ಓಮಿಕ್ರಾನ್ ರೂಪಾಂತರಕ್ಕೆ ಹೆದರಿ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದ ವೈದ್ಯ!
ಕಾನ್ಪುರ್, ಡಿಸೆಂಬರ್ 4: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಜನರಲ್ಲಿ ಅಕ್ಷರಶಃ ಭಯ ಹುಟ್ಟಿಸಿದೆ. ಇದರ ಮಧ್ಯೆ ಸುದ್ದಿ ಆಗುತ್ತಿರುವ ಓಮಿಕ್ರಾನ್ ಹೊಸ ರೂಪಾಂತರಕ್ಕೆ ಹೆದರಿದ ವೈದ್ಯನೊಬ್ಬ ಮಾಡಿರುವ ಕೃತ್ಯ ಎಂಥವರೂ ಅಚ್ಚರಿ ಪಡುವಂತಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೊವಿಡ್-19 ಓಮಿಕ್ರಾನ್ ರೂಪಾಂತರಕ್ಕೆ ಬೆದರಿದ ವೈದ್ಯನೊಬ್ಬ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಹಾಕಿದ್ದಾರೆ ಎಂದು ವರದಿಯಾಗಿದೆ. ಪತ್ನಿ ಮತ್ತು ಮಕ್ಕಳನ್ನು ಕೊಂದ ವೈದ್ಯ ಇದೀಗ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಡೈರಿಯ ಪ್ರಕಾರ, "ಆರೋಪಿಯು ಕೊವಿಡ್-19 ಓಮಿಕ್ರಾನ್ ಹೊಸ ರೂಪಾಂತರ ಸೋಂಕಿನಿಂದ ತೀವ್ರವಾಗಿ ಆತಂಕಗೊಂಡಿದ್ದಾನೆ. ಓಮಿಕ್ರಾನ್ ರೂಪಾಂತರ ವೈರಸ್ ಎಲ್ಲರನ್ನೂ ಕೊಲ್ಲುತ್ತದೆ. ನನ್ನ ಅಜಾಗರೂಕತೆಯಿಂದ ನಾನು ಸೋಂಕಿನಿಂದ ತಪ್ಪಿಸಿಕೊಳ್ಳಲು ಆಗದಂತೆ ಇಕ್ಕಟ್ಟಿನಲ್ಲಿ ಸಿಲುಕಿದ್ದೇನೆ," ಎಂದು ಬರೆಯಲಾಗಿದೆ. ಆರೋಪಿಯು ಓಮಿಕ್ರಾನ್ ರೂಪಾಂತರ ವೈರಸ್ ಪತ್ತೆ ಆಗುವುದಕ್ಕೂ ಮೊದಲು ತೀವ್ರವಾಗಿ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಗೊತ್ತಾಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಘಟನೆ ಏನು?:
ಕಾನ್ಪುರದ ಆಸ್ಪತ್ರೆಯ ಫೋರೆನ್ಸಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಸುಶೀಲ್ ಕುಮಾರ್ ತಮ್ಮ 48 ವರ್ಷದ ಪತ್ನಿ, 18 ವರ್ಷದ ಮಗ ಮತ್ತು 15 ವರ್ಷದ ಮಗಳನ್ನು ತಮ್ಮ ಕೈಯಾ ಕೊಂದು ಹಾಕಿದ್ದಾರೆ. ತದನಂತರದಲ್ಲಿ ಈ ಕುರಿತು ಪೊಲೀಸರಿಗೆ ಕರೆ ಮಾಡುವಂತೆ ತಮ್ಮ ಸಹೋದರಿಗೆ ಮೆಸೇಜ್ ಕಳುಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಸಹೋದರಿ ಆಗಮಿಸುವುದಕ್ಕೂ ಮೊದಲೇ ಅವರು ಸ್ಥಳದಿಂದ ಪರಾರಿ ಆಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ರಕ್ತಸಿಕ್ತ ಸುತ್ತಿಗೆ ಪತ್ತೆಯಾಗಿದೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಗುಣಪಡಿಸಲಾಗದ ಕಾಯಿಲೆ ಬಗ್ಗೆ ಡೈರಿಯಲ್ಲಿ ಉಲ್ಲೇಖ:
ಮನೆಯಲ್ಲಿ ಪತ್ತೆಯಾಗಿರುವ ಡೈರಿಯ ಪ್ರಕಾರ, "ಆರೋಪಿಯು ತಾವು ಗುಣಪಡಿಸಲು ಆಗದ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಕುಟುಂಬವನ್ನು ಸಂಕಷ್ಟಕ್ಕೆ ದೂಡಿ ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ವಿಮೋಚನೆ ದಾರಿ ಹಿಡಿದಿರುವುದಾಗಿ ಬರೆದುಕೊಂಡಿದ್ದಾರೆ." ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.












Click it and Unblock the Notifications