ಯುಪಿ: ರೈತ ವಿರೋಧಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಸಮಾವೇಶ
ಲಕ್ನೋ, ಫೆಬ್ರವರಿ 23: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ ಹಲವು ರೈತ ಮುಖಂಡರು ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ರಾಜ್ಯದ ಪ್ರಯಾಗ್ರಾಜ್, ಗೋರಖ್ಪುರ, ವಾರಣಾಸಿ ಜಿಲ್ಲೆಗಳಿಗೆ ರೈತ ಮುಖಂಡರು ಭೇಟಿ ನೀಡಲಿದ್ದಾರೆ. ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತ ಚಳುವಳಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿದ್ದ ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಉತ್ತರ ಭಾರತದ ಹತ್ತಾರು ರೈತ ಸಂಘಗಳ ಒಂದು ಒಕ್ಕೂಟ ಸಂಸ್ಥೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಸರ್ಕಾರವು ಈಗ ರದ್ದುಪಡಿಸಿದ ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಪ್ರತಿಭಟನೆಗಳ ನೇತೃತ್ವ ವಹಿಸಿಕೊಂಡಿತ್ತು.

ಮೂರು ಜಿಲ್ಲೆಗಳಿಗೆ ರೈತ ಮುಖಂಡರ ಭೇಟಿ:
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರ ಮಧ್ಯೆ ಮೂರು ಜಿಲ್ಲೆಗಳಿಗೆ ರೈತ ಮುಖಂಡರು ಭೇಟಿ ನೀಡಲಿದ್ದಾರೆ. ಭಾರತೀಯ ಕಿಸಾನ್ ಮೋರ್ಚಾದ ವಕ್ತಾರ ಸೌರಭ್ ಉಪಾಧ್ಯಾಯ ಮಾತನಾಡಿ, ಸಂಯುಕ್ತ ಕಿಸಾನ್ ಮೋರ್ಚಾ ಫೆಬ್ರವರಿ 23ರಂದು ಪ್ರಯಾಗರಾಜ್ನಲ್ಲಿ, ಫೆಬ್ರವರಿ 28ರಂದು ಗೋರಖ್ಪುರದಲ್ಲಿ ಮತ್ತು ಮಾರ್ಚ್ 2ರಂದು ವಾರಣಾಸಿಯಲ್ಲಿ ಸಮಾವೇಶ ನಡೆಸಲಿದೆ ಎಂದರು.
ರೈತ ವಿರೋಧಿಗಳಿಗೆ ಪಾಠ ಕಲಿಸುವುದು ನಮ್ಮ ಉದ್ದೇಶ:
"ರೈತ ಮುಖಂಡ ರಾಕೇಶ್ ಟಿಕಾಯತ್, ಶಿವಕುಮಾರ್ ಶರ್ಮಾ, ಯೋಗೇಂದ್ರ ಯಾದವ್ ಸೇರಿದಂತೆ ಇತರರು ಎಸ್ಕೆಎಂ ಕಾರ್ಯಕ್ರಮದ ಭಾಗವಾಗಿ ಈ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಯಾರಿಗೆ ಮತ ಹಾಕಬೇಕೆಂದು ನಾವು ಯಾರಿಗೂ ಹೇಳುತ್ತಿಲ್ಲ, ರೈತರ ವಿರುದ್ಧ ಹೋರಾಡುವವರನ್ನು ಶಿಕ್ಷಿಸುವಂತೆ ನಾವು ಜನರನ್ನು ಕೇಳುತ್ತಿದ್ದೇವೆ ಎಂದು ಉಪಾಧ್ಯಾಯ ತಿಳಿಸಿದ್ದಾರೆ.
ಗಣ್ಯರ ಕ್ಷೇತ್ರಗಳಲ್ಲಿ ರೈತರ ಸಮಾವೇಶ:
ಉತ್ತರ ಪ್ರದೇಶ ಸರ್ಕಾರದ ಸಚಿವ ನಂದಗೋಪಾಲ್ ಗುಪ್ತಾ ಮತ್ತು ಸಿದ್ಧಾರ್ಥ್ ನಾಥ್ ಸಿಂಗ್ ಪ್ರಯಾಗರಾಜ್ನಿಂದ ಬಿಜೆಪಿಯ ಅಭ್ಯರ್ಥಿಗಳು ರಣದಲ್ಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಫೆಬ್ರವರಿ 27ರಂದು ಪ್ರಯಾಗ್ರಾಜ್ನಲ್ಲಿ, ಮಾರ್ಚ್ 3 ರಂದು ಗೋರಖ್ಪುರದಲ್ಲಿ ಮತ್ತು ಮಾರ್ಚ್ 7 ರಂದು ವಾರಣಾಸಿಯಲ್ಲಿ ವಿಧಾನಸಭೆ ಚುನಾವಣಾ ಮತದಾನ ನಿಗದಿಯಾಗಿದೆ. ಮಾರ್ಚ್ 10ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
ಬುಧವಾರ ನಾಲ್ಕನೇ ಹಂತದ ಮತದಾನ:
ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಚುನಾವಣೆಗೆ ಬುಧವಾರ ಮತದಾನ ನಡೆಯುತ್ತಿದೆ. ನಾಲ್ಕನೇ ಹಂತದಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 59 ವಿಧಾನಸಭಾ ಸ್ಥಾನಗಳಿಗೆ 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಲ್ಕನೇ ಹಂತದ ಮತದಾನವೂ ಬೆಳಗ್ಗೆ 7 ಗಂಟೆಯಿಂದ ಚುರುಕಿನ ಮತದಾನ ನಡೆದಿದ್ದು, ಸಂಜೆ 6 ರವರೆಗೆ ನಡೆಯಲಿದೆ.












Click it and Unblock the Notifications