ಏರ್ ಸ್ಟ್ರೈಕ್ ನಂತರ ಉತ್ತರ ಪ್ರದೇಶದಲ್ಲಿ ಬದಲಾಗಲಿದೆಯೆ ಬಿಜೆಪಿ ಲಕ್ಕು?

Recommended Video

      Lok Sabha Elections 2019 : ಏರ್ ಸ್ಟ್ರೈಕ್ ನಂತರ ಬಿಜೆಪಿ ಅದೃಷ್ಟ ಬದಲಾಗುತ್ತಾ? | Oneindia Kannada

      ನವದೆಹಲಿ, ಮಾರ್ಚ್ 11 : ದೇಶದ ಅತೀದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ನಂತರ ಮೇ 23ರಂದು ಪ್ರಕಟವಾಗಲಿರುವ ಫಲಿತಾಂಶ ಭಾರೀ ಕುತೂಹಲ ಹುಟ್ಟಿಸಲಿದೆ. ಇರುವ 80 ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟು ಕ್ಷೇತ್ರಗಳು ಯಾವ ಪಕ್ಷಕ್ಕೆ ಒಲಿಯಲಿವೆ?

      ಹಿಂದೆ ಕೂಡ ಹಲವಾರು ಸಂಸ್ಥೆಗಳು ಈ ಬಗ್ಗೆ ಸಮೀಕ್ಷೆಗಳನ್ನು ನಡೆಸಿವೆ. ಭಾರತೀಯ ಜನತಾ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದರೆ ಏನಾಗಲಿದೆ, ಬಿಡಿಬಿಡಿಯಾಗಿ ಸ್ಪರ್ಧೆಗಿಳಿದರೆ ಯಾರಿಗೆ ಎಷ್ಟು ಸೀಟುಗಳು ಲಭಿಸಲಿವೆ ಇತ್ಯಾದಿ ಇತ್ಯಾದಿ ವರದಿಗಳು ಬಂದಿವೆ.

      ಆದರೆ, ಇಂಡಿಯಾ ಟಿವಿ ಮತ್ತು ಸಿಎನ್ಎಕ್ಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಎಲ್ಲಾ ರಾಜಕೀಯ ಪಕ್ಷಗಳ ಹುಬ್ಬೇರುವಂತೆ ಮಾಡಿದೆ. ಏಕೆಂದರೆ, ಈ ಸಮೀಕ್ಷೆಯನ್ನು ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ಏರ್ ಸ್ಟ್ರೈಕ್ ನಂತರ ನಡೆಸಿದ್ದಾಗಿದೆ.

      ಏರ್ ಸ್ಟ್ರೈಕನ್ನು ಯಾವುದೇ ರಾಜಕೀಯ ಪಕ್ಷ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ಬಗ್ಗೆ ವಾದ-ವಿವಾದಗಳು, ಅಭಿಪ್ರಾಯಗಳು ಏನೇ ಇರಲಿ, ಯಾವುದೇ ರಾಜಕೀಯ ಪಕ್ಷ ಏರ್ ಸ್ಟ್ರೈಕನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದಿದ್ದರೂ ಜನರ ಅಭಿಪ್ರಾಯವನ್ನು ಬದಲಿಸಲು ಸಾಧ್ಯವಿಲ್ಲ ಅಲ್ಲವೆ?

      ಬಿಜೆಪಿಗೆ ವರವಾಗಲಿದೆಯೇ ಏರ್ ಸ್ಟ್ರೈಕ್

      ಬಿಜೆಪಿಗೆ ವರವಾಗಲಿದೆಯೇ ಏರ್ ಸ್ಟ್ರೈಕ್

      ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 80 ಕ್ಷೇತ್ರಗಳಲ್ಲಿ 41 ಕ್ಷೇತ್ರಗಳನ್ನು ಬಾಚಿಕೊಳ್ಳಲಿದೆ ಎಂದು ಈ ಸಮೀಕ್ಷೆ ವರದಿ ಮಾಡಿದೆ. ಇದು ಬಿಜೆಪಿ ವಿರೋಧಿ ಪಕ್ಷಗಳಿಗೆ ಸ್ವಲ್ಪ ನಡುಕ ತಂದರೂ ಅಚ್ಚರಿಯಿಲ್ಲ. ಇನ್ನು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಮಾಯಾವತಿ ಅವರ ನಾಯಕತ್ವದ ಬಹುಜನ ಸಮಾಜವಾದಿ ಪಕ್ಷ ಮತ್ತು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕ ದಳ ರಚಿಸಿಕೊಂಡಿರುವ ಮಹಾಘಟಬಂಧನ್ ಕೇವಲ 35 ಸೀಟುಗಳನ್ನು ಮಾತ್ರ ಗೆಲ್ಲಲು ಯಶಸ್ವಿಯಾಗಲಿದೆ. ಇದು ಹಿಂದಿನ ಸಮೀಕ್ಷೆಗಳಲ್ಲಿ ಹೇಳಿದ್ದಕ್ಕಿಂತ ಕಡಿಮೆಯಾಗಿರುವುದು ಮಹಾಘಟಬಂಧನ್ ಗೆ ತಲೆನೋವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.

