ಕಲ್ಲು ಹೊಡೆದು 'ವಂದೇ ಭಾರತ್' ರೈಲಿನ ಗಾಜು ಪುಡಿಮಾಡಿದ ಕಿಡಿಗೇಡಿಗಳು
ಲಕ್ನೋ, ಫೆಬ್ರವರಿ 21: ಅಭಿವೃದ್ಧಿ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಹಿಂದುಳಿದಿರಲು ಸರ್ಕಾರವನ್ನು ದೂಷಿಸುವ ನಾಗರಿಕರು, ಅದಕ್ಕೆ ತಾವೂ ಕಾರಣಕರ್ತರು ಎಂಬುದನ್ನು ಮರೆಯುತ್ತಿದ್ದಾರೆ. ಸರ್ಕಾರ ಯಾವುದೇ ಯೋಜನೆ ಆರಂಭಿಸಿದರೂ ಅದರಲ್ಲಿ ಹುಳುಕು ಹುಡುಕುವ ಮನಸ್ಥಿತಿಗಳಿವೆ. ಆದರೆ ಅದಕ್ಕಿಂತಲೂ ಘೋರ ಮನಸ್ಸಿನ ಜನರು ನಮ್ಮ ನಡುವೆ ಇದ್ದಾರೆ. ಅವರು ಸರ್ಕಾರದ ನೀಡುವ ಸವಲತ್ತನ್ನು ಹಾಳು ಮಾಡುವುದರಲ್ಲಿ ವಿಕೃತ ಆನಂದಪಡುತ್ತಿದ್ದಾರೆ.
ಇತ್ತೀಚೆಗಷ್ಟೇ ಸಂಚಾರ ಆರಂಭಿಸಿರುವ ಭಾರತದ ಅತಿ ವೇಗದ ರೈಲು 'ವಂದೇ ಭಾರತ್ ಎಕ್ಸ್ಪ್ರೆಸ್'ಗೆ ಕಲ್ಲು ಹೊಡೆದಿರುವ ದುಷ್ಕರ್ಮಿಗಳು ಅದರ ಕಿಟಕಿ ಗಾಜನ್ನು ಪುಡಿಮಾಡಿದ್ದಾರೆ. ಬುಧವಾರ ನವದೆಹಲಿಯಿಂದ ಕಾನ್ಪುರದತ್ತ ತೆರಳುತ್ತಿದ್ದ ರೈಲಿಗೆ ಉತ್ತರ ಪ್ರದೇಶದ ತುಂಡ್ಲಾ ಸಮೀಪ ಈ ಘಟನೆ ನಡೆದಿದೆ. ಇದರಿಂದ ರೈಲಿನ ಒಂದು ಕಿಟಕಿ ಗಾಜು ಪುಡಿಯಾಗಿದೆ.
ಈ ರೈಲಿನ ಅಧಿಕೃತ ವಾಣಿಜ್ಯಾತ್ಮಕ ಸಂಚಾರಕ್ಕೆ ಫೆ. 15ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಮರುದಿನವೇ ಉಂಟಾದ ಸಮಸ್ಯೆಯಿಂದಾಗಿ ರೈಲು ಇದೇ ತುಂಡ್ಲಾದ ಬಳಿ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.
ಕಲ್ಲು ತೂರಾಟದ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ವದೇಶಿ ನಿರ್ಮಿತವಾಗಿರುವ ಈ ರೈಲಿನ ಬಗ್ಗೆ ರಾಹುಲ್ ಗಾಂಧಿ ಟೀಕಿಸಿದ್ದರು. ಆಗಲೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈಗ ಮೂರನೇ ಬಾರಿ ಕಲ್ಲು ಎಸೆದರೂ ರಾಹುಲ್ ಗಾಂಧಿ ಸುಮ್ಮನೆ ಇದ್ದಾರೆ ಎಂದು ಮೋದಿ ಅಭಿಮಾನಿಗಳು ಕಿಡಿಕಾರಿದ್ದಾರೆ.

