ಅಮೇಥಿ ಕುರಿತ ಹೇಳಿಕೆಗೆ ರಾಹುಲ್ ವಿರುದ್ಧ ಸ್ಮೃತಿ ಇರಾನಿ ಆಕ್ರೋಶ
ಅಮೇಥಿ, ಮಾರ್ಚ್ 6: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದು, ಅಮೇಥಿ ಜನರನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.
ವಯನಾಡು ಸಂಸದ ರಾಹುಲ್ ಗಾಂಧಿ ಅವರು ಕೇರಳ ಚುನಾವಣೆ ಪ್ರಚಾರದ ವೇಳೆ ಮಾತನಾಡುತ್ತಾ, ಕೇರಳದ ಮತದಾರರೊಂದಿಗೆ ಉತ್ತರ ರಾಜ್ಯದ ಮತದಾರರನ್ನು ಹೋಲಿಕೆ ಮಾಡಿದ್ದಾರೆೀ ಮೂಲಕ ಅವಮಾನ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಸ್ಮೃತಿ ಸವಾಲು; ನಿಮಗೆ ತಾಕತ್ತಿದ್ದರೆ ಗುಜರಾತ್ನಿಂದ ಸ್ಪರ್ಧಿಸಿ ನೋಡಿ
"ಅಮೇಥಿ ಅಭಿವೃದ್ಧಿಗೆ ಏನೂ ಮಾಡದೇ ಇದ್ದರೂ ಇಲ್ಲಿನ ಜನರು ಗಾಂಧಿ ಕುಟುಂಬಕ್ಕೆ ಹದಿನೈದು ವರ್ಷಗಳ ಕಾಲ ಅತೀವ ಪ್ರೀತಿ ನೀಡಿದ್ದಾರೆ. ಆದರೆ ಅವರ ಬಗ್ಗೆಯೇ ಹೀಗೆ ಮಾತನಾಡಿದ್ದಾರೆ. ಅಮೇಥಿ ಜನರಲ್ಲಿ ತಿಳಿವಳಿಕೆ ಕೊರತೆ ಇದೆ ಎಂದು ರಾಹುಲ್ ಗಾಂಧಿ ಹೇಳಿರುವುದು ತಪ್ಪು. ಅಮೇಥಿ ಜನರಲ್ಲಿ ತಿಳಿವಳಿಕೆ ಕೊರತೆ ಇಲ್ಲ, ರಾಹುಲ್ ಗಾಂಧಿಯಲ್ಲಿದೆ" ಎಂದು ಹೇಳಿದರು.
ಈಚೆಗೆ ಕೇರಳ ಪ್ರವಾಸದಲ್ಲಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಬೇರೆ ಬೇರೆ ರೀತಿಯ ರಾಜಕೀಯಗಳನ್ನು ನಾನು ನೋಡಿದ್ದೇನೆ. ಆದರೆ ನನಗೆ ಕೇರಳಕ್ಕೆ ಬಂದಾಗ ಉಲ್ಲಾಸಕರ ಎನಿಸುತ್ತದೆ. ಇಲ್ಲಿನ ಜನರು ಮೂಢವಾಗಿ ವಿಷಯಗಳನ್ನು ನಂಬುವುದಿಲ್ಲ. ಎಲ್ಲವನ್ನೂ ವಿಚಾರ ಮಾಡುತ್ತಾರೆ" ಎನ್ನುತ್ತಲೇ ಅಮೇಥಿ ಜನರಲ್ಲಿ ತಿಳಿವಳಿಕೆ ಕೊರತೆ ಇದೆ ಎಂದಿದ್ದರು.
ಇದಕ್ಕಾಗಿ ಗಾಂಧಿ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ ಸ್ಮೃತಿ ಇರಾನಿ, "ದೇಶದ ಈ ರಾಜಕೀಯ ಕುಟುಂಬ ಅಮೇಥಿಯನ್ನು ಮೂವತ್ತು ವರ್ಷ ಆಳಿದೆ. ಆದರೆ ಅದರ ಅಭಿವೃದ್ಧಿ ಬಗ್ಗೆ ಮಾತ್ರ ಎಂದಿಗೂ ಯೋಚನೆ ಮಾಡಿಲ್ಲ. ಅಮೇಥಿಯನ್ನು ಅಭಿವೃದ್ಧಿ ಮಾಡಿ, ಇಲ್ಲಿ ವೈದ್ಯಕೀಯ ಕಾಲೇಜು ತೆರೆಯುವ ಬದಲು ತಮ್ಮ ಗೆಸ್ಟ್ ಹೌಸ್ ಅಭಿವೃದ್ಧಿ ಮಾಡುವಲ್ಲಿ ಅವರು ನಿರತರಾಗಿದ್ದಾರೆ" ಎಂದು ದೂರಿದರು.