ಯುಪಿ ಮೂರನೇ ಹಂತದ ಮತದಾನ: ಸೈಕಲ್ ಪಂಚರ್ ಮಾಡುತ್ತಾ ಕಮಲ?
ಲಕ್ನೋ ಫೆಬ್ರವರಿ 20: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಬಿಗಿ ಭದ್ರತೆಯ ನಡುವೆ ನಡೆಯುತ್ತಿದೆ. ಉತ್ತರ ಪ್ರದೇಶದ 59 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಯುಪಿಯಲ್ಲಿ ಕಳೆದ ಎರಡು ಹಂತಗಳಲ್ಲಿ ಫೆಬ್ರವರಿ 10 ಮತ್ತು 14 ರಂದು ಮತದಾನ ನಡೆದಿತ್ತು. ಇದುವರೆಗೆ ಉತ್ತರ ಪ್ರದೇಶದ 113 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಅಡಗಿದೆ. ಇಂದು ಮತದಾನ ನಡೆಯುತ್ತಿರುವ ಪ್ರದೇಶಗಳನ್ನು ಯಾದವರ ನಾಡು ಎಂದು ಕರೆಯಲಾಗುತ್ತದೆ. ಈ ಪ್ರದೇಶಗಳನ್ನು ಸಮಾಜವಾದಿ ಪಕ್ಷದ (SP) ಭದ್ರಕೋಟೆ ಎಂದು ಪರಿಗಣಿಸಲಾಗಿದೆ.
ಬುಂದೇಲ್ಖಂಡ್ನಿಂದ ಅವಧ್ ಪ್ರದೇಶದ 16 ಜಿಲ್ಲೆಗಳಲ್ಲಿ ವ್ಯಾಪಿಸಿರುವ 59 ವಿಧಾನಸಭಾ ಕ್ಷೇತ್ರಗಳ ಪೈಕಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕಣದಲ್ಲಿರುವ ಮೈನ್ಪುರಿಯ ಕರ್ಹಾಲ್ ಸ್ಥಾನವನ್ನು ಹೆಚ್ಚು ಚರ್ಚೆಯಲ್ಲಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಎಸ್ಪಿ ಸಿಂಗ್ ಬಘೇಲ್ ಕಣಕ್ಕಿಳಿದ ಬಳಿಕ ಇಲ್ಲಿ ಪೈಪೋಟಿ ಕುತೂಹಲ ಮೂಡಿಸಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3 ಲಕ್ಷ 70 ಸಾವಿರ ಮತದಾರರಿದ್ದು, ಇದರಲ್ಲಿ 1 ಲಕ್ಷದ 40 ಸಾವಿರಕ್ಕೂ ಹೆಚ್ಚು ಯಾದವ ಮತಗಳಿದ್ದರೆ ಇಲ್ಲಿ 14 ಸಾವಿರ ಮುಸ್ಲಿಮರಿದ್ದಾರೆ.

