೇ ಮರೆ ಇಲ್ಲದ ಜಾಗದಲ್ಲಿ ವಿಕಾಸ್ ದುಬೆ ಓಡಲು ಪ್ರಯತ್ನಿಸಿದ್ದು ಏಕೆ?.












Click it and Unblock the Notifications