‘ಅತ್ಯಾಚಾರ ಬೆದರಿಕೆ’: ಭಜರಂಗ ಮುನಿ ದಾಸ್ ಸಮರ್ಥನೆ
ಉತ್ತರ ಪ್ರದೇಶದ ಸೀತಾಪುರದಲ್ಲಿ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷದ ಭಾಷಣ ಮಾಡಿ ಅತ್ಯಾಚಾರ ಬೆದರಿಕೆ ಹಾಕಿದ್ದ ಮಹರ್ಷಿ ಲಕ್ಷ್ಮಣ ದಾಸ್ ಉದಾಸಿ ಆಶ್ರಮದ ಭಜರಂಗ ಮುನಿ ದಾಸ್ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ.
ಜಿಲ್ಲಾ ನ್ಯಾಯಾಧೀಶ ಸಂಜಯ್ ಕುಮಾರ್ ಅವರು ಶನಿವಾರ ಜಾಮೀನು ಮಂಜೂರು ಮಾಡಿದ್ದಾರೆ. ಹೀಗಾಗಿ ಮುನಿ ದಾಸ್ ಭಾನುವಾರ ಬೆಳಗ್ಗೆ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಗೊಂಡಿದ್ದಾರೆ. ದಾಸ್ ವಿರುದ್ಧ ರಾಮನರೇಶ್ ಎಂಬಾತ ದೂರು ನೀಡಿದ ನಂತರ ದಾಸ್ ಅವರನ್ನು ಏಪ್ರಿಲ್ 13 ರಂದು ಬಂಧಿಸಲಾಗಿತ್ತು.
ಆದರೆ ಮುನಿ ದಾಸ್ ಬಿಡುಗಡೆಯಾದ ನಂತರ, ತಾನು ಸಾವಿರ ಬಾರಿ ಜೈಲಿಗೆ ಹೋಗಲು ಮತ್ತು ಅನೇಕ ದಾಳಿಗಳನ್ನು ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ. ಜೊತೆಗೆ ತನ್ನ ಧರ್ಮ ಮತ್ತು ಮಹಿಳೆಯರನ್ನು ರಕ್ಷಿಸುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. "ನಾನು ಹೇಳಿದ ವಿಚಾರದ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ," ಎಂದು ಅವರು ಹೇಳಿದ್ದಾರೆ.

ಸೀತಾಪುರದ ಖೈರಾಬಾದ್ ಪಟ್ಟಣದ ಮಹರ್ಷಿ ಲಕ್ಷ್ಮಣ ದಾಸ್ ಉದಾಸಿ ಆಶ್ರಮದ ಮಹಂತರಾದ ದಾಸ್ ಅವರು ಏಪ್ರಿಲ್ 2 ರಂದು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದರು. ಮಸೀದಿಯ ಹೊರಗೆ ಮಾಡಿದ ಭಾಷಣದ ಎರಡು ನಿಮಿಷಗಳ ವೀಡಿಯೊದಲ್ಲಿ, ಅವರು ಸಮುದಾಯವನ್ನು ಉಲ್ಲೇಖಿಸಲು "ಜೆಹಾದಿ" ಎಂಬ ಪದವನ್ನು ಬಳಸುವುದನ್ನು ಕೇಳಬಹುದು ಮತ್ತು ಯಾವುದೇ ಹಿಂದೂ ಹುಡುಗಿಗೆ ಆ ಸಮುದಾಯದ ಯಾರಾದರೂ ಕಿರುಕುಳ ನೀಡಿದರೆ, ಅವರ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದರು.

ಈ ದ್ವೇಷದ ಭಾಷಣದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ದಾಸ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಈ ದ್ವೇಷದ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ತೊಡಗಿತು. ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವ ಮತ್ತೊಂದು ವಿಡಿಯೋ ಕೂಡ ಹೊರಬಿದ್ದಿದೆ. ಆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದಾಸ್ ಬಂಧನಕ್ಕೆ ಒತ್ತಾಯಗಳು ಹೆಚ್ಚಾದ ಬೆನ್ನಲ್ಲೇ ಅವರನ್ನು ಒಂದು ವಾರದ ಬಳಿಕ ಬಂಧಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರ ಬಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications