ಯೋಗಿ ರಾಜ್ಯದಲ್ಲಿ ಅಮಾನವೀಯತೆ: ಸಾವಿರಾರು ಮಾನಸಿಕ ಅಸ್ವಸ್ಥರನ್ನು ಪಶುಗಳಂತೆ ಕಟ್ಟಿಹಾಕಿದ್ದಾರಿಲ್ಲಿ!
ನವದೆಹಲಿ, ಜನವರಿ 3: ಗುಂಪು ಘರ್ಷಣೆ, ಅತ್ಯಾಚಾರ, ಗೋವು ಸಾಗಾಣಿಕೆದಾರ ಹತ್ಯೆ, ಹಿಂಸಾಚಾರದಂತಹ ಕ್ರೂರ ಘಟನೆಗಳು ನಿರಂತರವಾಗಿ ವರದಿಯಾಗುತ್ತಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಮಾನಸಿಕ ಕಾಯಿಲೆಯುಳ್ಳ ಜನರ ಕಾಳುಗಳಿಗೆ ಸರಪಳಿ ಹಾಕಿ ಶೆಡ್ ಒಂದರಲ್ಲಿ ಬೀಗ ಜಡಿಯಲಾಗುತ್ತದೆ. ಹಲವು ದಿನಗಳು, ತಿಂಗಳು, ವರ್ಷಗಳು ಉರುಳಿದರೂ ಅವರಿಗೆ ಮುಕ್ತಿಯಿಲ್ಲ. ಪುರುಷರು, ಮಹಿಳೆಯರು, ಯುವಕರು, ವೃದ್ಧರು- ಹೀಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತರ ಪ್ರದೇಶದ ಬದೌನ್ನಲ್ಲಿರುವ ಈ ಕೊಳಕು ಶೆಡ್ಡೇ ಮನೆ, ಆಸ್ಪತ್ರೆ ಎಲ್ಲವೂ!
ದಕ್ಷಿಣ ದೆಹಲಿಯ ವಕೀಲರೊಬ್ಬರು ಇಲ್ಲಿ ಸಂಕಟ ಅನುಭವಿಸುತ್ತಿರುವ ಜನರ ಪರವಾಗಿ ನಾಗರಿಕರ ರಕ್ಷಣೆಗೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕವೇ ಈ ಹೃದಯ ಹಿಂಡುವ ಘಟನೆ ಬಹಿರಂಗವಾಗಿರುವುದು.

'ಮಾನಸಿಕ ಅಸ್ವಸ್ಥರನ್ನು ಸರಪಳಿಯಲ್ಲಿ ಕಟ್ಟಿಹಾಕುವುದು ಮತ್ತು ಕೂಡಿ ಹಾಕಿರುವುದು ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ಹಾಗೂ ಚಿಕಿತ್ಸೆಗೆ ಇರುವ ಕೊರತೆಯನ್ನು ತೋರಿಸುತ್ತದೆ ಎಂದು ವಕೀಲ ಗೌರವ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಸಮಸ್ಯೆಯುಳ್ಳ ವ್ಯಕ್ತಿಗಳೊಂದಿಗಿನ ಸಂಗತಿಗಳನ್ನು ನಿಭಾಯಿಸುವಲ್ಲಿ ವಿಫಲವಾದ ಕಾರಣಕ್ಕೆ ಮಾನಸಿಕ ಕಾಯಿಲೆಯುಳ್ಳ ಜನರು ಅತ್ಯಧಿಕ ಮಟ್ಟದಲ್ಲಿ ತಾರತಮ್ಯ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅವರ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ನ್ಯಾಯಪೀಠ, ಮಾನಸಿಕ ಆರೋಗ್ಯ ಮತ್ತು ಚಿಕಿತ್ಸೆಗಾಗಿ ತಕ್ಷಣವೇ ಸೌಲಭ್ಯ ಒದಗಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸೂಚಿಸಿದ್ದಾರೆ.
ಇದು ಅತ್ಯಂತ ಗಂಭೀರವಾದ ಕಳವಳಕಾರಿ ಸಂಗತಿಯಾಗಿದೆ. ಸಂವಿಧಾನದ 21ನೇ ವಿಧಿ ಅಡಿಯಲ್ಲಿ ನೀಡಲಾಗಿರುವ ವ್ಯಕ್ತಿಯ ಜೀವಿಸುವ ಹಕ್ಕುಗಳಿಗೆ ವಿರುದ್ಧವಾದ ಕೃತ್ಯವಾಗಿದೆ. ಇಂತಹ ವ್ಯಕ್ತಿಗಳ ಗೌರವಕ್ಕೆ ಧಕ್ಕೆ ತರುವುದು ಸಹನೀಯವಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications