"ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ": ಮಿನಸ್ಟರ್ ಬಾಯಲ್ಲಿ ಇಂಥಾ ಮಾತೇ!?
ಲಕ್ನೋ, ಏಪ್ರಿಲ್ 29: "ಹಿಂದಿ ಭಾಷೆಯಲ್ಲು ಯಾರು ಪ್ರೀತಿಸುವುದಿಲ್ಲವೋ ಅವರೆಲ್ಲ ವಿದೇಶಿಗರು. ಯಾರಿಗೆ ಹಿಂದಿ ಮಾತನಾಡುವುದಕ್ಕೆ ಬರುವುದಿಲ್ಲವೋ ಅಂಥವರನ್ನೇ ಭಾರತವನ್ನು ಬಿಟ್ಟು ಹೋಗಿ, ಬೇರೆ ಎಲ್ಲಾದರೂ ಬದುಕಿಕೊಳ್ಳಿ," ಇಂಥದೊಂದು ಹೇಳಿಕೆ ನೀಡಿರುವುದು ಯಾವ್ದೋ ಪುಂಡು ಪೋಕರಿಗಳಲ್ಲ. ಬದಲಿಗೆ ಉತ್ತರ ಪ್ರದೇಶದ ಮೀನುಗಾರಿಕೆ ಸಚಿವರಾದ ಸಂಜಯ್ ನಿಶಾದ್.
"ವಿನಾಶಕಾಲೇ ವಿಪರೀತ ಬುದ್ಧಿ" ಎನ್ನುವ ಮಾತು ಬಿಜೆಪಿ ನಾಯಕರಿಗೆ ಹೇಳಿ ಮಾಡಿಸಿದಂತೆ ಆಗುತ್ತಿದೆ. ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ವಿವಾದ ಎದ್ದಿರುವುದರ ಕುರಿತು ಪ್ರಶ್ನೆಗೆ ಸಚಿವರು ಇಂಥದೊಂದು ಅಧಿಕಪ್ರಸಂಗತನದ ಉತ್ತರವನ್ನು ನೀಡಿದ್ದಾರೆ.
ಹಿಂದಿ ರಾಷ್ಟ್ರಭಾಷೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಹಾಗೂ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಡುವೆ ಟ್ವಿಟ್ಟರ್ ಸಮರ ನಡೆದಿತ್ತು. ಈ ಸಂಬಂಧ ಚಿತ್ರರಂಗದ ಹಲವು ನಟ-ನಟಿಯರು ಪರ-ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂಥದರ ಮಧ್ಯೆ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.

ಉತ್ತರ ಪ್ರದೇಶ ಸಚಿವ ಸಂಜಯ್ ನಿಶಾದ್ ವಿವಾದಾತ್ಮಕ ಹೇಳಿಕೆ
ಭಾರತದಲ್ಲಿ ಬದುಕುವುದಕ್ಕೆ ಬಯಸುವವರು ಕಡ್ಡಾಯವಾಗಿ ಹಿಂದಿಯನ್ನು ಪ್ರೀತಿಸಬೇಕು. ನೀವು ಹಿಂದಿಯನ್ನು ಪ್ರೀತಿಸದಿದ್ದರೆ, ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ. ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ, ಆದರೆ ಈ ದೇಶವು ಒಂದೇ ಆಗಿದೆ. ಭಾರತವು 'ಹಿಂದೂಸ್ತಾನ್' ಅಂದರೆ ಹಿಂದಿ ಮಾತನಾಡುವವರಿಗೆ ಒಂದು ಸ್ಥಳವಾಗಿದೆ ಎಂದು ಭಾರತದ ಸಂವಿಧಾನವು ಹೇಳುತ್ತದೆ, ಹಿಂದುಸ್ತಾನ ಹಿಂದಿ ಮಾತನಾಡದವರಿಗೆ ಇರುವ ಸ್ಥಳವಲ್ಲ. ಅವರು ಈ ದೇಶವನ್ನು ಬಿಟ್ಟು ಬೇರೆಡೆ ಹೋಗಬೇಕು," ಎಂದು ಸಚಿವ ಸಂಜಯ್ ನಿಶಾದ್ ಹೇಳಿದ್ದಾರೆ.

ಇಂಗ್ಲಿಷ್ ಜೊತೆಗೆ ಹಿಂದಿ ಕೂಡ ಅಧಿಕೃತ ಭಾಷೆ
ಭಾರತೀಯ ಸಂವಿಧಾನದ 343ನೇ ವಿಧಿ ಮತ್ತು ನಂತರದ ತಿದ್ದುಪಡಿಯ ಪ್ರಕಾರ, ಹಿಂದಿಯನ್ನು ಇಂಗ್ಲಿಷ್ ಜೊತೆಗೆ ಅಧಿಕೃತ ಭಾಷೆಯಾಗಿ ಗುರುತಿಸಲಾಗಿದೆ ಎಂಬುದನ್ನು ಗಮನಿಸಬೇಕು. ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಅಧಿಕೃತ ಭಾಷೆ ಎಂದರೆ ಸರ್ಕಾರ ಬಳಸುವ ಭಾಷೆ ಆಗಿರುತ್ತದೆ. ರಾಜ್ಯಗಳು ತಮ್ಮ ಅಧಿಕೃತ ಭಾಷೆಯಾಗಿ ಸ್ಥಳೀಯ ಭಾಷೆಯನ್ನೇ ಬಳಸಿಕೊಳ್ಳಬಹುದು. ತಮಿಳುನಾಡಿನ ಅಧಿಕೃತ ಭಾಷೆ ತಮಿಳು, ಆಗಿದ್ದರೆ ಪಶ್ಚಿಮ ಬಂಗಾಳದ ಅಧಿಕೃತ ಭಾಷೆ ಬಂಗಾಳಿ ಆಗಿದೆ. ಅದೇ ರೀತಿ ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆಗಿರುತ್ತದೆ.

ಹಿಂದಿ ಭಾಷಾ ವಿವಾದ ಹುಟ್ಟಿಕೊಂಡಿರುವುದರ ಮೂಲ?
ಕೆಜಿಎಫ್ ಚಾಪ್ಟರ್ 2ರ ಯಶಸ್ಸಿನ ಕುರಿತು ನಟ ಕಿಚ್ಚ ಸುದೀಪ್ ಟೀಕೆ ಬಗ್ಗೆ ಅಜಯ್ ದೇವಗನ್ ಮಾಡಿದ ಟ್ವೀಟ್ನೊಂದಿಗೆ ಹಿಂದಿಯ ಮೇಲಿನ ವಿವಾದ ಶುರುವಾಯಿತು. ಕೆಲವು ದಿನಗಳ ಹಿಂದೆ, ಸುದೀಪ್ ಬಾಲಿವುಡ್ ದಕ್ಷಿಣ ಭಾರತದ ಭಾಷೆಗಳಲ್ಲಿ ಚಲನಚಿತ್ರಗಳನ್ನು ಡಬ್ಬಿಂಗ್ ಮಾಡಿ ಬಿಡುಗಡೆಗೊಳಿಸುವ ಮೂಲಕ ದಕ್ಷಿಣದ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹಿಂದಿ "ಇನ್ನು ಮುಂದೆ ರಾಷ್ಟ್ರ ಭಾಷೆಯಲ್ಲ" ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದು, ಹಾಗಿದ್ದರೆ ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆಗುವುದೇಕೆ ಎಂದು ಸುದೀಪ್ ಅವರನ್ನು ಪ್ರಶ್ನಿಸಿದ್ದರು. "ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ, ಹಾಗಾದರೆ ನಿಮ್ಮ ಮಾತೃಭಾಷೆಯಲ್ಲಿ ಚಲನಚಿತ್ರಗಳನ್ನು ಏಕೆ ಡಬ್ ಮಾಡಲಾಗುತ್ತದೆ. ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆ, ಮತ್ತು ಅದು ಯಾವಾಗಲೂ ಹಾಗೆಯೇ ಇರುತ್ತದೆ. ಜನ ಗಣ ಮನ" ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದರು.
ದೇವಗನ್ ಟ್ವೀಟ್ ಸಂದೇಶಕ್ಕೆ ಸುದೀಪ್ ತಿರುಗೇಟು:
ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದೇವೆ ಎಂದಿದ್ದೀರಿ. ನಾನು ಒಂದು ಸಣ್ಣ ತಿದ್ದುಪಡಿ ಮಾಡಲು ಬಯಸುತ್ತೇನೆ. ಹಿಂದಿ ಇನ್ನು ರಾಷ್ಟ್ರೀಯ ಭಾಷೆಯಾಗಿಲ್ಲ. ಬಾಲಿವುಡ್ ನವರು ಇಂದು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅವರು ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮಾಡುವ ಮೂಲಕ ಯಶಸ್ಸು ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ, ಆದರೆ ಅದು ಆಗುತ್ತಿಲ್ಲ,'' ಎಂದು ಸುದೀಪ್ ಹೇಳಿದ್ದಾರೆ.

ಏಪ್ರಿಲ್ ತಿಂಗಳ ಆರಂಭದಲ್ಲಿ ವಿವಾದ ಹುಟ್ಟು ಹಾಕಿದ್ದ ಅಮಿತ್ ಶಾ
ಇದೇ ತಿಂಗಳ ಆರಂಭದಲ್ಲಿ ಹಿಂದಿ ಕುರಿತು ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲು ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಜ್ಯಗಳ ಜನರು ಪರಸ್ಪರ ಹಿಂದಿಯಲ್ಲೇ ಮಾತನಾಡಬೇಕು. ಇಂಗ್ಲೀಷ್ ಭಾಷೆಗೆ ಪರ್ಯಾಯವಾಗಿ ಹಿಂದಿ ಭಾಷೆಯನ್ನು ಬಳಸಬೇಕು. ಹಿಂದಿಯು ಇಂಗ್ಲೀಷ್ ಭಾಷೆಗೆ ಪರ್ಯಾಯವಾಗಿರಬೇಕೇ ವಿನಃ ಸ್ಥಳೀಯ ಭಾಷೆಗಳಿಗೆ ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.












Click it and Unblock the Notifications