ಮೂರನೇ ಬಾರಿ ಕಲ್ಲು ತೂರಾಟ
ವಂದೇ ಭಾರತ್ ಸಂಚಾರ ಆರಂಭಿಸಿ ಐದು ದಿನಗಳಾಗಿವೆಯಷ್ಟೇ. ಈ ರೀತಿಯ ಕಲ್ಲು ತೂರಾಟದ ಘಟನೆ ನಡೆದಿರುವುದು ಇದು ಮೂರನೇ ಬಾರಿ. ಟ್ರೈನ್ 18 ಎಂದೂ ಕರೆಯಲಾಗುವ ಈ ರೈಲು ವಾಣಿಜ್ಯಾತ್ಮಕ ಓಡಾಟ ಆರಂಭಿಸುವ ಮುನ್ನವೇ ಎರಡು ಬಾರಿ ಕಲ್ಲು ತೂರಾಟ ನಡೆದಿದ್ದವು. ಕಳೆದ ವರ್ಷದ ಡಿಸೆಂಬರ್ 20ರಂದು ಮೊದಲ ಬಾರಿಗೆ ಈ ರೈಲು ಪರೀಕ್ಷಾರ್ಥ ಪ್ರಯೋಗ ನಡೆಸುವ ಸಂದರ್ಭದಲ್ಲಿ ಕಲ್ಲು ಎಸೆಯಲಾಗಿತ್ತು. ಈ ವರ್ಷದ ಫೆ. 2ರಂದು ಸಹ ಕಿಡಿಗೇಡಿಗಳು ಕಲ್ಲು ತೂರಿದ್ದರು.
|
ವಿರೋಧಿಗಳ ಪ್ರಾಯೋಜಕತ್ವ
ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಿ ಹಾನಿ ಮಾಡಲು ಜನರು ಪ್ರಯತ್ನಿಸುತ್ತಿರುವುದು ವಿಲಕ್ಷಣವೇನಲ್ಲ. ಇದು ಎನ್ಡಿಎ ಸರ್ಕಾರದ ಸಾಧನೆಯ ಕುರುಹುಗಳಿಗೆ ಹಾನಿ ಮಾಡುವ ಉದ್ದೇಶವಾಗಿದ್ದು, ವಿರೋಧಿಗಳು ಇದನ್ನು ಪ್ರಾಯೋಜಿಸಿದ್ದಾರೆ ಎನ್ನುವುದು ನನಗಂತೂ ಖಚಿತವಿದೆ ಎಂದು ಫರ್ಹಾದ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
| Array |
ಯಶಸ್ಸಿನ ಸಂಕೇತ
ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ನಿರಂತರ ಕಲ್ಲು ತೂರಾಟ ನಡೆಯುತ್ತಿರುವುದೇ ಈ ರೈಲು ಬಹುದೊಡ್ಡ ಯಶಸ್ಸು ಸಾಧಿಸಿದೆ ಎನ್ನುವುದಕ್ಕೆ ಸಾಕ್ಷಿ. ಮೇಕ್ ಇನ್ ಇಂಡಿಯಾ ಯೋಜನೆ ಕೆಲಸ ಮಾಡುತ್ತಿದೆ ಎನ್ನುವುದು ಅವರಿಗೆ ಅರ್ಥವಾಗಿದೆ ಮತ್ತು ಒಬ್ಬ ವ್ಯಕ್ತಿಯ ಮೇಲಿನ ದ್ವೇಷ ಇಂತಹ ಕೀಳು ಕೃತ್ಯಕ್ಕೆ ಇಳಿಯುವಂತೆ ಮಾಡುತ್ತಿದೆ ಎಂದು ವಿಶ್ವನಾಥ್ ಚಿಪ್ಲುಂಕರ್ ಎಂಬುವವರು ಕಿಡಿಕಾರಿದ್ದಾರೆ.
|
ಕರುಣೆ ಬೇಡ
ವಂದೇ ಭಾರತ್ ರೈಲಿನ ಮೇಲೆ ಕಲ್ಲು ಎಸೆಯಲಾಗಿದೆ. ಕಲ್ಲು ತೂರುವವರು ದೇಶದ್ರೋಹಿಗಳು. ಅವರ ಮೇಲೆ ಕರುಣೆ ಬೇಡ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲು ಯಾರನ್ನಾದರೂ ಬಿಡಲು ಹೇಗೆ ಸಾಧ್ಯ? ಸರ್ಕಾರ, ಸಿಆರ್ಪಿಎಫ್ ಈ ಕಲ್ಲು ತೂರಾಟಗಾರರ ವಿಚಾರದಲ್ಲಿ ಕಠಿಣವಾಗಿ ನಡೆದುಕೊಳ್ಳಬೇಕು. ಇಂತಹ ದೇಶ ವಿರೋಧಿ ಕೃತ್ಯಗಳಿಂದ ಭಾರತವು ತನ್ನ ರಾಷ್ಟ್ರೀಯ ಹೆಮ್ಮೆಯನ್ನು ಕಳೆದುಕೊಳ್ಳುತ್ತಿದೆ ಎಂದು ಚೆಲ್ಲಪ್ಪ ನಾರಾಯಣನ್ ಹೇಳಿದ್ದಾರೆ.

ಸವಲತ್ತುಗಳನ್ನೇ ಕದಿಯುತ್ತಾರೆ
ಎರಡು ವರ್ಷದ ಹಿಂದೆ ಅಧಿಕ ವೇಗದ ಅರೆ ಐಷಾರಾಮಿ ರೈಲು ತೇಜಸ್ ಎಕ್ಸ್ಪ್ರೆಸ್ ಸಂಚಾರ ಆರಂಭಿಸಿದ್ದಾಗ ಪ್ರಯಾಣಿಕರು ಅದರಲ್ಲಿದ್ದ ಹೆಡ್ಫೋನ್ಗಳನ್ನು ಹೊತ್ತೊಯ್ದು ಎಲ್ಸಿಡಿ ಪರದೆಗಳನ್ನು ಒಡೆದುಹಾಕಿದ್ದರು. ಶೌಚಾಲಗಳನ್ನೂ ಒಡೆದು ಇಡೀ ರೈಲನ್ನು ಗಲೀಜು ಮಾಡಿದ್ದರು. ಅಲ್ಲದೆ, ಎಸಿ ಕೋಚ್ಗಳಲ್ಲಿ ನೀಡುವ ಬೆಡ್ಷೀಟ್, ಟವೆಲ್ಗಳನ್ನು ಹೊತ್ತೊಯ್ಯುವುದು, ಫ್ಯಾನ್, ಲೈಟ್ಗಳನ್ನು ಕದ್ದೊಯ್ಯುವುದು ಕೂಡ ನಿರಂತರವಾಗಿ ನಡೆಯುತ್ತಲೇ ಇವೆ.












Click it and Unblock the Notifications