ಮಾಯಾವತಿ ಬಗ್ಗೆ ಹುಷಾರು! ಅಖಿಲೇಶ್ ಯಾದವ್ಗೆ ಚಿಕ್ಕಪ್ಪನ ಎಚ್ಚರಿಕೆ
ಲಕ್ನೋ, ಜನವರಿ 17: ಪಕ್ಷದ ಪರಮವೈರಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎಸ್ಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಪಕ್ಷದಲ್ಲಿ ಈ ಹಿಂದೆ ಬಂಡಾಯವೆದ್ದಿದ್ದ ಚಿಕ್ಕಪ್ಪ ಶಿವಪಾಲ್ ಯಾದವ್, ಮಾಯಾವತಿ ಬಗ್ಗೆ ಎಚ್ಚರ ಇರುವಂತೆ ಸಲಹೆ ನೀಡಿದ್ದಾರೆ.
'ಲಕ್ನೋ ಅತಿಥಿಗೃಹದ ಘಟನೆ' ಬಗ್ಗೆ ನೆನಪಿಸಿರುವ ಶಿವಪಾಲ್ ಯಾದವ್, ಮಾಯಾವತಿ ಅವರ ಬಗ್ಗೆ ಎಚ್ಚರ ವಹಿಸುವಂತೆ ಅಖಿಲೇಶ್ ಯಾದವ್ ಅವರಿಗೆ ಸೂಚನೆ ನೀಡಿದ್ದಾರೆ.
1995ರಲ್ಲಿ ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಎರಡು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರ ನಡೆಸಿ ಬಳಿಕ ಹೊರಬಂದಿದ್ದ ಮಾಯಾವತಿ ಅವರನ್ನು ಉತ್ತರ ಪ್ರದೇಶದ ಲಕ್ನೋದ ಅತಿಥಿಗೃಹವೊಂದರಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಥಳಿಸಿದ್ದರು. ಬಳಿಕ ಮಾಯಾವತಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು.
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಗೆ ಈಗ ಮತ್ತೊಂದು ಪಕ್ಷದ ಬೆಂಬಲ
ಉತ್ತರ ಪ್ರದೇಶದ ಚಂಡೋಲಿಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸಹೋದರ ಶಿವಪಾಲ್ ಯಾದವ್, ಈ ಘಟನೆ ಬಳಿಕ ಮಾಯಾವತಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು ಎಂದು ನೆನಪಿಸಿಕೊಂಡರು.
ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು
'ಬೆಹೆನ್ಜಿ (ಮಾಯಾವತಿ) ನನ್ನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆಗ ನಾನು ತನಿಖೆಗೆ ಹಾಗೂ ಮಂಪರು ಪರೀಕ್ಷೆಗೂ ಸಿದ್ಧನಿರುವುದಾಗಿ ತಿಳಿಸಿದ್ದೆ. ಆದರೆ, ಮಾಯಾವತಿ ಅವರಿಗೂ ಮಂಪರು ಪರೀಕ್ಷೆ ನಡೆಸಬೇಕು ಎಂದು ಬಯಸಿದ್ದೆ. ಅದಕ್ಕೆ ಅವರು ನಿರಾಕರಿಸಿದ್ದರು' ಎಂದು ಶಿವಪಾಲ್ ಹೇಳಿದ್ದಾರೆ.
ಕಾಂಗ್ರೆಸ್ ಸಹವಾಸ ಬಿಡಲು ಕಾರಣ ನೀಡಿದ ಎಸ್ಪಿ, ಬಿಎಸ್ಪಿ ಮೈತ್ರಿ
ಆಕೆಯನ್ನು ನಂಬಬಹುದೇ?
'ಟಿಕೆಟ್ಗಳನ್ನು ಮಾರಾಟ ಮಾಡುವ ಜನರನ್ನು ನೀವು ನಂಬಲು ಸಾಧ್ಯವಿಲ್ಲ. ನೇತಾಜಿ ಅವರನ್ನು ನಿಂದಿಸಿದವರು, ಅವರನ್ನು ಗೂಂಡಾಗಳೆಂದು ಕರೆದವರು. ಇಂದು ಅವರು ಜೊತೆಯಾಗಿ ಬಂದಿದ್ದಾರೆ. ಆಕೆಯನ್ನು ನಂಬಬಹುದೇ? ಆಕೆಯಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ' ಎಂದಿದ್ದಾರೆ.
ಟೂ ಬಿಟ್ಟ ಮಾಯಾವತಿ... ಇನ್ನು ಏಕಾಂಗಿ ಹೋರಾಟವೇ ಕಾಂಗ್ರೆಸ್ಸಿಗೆ ಗತಿ!
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ
ರಾಜ್ಯದಲ್ಲಿ ಬಿಜೆಪಿಯನ್ನು ಎದುರಿಸಲು ಬದ್ಧ ವೈರಿಗಳಾದ ಬಿಎಸ್ಪಿ ಮತ್ತು ಎಸ್ಪಿ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿವೆ. ಎರಡೂ ಪಕ್ಷಗಳು ತಲಾ 38 ಸೀಟುಗಳನ್ನು ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದು, ರಾಹುಲ್ ಗಾಂಧಿ ಅವರು ಸ್ಪರ್ಧಿಸುವ ಅಮೇಥಿ ಮತ್ತು ಸೋನಿಯಾ ಗಾಂಧಿ ಅವರ ರಾಯ್ ಬರೇಲಿ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ಇರಲು ನಿರ್ಧರಿಸಿವೆ. ಇನ್ನು ಎರಡು ಸೀಟುಗಳನ್ನು ಸಣ್ಣ ಪಕ್ಷಗಳಿಗೆ ಮೀಸಲಿರಿಸಿವೆ.
ಕಾಂಗ್ರೆಸ್ಸಿಗೆ ಅಮೇಥಿ, ರಾಯ್ ಬರೇಲಿಯನ್ನು ಭಿಕ್ಷೆ ಕೊಟ್ಟರೆ ಮಾಯಾವತಿ?
ಪಕ್ಷ ತ್ಯಜಿಸಿದ್ದ ಶಿವಪಾಲ್
ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಭಾವಶಾಲಿ ಸಚಿವರಾಗಿದ್ದ ಶಿವಪಾಲ್ ಯಾದವ್, ಸಮಾಜವಾದಿ ಪಕ್ಷದ ನಾಯಕತ್ವದ ಮುನಿಸಿಕೊಂಡಿದ್ದರು. ಪಕ್ಷದಲ್ಲಿ ಉನ್ನತ ಸ್ಥಾನಮಾನ ಬಯಸಿದ್ದ ಅವರು, ನಾಯಕತ್ವದ ವಿರುದ್ಧ ಬಂಡಾಯವೆದ್ದು ಹೊರಬಂದಿದ್ದರು. ಕಳೆದ ವರ್ಷ ಪ್ರಗತಿಶೀಲ ಸಮಾಜವಾದಿ ಪಕ್ಷ ಸ್ಥಾಪಿಸಿದ್ದರು. ಹೊಸ ಪಕ್ಷಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ.