ಬಾಲಕೋಟ್ ದಾಳಿಗೆ ಸಾಕ್ಷ್ಯ ನೀಡಿ ಎಂದ ಮೃತ ಸೈನಿಕರ ಕುಟುಂಬ
ಲಖನೌ, ಮಾರ್ಚ್ 6: ಪಾಕಿಸ್ತಾನದ ಬಾಲಕೋಟ್ ನಲ್ಲಿ ನಡೆದ ವಾಯು ದಾಳಿಯಿಂದ ಆದ ಪರಿಣಾಮ ಏನು ಎಂಬುದಕ್ಕೆ ಸಾಕ್ಷ್ಯ ನೀಡಿ ಎಂದು ಉತ್ತರಪ್ರದೇಶದ ಇಬ್ಬರು ಹುತಾತ್ಮ ಯೋಧರ ಕುಟುಂಬಗಳು ಕೇಳಿವೆ. ಈ ಇಬ್ಬರು ಯೋಧರು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಶಾಮಿಲಿಯಿಂದ ಪ್ರದೀಪ್ ಕುಮಾರ್ ಹಾಗೂ ಮೈನ್ ಪುರಿಯ ರಾಮ್ ವಕೀಲ್ ಪುಲ್ವಾಮಾ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದವರು. ಫೆಬ್ರವರಿ ಹದಿನಾಲ್ಕರಂದು ಉಗ್ರ ದಾಳಿ ನಡೆದಿತ್ತು. ಫೆಬ್ರವರಿ ಇಪ್ಪತ್ತಾರರಂದು ವಾಯು ದಾಳಿ ನಡೆದಿದ್ದಾಗಿ ಹಾಗೂ ಭಾರೀ ಸಂಖ್ಯೆಯಲ್ಲಿ ಉಗ್ರರು ಹತರಾಗಿದ್ದಾಗಿ ಸರಕಾರ ಹೇಳಿತ್ತು.
ಬಾಲಕೋಟ್ ನ ದಾಳಿಯ ಬಗ್ಗೆ ವಿಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತಿರುವ ಸಂದರ್ಭದಲ್ಲೇ ಈ ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ಕುಟುಂಬದವರು, ದಾಳಿಯ ಪರಿಣಾಮ ಗೊತ್ತಾಗುವಂಥ ಬಲವಾದ ಸಾಕ್ಷ್ಯ ಕೇಳಿದ್ದಾರೆ. ಎಷ್ಟು ಉಗ್ರರು ಹತರಾಗಿದ್ದಾರೆ ಎಂಬ ಅಧಿಕೃತ ಖಾತ್ರಿ ಇಲ್ಲ. ಒಬ್ಬೊಬ್ಬ ಸಚಿವರು ಒಂದೊಂದು ಸಂಖ್ಯೆ ಹೇಳಿದ್ದಾರೆ. ಮೃತದೇಹಗಳ ಲೆಕ್ಕ ಹಾಕುವುದು ನಮ್ಮ ಕೆಲಸ ಅಲ್ಲ ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥರು ಹೇಳಿದ್ದಾರೆ.

ಪುಲ್ವಾಮಾದಲ್ಲಿ ಸಾವನ್ನಪ್ಪಿದವರ ಕೈ, ಕಾಲು ನೋಡಿದೆವು. ಅದೇ ರೀತಿ ಇನ್ನೊಂದು ಕಡೆಯಿಂದಲೂ ನಾವು ನೋಡಬೇಕಿದೆ. ಬಾಂಬ್ ದಾಳಿಯ ಹೊಣೆಯನ್ನು ತಕ್ಷಣ ಯಾರೋ ಹೊತ್ತುಕೊಂಡರು. ನಮಗೆ ಗೊತ್ತಿದೆ, ಭಾರತೀಯ ವಾಯು ಸೇನೆಯಿಂದ ದಾಳಿ ಆಗಿದೆ. ಆದರೆ ಎಲ್ಲಿ ಮಾಡಿದ್ದಾರೆ. ಸ್ಪಷ್ಟ ಸಾಕ್ಷ್ಯ ಬೇಕು. ಹಾಗೆ ಸಾಕ್ಷ್ಯ ಇರದ ಹೊರತು ನಾವು ಹೇಗೆ ಒಪ್ಪಲು ಸಾಧ್ಯ? ತನಗೇನೂ ಹಾನಿ ಆಗಿಲ್ಲ ಅಂತ ಪಾಕಿಸ್ತಾನ ಹೇಳುತ್ತಿದೆ. ಸಾಕ್ಷ್ಯ ಇಲ್ಲದೆ ಭಾರತದ ದಾಳಿ ಒಪ್ಪೋದು ಹೇಗೆ ಎಂದಿದ್ದಾರೆ ರಾಮ್ ವಕೀಲ್ ಸೋದರಿ.
ನಮಗೆ ಸಾಕ್ಷ್ಯ ತೋರಿಸಿ, ಆಗ ನನ್ನ ಸೋದರನ ಹತ್ಯೆಗೆ ಪ್ರತೀಕಾರ ಆಗಿದೆ ಎಂದು ತಿಳಿದುಕೊಳ್ಳುತ್ತೇವೆ. ಅದರಿಂದ ಶಾಂತಿ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಶಾಮ್ಲಿಯಲ್ಲಿ ಪ್ರದೀಪ್ ಕುಮಾರ್ ರ ತಾಯಿ ಅವರು ಸಾಕ್ಷ್ಯಕ್ಕಾಗಿ ಕೇಳಿದ್ದಾರೆ. ನಮಗೆ ಸಮಾಧಾನ ಆಗಿಲ್ಲ. ಹಲವು ಮಕ್ಕಳು ಸಾವನ್ನಪ್ಪಿದರು. ಆದರೆ ಅವರ ಕಡೆ ಒಬ್ಬ ಸತ್ತಿದ್ದೂ ನೋಡಲಿಲ್ಲ. ಎದುರುಗಡೆಯಿಂದ ಯಾವುದೇ ಶವಗಳು ಕಂಡಿಲ್ಲ. ವಾಯು ಸೇನೆ ದಾಳಿ ಪಕ್ಕಾ ಸುದ್ದಿಯೇ ಬಂದಿಲ್ಲ. ನಾವು ಟೀವಿಯಲ್ಲಿ ನೋಡಬೇಕು. ನಮ್ಮ ಮನೆಯಲ್ಲಿ ಹೇಳಬೇಕು. ಭಯೋತ್ಪಾದಕರ ಶವಗಳನ್ನು ನೋಡಬೇಕು ಎಂದಿದ್ದಾರೆ.
ಆದರೆ, ಕೇಂದ್ರ ಸರಕಾರವು ಭಾರತದ ವಾಯು ಸೇನೆಯ ದಾಳಿ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ. ಈ ಬಗ್ಗೆ ನಿತ್ಯವೂ ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.












Click it and Unblock the Notifications