ಎಸ್ಪಿ ಭದ್ರಕೋಟೆ ಒಡೆಯುವ ಯತ್ನ
ಎಸ್ಪಿ ಸುಮಾರು ವರ್ಷಗಳಿಂದಲೂ ಮೈನ್ಪುರಿಯ ಮತದಾರರ ಪ್ರೀತಿಯನ್ನಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಬಾರಿ ಬಿಜೆಪಿ ಎಸ್ಪಿ ಕೋಟೆಯನ್ನು ಒಡೆಯಲು ಪ್ರಯತ್ನಿಸಿದೆ. ಇಲ್ಲಿ ಸ್ವತಃ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಯೋಗಿ ಎರಡು ರ್ಯಾಲಿ ನಡೆಸಿದ್ದಾರೆ. ಹೀಗಾಗಿ ಇಲ್ಲಿ ಪೈಪೋಟಿ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಅಖಿಲೇಶ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಇಟಾವಾದಲ್ಲಿನ ಜಸ್ವಂತ್ನಗರ ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಕಳೆದ ಬಾರಿ ಬಿಜೆಪಿಗೆ ಗೆಲುವು
2017 ರ ಚುನಾವಣೆ ಬಗ್ಗೆ ಮಾತನಾಡುವುದಾದರೆ, ಕಳೆದ ಬಾರಿ ಈ ಸ್ಥಳಗಳಲ್ಲಿ ಬಿಜೆಪಿ ಅದ್ಭುತ ಪ್ರದರ್ಶನ ನೀಡಿ 49 ಸ್ಥಾನಗಳನ್ನು ಗೆದ್ದಿಕೊಂಡಿತ್ತು. ಆದರೆ ಎಸ್ಪಿ ಖಾತೆಗೆ ಕೇವಲ 9 ಸ್ಥಾನಗಳು ಮತ್ತು ಒಂದು ಸ್ಥಾನ ಕಾಂಗ್ರೆಸ್ ಗೆದ್ದುಕೊಂಡಿತ್ತು. ಇದು ಇಲ್ಲಿಯವರೆಗಿನ ಎಸ್ಪಿಯ ಅತ್ಯಂತ ಕಳಪೆ ಸಾಧನೆಯಾಗಿದ್ದು, ಈ ವೇಳೆ ಬಿಎಸ್ಪಿ ಕೈಯಲ್ಲಿ ಯಾವ ಕ್ಷೇತ್ರಗಳು ಸಿಕ್ಕಿರಲಿಲ್ಲ. ಮೋದಿ ಅಲೆ ಇಲ್ಲಿ ಎಸ್ಪಿಯನ್ನು ಹೀನಾಯವಾಗಿ ಸೋಲಿಸಿದೆ. ಆದರೆ ಇಲ್ಲಿ ಬಿಜೆಪಿ ಮತ್ತೊಮ್ಮೆ ಸೈಕಲ್ ಪಂಕ್ಚರ್ ಮಾಡುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದು ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಬಂದಾಗ ತಿಳಿಯಲಿದೆ.

ಬಿಜೆಪಿಯಿಂದ ಭರ್ಜರಿ ಪ್ರಚಾರ
ಮೂರನೇ ಹಂತದಲ್ಲಿ ಪಶ್ಚಿಮ ಉತ್ತರ ಪ್ರದೇಶದ ಐದು ಜಿಲ್ಲೆಗಳು, ಫಿರೋಜಾಬಾದ್, ಮೈನ್ಪುರಿ, ಇಟಾ, ಕಾಸ್ಗಂಜ್, ಹತ್ರಾಸ್, ಅವಧ್ ಪ್ರದೇಶದ ಆರು ಜಿಲ್ಲೆಗಳು, ಕಾನ್ಪುರ, ಕಾನ್ಪುರ್ ದೇಹತ್, ಔರೈಯಾ, ಕನೌಜ್, ಇಟಾವಾ, ಫರೂಕಾಬಾದ್ ಮತ್ತು ಬುಂದೇಲ್ಖಂಡದ ಐದು ಜಿಲ್ಲೆಗಳು ಎಂಬುದು ಗಮನಾರ್ಹ. ಪ್ರದೇಶ, ಝಾನ್ಸಿ, ಜಲೌನ್, ಲಲಿತ್ಪುರ, ಹಮೀರ್ಪುರ ಮತ್ತು ಮಹೋಬಾದಲ್ಲಿ ಇಂದು ಮತದಾನ ನಡೆಯುತ್ತಿದೆ. ಯಾದವರ ನಾಡು ಎನ್ನಲಾಗುವ ಈ ಕ್ಷೇತ್ರಗಳಲ್ಲಿ ಮತದಾರರು ಎಸ್ಪಿಯನ್ನು ಬೆಂಬಲಿಸುತ್ತಾರಾ? ಅಥವಾ ಬಿಜೆಪಿಯನ್ನು ಬಿಂಬಲಿಸುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಹೀಗಾಗಿ ಎಲ್ಲರ ಚಿತ್ತ ಮೂರನೇ ಹಂತದ ಚುನಾವಣೆಯತ್ತ ನೆಟ್ಟಿದೆ.

ಅಭ್ಯರ್ಥಿಗಳ ವಿವರ
ಈ ಚುನಾವಣೆಯಲ್ಲಿ ಸ್ಪರ್ಧಿಸುವ ಕೆಲ ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದಲ್ಲಿ 623 ಅಭ್ಯರ್ಥಿಗಳ ಪೈಕಿ 135 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ನ ವರದಿಯ ಪ್ರಕಾರ 103 (17%) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.












Click it and Unblock the Notifications