ಈ ದುರಹಂಕಾರಿ ಸರ್ಕಾರವನ್ನು ರೈತರೇ ಬೀದಿಯಲ್ಲಿ ನಿಲ್ಲಿಸುತ್ತಾರೆ; ಅಖಿಲೇಶ್
ಲಕ್ನೋ, ಡಿಸೆಂಬರ್ 29: "ದೆಹಲಿಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬಿಜೆಪಿಯನ್ನು ಅಧಿಕಾರದಿಂದ ಕೆಳಗೆ ಇಳಿಸುತ್ತಾರೆ, ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸುವುದು ಖಚಿತ" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ.
ಟ್ವೀಟ್ ಗಳ ಮೂಲಕ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ದೂರಿರುವ ಅಖಿಲೇಶ್ ಯಾದವ್, "ಬಿಜೆಪಿ ಮತ್ತೊಂದು ಪಕ್ಷಗಳ ನಾಯಕರ ನಡುವೆಯೇ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ. ಅವರ ನಡುವೆಯೇ ಜಗಳ ಉಂಟುಮಾಡಿ ಲಾಭ ಪಡೆದುಕೊಳ್ಳುತ್ತಿದೆ. ಇದಕ್ಕೆ ಪ್ರಸ್ತುತ ಉತ್ತಮ ಉದಾಹರಣೆ ಎಂದರೆ ಪಶ್ಚಿಮ ಬಂಗಾಳ. ಹಿಂದೆ ಉತ್ತರ ಪ್ರದೇಶದಲ್ಲಿಯೂ ಇದೇ ಕೆಲಸ ಬಿಜೆಪಿಯಿಂದ ನಡೆದಿತ್ತು" ಎಂದು ದೂರಿದ್ದಾರೆ.
ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವ, ನಾವೆಲ್ಲ ರಾಮಭಕ್ತರು: ಅಖಿಲೇಶ್ ಯಾದವ್
"ಬಿಜೆಪಿ ಸರ್ಕಾರ ಅನ್ಯಾಯ ಹಾಗೂ ದೌರ್ಜನ್ಯದ ಎಲ್ಲಾ ಮಿತಿಗಳನ್ನು ಮೀರುತ್ತಿದೆ. ಯಾರು ಅನ್ಯಾಯದ ವಿರುದ್ಧ ದನಿ ಎತ್ತುತ್ತಾರೋ ಆ ದನಿಯನ್ನು ಸರ್ಕಾರ ಅಡಗಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರದಿಂದ ಇಳಿದರಷ್ಟೇ ಪ್ರಜಾಪ್ರಭುತ್ವ ಉಳಿದುಕೊಳ್ಳುವುದು" ಎಂದಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, "ಈ ರೈತರಿಗೆ ನಮ್ಮ ಬೆಂಬಲವಿದೆ. ಇಂಥ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಸರ್ಕಾರ ಕಾಳಜಿ ತೋರದೇ ನಿರಂತರವಾಗಿ ಅಗೌರವ ಸೂಚಿಸುತ್ತಿದೆ. ಈ ಅಹಂಕಾರದ ಸರ್ಕಾರವನ್ನು ರೈತರೇ ಬೀದಿಗೆ ತರುತ್ತಾರೆ. ಯಾವುದೇ ಸರ್ಕಾರದ ಅವಧಿಯಲ್ಲೂ ಈ ಮಟ್ಟದ ಭ್ರಷ್ಟಾಚಾರ ನಡೆದಿಲ್ಲ. ದೇಶದ ಆರ್ಥಿಕತೆಗೇ ಪೆಟ್ಟುಬಿದ್ದ ಸಂದರ್ಭ ಈ ಸರ್ಕಾರದಿಂದ ಸೃಷ್ಟಿಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.