ಪ್ರತಿಭಟನೆಯಿಂದ ಆಸ್ತಿ ಹಾನಿ: ನಷ್ಟ ಪರಿಹಾರ ನೀಡುವಂತೆ ಸರ್ಕಾರ ನೊಟೀಸ್
ಲಖನೌ, ಡಿಸೆಂಬರ್ 25: ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಆಸ್ತಿ-ಪಾಸ್ತಿ ಹಾಳು ಮಾಡಿದವರಿಗೆ ಉತ್ತರ ಪ್ರದೇಶ ಸರ್ಕಾರ ನೊಟೀಸ್ ನೀಡಿದ್ದು, ಹಣ ಕಟ್ಟಿಕೊಡುವಂತೆ ಎಚ್ಚರಿಕೆ ನೀಡಿದೆ.
ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳು ಮಾಡಿದವರಿಗೆ ಉ.ಪ್ರದೇಶ ಸರ್ಕಾರ ನೊಟೀಸ್ ನೀಡಿದ್ದು, 14 ಲಕ್ಷ ಹಣವನ್ನು ನಷ್ಟ ಪರಿಹಾರ ನೀಡುವಂತೆ ಹೇಳಿದೆ.
ಉತ್ತರ ಪ್ರದೇಶದಲ್ಲಿ ಪೌರತ್ವ ಗಲಭೆಕೋರರ ಆಸ್ತಿ ಜಪ್ತಿ ಮಾಡಿದ ಯೋಗಿ ಸರ್ಕಾರ
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರಾಮಪುರ ಜಿಲ್ಲೆಗೆ ಸೇರಿದ 28 ಮಂದಿಗೆ ಮೊದಲ ನೊಟೀಸ್ ನೀಡಲಾಗಿದ್ದು, 14.86 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ನೊಟೀಸ್ ನಲ್ಲಿ ಹೇಳಲಾಗಿದೆ. 28 ಮಂದಿಯಲ್ಲಿ ಕೆಲವರು ಈಗಾಗಲೇ ಪೊಲೀಸರ ವಶದಲ್ಲಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸಿಎಎ ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಹಲವು ವಾಹನಗಳು, ಬಸ್ಸು, ಪೊಲೀಸರ ವಾಹನಗಳು ಹಾನಿಗೆ ಒಳಗಾಗಿದ್ದವು. ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ 16 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಪ್ರತಿಭಟನೆಗೆ ಬಗ್ಗೆ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, 'ಸೇಡು ತೀರಿಸಿಕೊಳ್ಳುತ್ತೇವೆ' ಎಂದು ಬಹಿರಂಗವಾಗಿಯೇ ಹೇಳಿದ್ದರು. ಹೇಳಿಕೆ ಬಿದ್ದ ಕೆಲವೇ ದಿನಗಳಲ್ಲಿ ಪ್ರತಿಭಟನಾಕಾರರಿಗೆ ನೊಟೀಸ್ ನೀಡಲಾಗಿದೆ.
ಪೌರತ್ವ ಕಾಯ್ದೆಯ ಪ್ರಶ್ನೆಗೆ 'ಉತ್ತರ' ಸಿಗದೇ ಹೊತ್ತಿ ಉರಿದ 'ಪ್ರದೇಶ'!
ನೊಟೀಸ್ ಪಡೆದವರಲ್ಲಿ ಬಹುತೇಕರು ಬಡ ಕುಟುಂಬದವರಾಗಿದ್ದು, ಎಂಬ್ರಾಯಿಡರಿ ಡಿಸೈನರ್, ಸಣ್ಣ ಗೂಡಂಗಡಿಯಾತ ಹೀಗೆ ಇನ್ನೂ ಹಲವರು ಸೇರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯೋಗಿ ಆದಿತ್ಯನಾಥರ ಕ್ರಮಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ನೊಟೀಸ್ ನೀಡಿರುವ ಬಗ್ಗೆ ಮಾತನಾಡಿರುವ ರಾಮಪುರ ಜಿಲ್ಲಾಧಿಕಾರಿ, ಪ್ರಸ್ತುತ 28 ಮಂದಿಗೆ ನೊಟೀಸ್ ನೀಡಲಾಗಿದ್ದು, ಒಂದು ವಾರದ ಒಳಗಾಗಿ ಅವರು ನೊಟೀಸ್ಗೆ ಉತ್ತರ ನೀಡಬೇಕಿದೆ. ಒಂದು ವೇಳೆ ಅವರು ಗಲಭೆಯಲ್ಲಿ ಭಾಗಿಯಾಗಿಲ್ಲವೆಂದಾದಲ್ಲಿ ಸಾಕ್ಷ್ಯ ಸಮೇತ ಮಾಹಿತಿ ಒದಗಿಸಬೇಕಾಗಿದೆ' ಎಂದಿದ್ದಾರೆ.