ಮೂರು ರಾಜ್ಯಕ್ಕಾಗಿಯೇ ಜನಿವಾರ ಹಾಕಿದ್ದೇ? ರಾಹುಲ್ಗೆ ಸ್ಮೃತಿ ತರಾಟೆ
ಲಕ್ನೋ, ಜನವರಿ 4: ರಾಮ ಮಂದಿರ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ತನ್ನ ವಕೀಲರ ಮೂಲಕ ಕಾಂಗ್ರೆಸ್ ಗದ್ದಲಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಮ ಭಕ್ತರು ಪಕ್ಷವನ್ನು ಈ ಬಗ್ಗೆ ಪ್ರಶ್ನಿಸಬೇಕು ಎಂದಿದ್ದಾರೆ.
ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ತನ್ನ ವಕೀಲರ ಮೂಲಕ ರಾಜಕೀಯ ಮಾಡಬಾರದು. ಇದು ಜನರ ನಂಬಿಕೆಯ ಸಂಗತಿ. ಅದರ ನಾಯಕರು, ವಕೀಲರು ನ್ಯಾಯಾಲಯದಲ್ಲಿ ಗದ್ದಲ ಸೃಷ್ಟಿಸುತ್ತಿದ್ದಾರೆ. ಜನರು ಮತ್ತು ರಾಮ ಭಕ್ತರು ಪಕ್ಷದ ನಾಯಕ ಜನಿವಾರವನ್ನು ಕೇವಲ ಮೂರು ರಾಜ್ಯಗಳ ಚುನಾವಣೆಗಾಗಿ ಧರಿಸಿದ್ದರೇ ಎಂಬುದನ್ನು ಕೇಳಬೇಕು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಸಂಸತ್ ಕ್ಷೇತ್ರ ಅಮೇಥಿಗೆ ಭೇಟಿ ನೀಡಿದ್ದ ಸ್ಮೃತಿ, ಅಮೇಥಿಗೆ ಕೆಲವು ಗಂಟೆ ತಡವಾಗಿ ಬಂದ ರಾಹುಲ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

'ಅವರು ತಮ್ಮ ಯುದ್ಧ ಭೂಮಿಯಾದ ಅಮೇಥಿಗೆ ತಡವಾಗಿ ಬಂದಿರುವುದು, ಆ ವ್ಯಕ್ತಿ ತಮ್ಮ ಕ್ಷೇತ್ರಕ್ಕೆ ಸಮಯಕ್ಕೆ ಸರಿಯಾಗಿ ಭೇಟಿ ನೀಡಲಾರರು, ಸಮಸ್ಯೆಗಳಿಗೆ ಪರಿಹಾರ ನೀಡಲಾರರು ಎಂಬುದನ್ನು ಸೂಚಿಸುತ್ತದೆ' ಎಂದು ಲೇವಡಿ ಮಾಡಿದರು.
ಗುರುವಾರ ರಾತ್ರಿ ಅಮೇಥಿಗೆ ಬರಬೇಕಿದ್ದ ರಾಹುಲ್ ಗಾಂಧಿ, ಬಳಿಕ ಸಮಯವನ್ನು ಬದಲಿಸಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಲಕ್ನೋ ಬರುವುದಾಗಿ ತಿಳಿಸಿದ್ದರು. ಆ ಸಮಯವನ್ನೂ ಬದಲಿಸಿ ಸಂಜೆಯ ವೇಳೆಯನ್ನು ನಿಗದಿಪಡಿಸಿದ್ದರು.
ರಾಹುಲ್ ಗಾಂಧಿ ನಿಮಗೆ ಭಯಪಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ, 'ಅವರು ಯಾವುದೇ ಭಯವಿಲ್ಲದೆ ಚಾರ್ಟರ್ಡ್ ಫ್ಲೈಟ್ನಲ್ಲಿ ಬರುತ್ತಿದ್ದಾರೆ' ಎಂದು ಸ್ಮೃತಿ ವ್ಯಂಗ್ಯವಾಡಿದ್ದಾರೆ.












Click it and Unblock the Notifications