      ಏರ್ ಸ್ಟ್ರೈಕ್ ನಂತರ ಬಿಜೆಪಿ ಜನಪ್ರಿಯತೆ ಏರಿಕೆ

      ಏರ್ ಸ್ಟ್ರೈಕ್ ನಂತರ ಬಿಜೆಪಿ ಜನಪ್ರಿಯತೆ ಏರಿಕೆ

      ಇದೇ ಸಿಎನ್ಎಕ್ಸ್ ಸಂಸ್ಥೆ ಪುಲ್ವಾಮಾ ದಾಳಿಯ ನಂತರ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 29 ಸೀಟುಗಳನ್ನು ಗೆಲ್ಲತ್ತದೆ ಎಂದು ತಿಳಿಸಿತ್ತು. ಏರ್ ಸ್ಟ್ರೈಕ್ ನಂತರ ಖಂಡಿತವಾಗಿ ಬಿಜೆಪಿಯ ಜನಪ್ರಿಯತೆ ಬೆಳೆದಿರುವುದು ಈ ಸಮೀಕ್ಷೆಯಿಂದ ಸಾಬೀತಾಗುತ್ತಿದೆ. ಆದರೆ, ಅದೇ ಮಹಾಘಟಬಂಧನ್ 49 ಲೋಕಸಭೆ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಆ ಸಮೀಕ್ಷೆ ಹೇಳಿತ್ತು. ಆದರೆ, ಕೇವಲ ಹನ್ನೆರಡು ದಿನಗಳಲ್ಲಿ ನಡೆಸಿದ ಏರ್ ಸ್ಟ್ರೈಕ್ ಈ ಚಿತ್ರಣವನ್ನು ಬದಲಾಯಿಸಿದೆ. ಎಸ್ಬಿ, ಬಿಎಸ್ಪಿ ಮೈತ್ರಿಕೂಡ ಕನಿಷ್ಠ ಹದಿನಾಲ್ಕು ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದೆ.

      ಕಾಂಗ್ರೆಸ್ ಹಣೆಬರಹದಲ್ಲಿ ಬದಲಾವಣೆ ಇಲ್ಲ

      ಕಾಂಗ್ರೆಸ್ ಹಣೆಬರಹದಲ್ಲಿ ಬದಲಾವಣೆ ಇಲ್ಲ

      ಕಾಂಗ್ರೆಸ್ಸಿನ ಹಣೆಬರಹದಲ್ಲಿ ಅಂತಹ ಬದಲಾವಣೆ ಕಂಡುಬರುವುದಿಲ್ಲ. ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಸೀಟು ಮಾತ್ರ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಎರಡು ಸೀಟು ಹೆಚ್ಚಿಗೆ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇದು, ಬಿಜೆಪಿಯನ್ನು ಕೇಂದ್ರದಲ್ಲಿ ಕೆಡವಿ ಮತ್ತೆ ಅಧಿಕಾರ ಗದ್ದುಗೆಯೇರಲು ಭಾರೀ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ಸಿಗೆ ಅಂತಹ ಹೇಳಿಕೊಳ್ಳುವಂತಹ ಸಾಧನೆಯೇನಲ್ಲ. ಎರಡು ಸೀಟು ಹೆಚ್ಚಿಗೆ ಗೆದ್ದಿದ್ದಕ್ಕೆ ಕಾಂಗ್ರೆಸ್ ಬೀಗುವಂತೆಯೂ ಇಲ್ಲ. ಅಂದ ಹಾಗೆ, ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಅವರು ಕೂಡ ಸ್ಪರ್ಧಿಸುತ್ತಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಈ ಬಾರಿಯೂ ಕ್ರಮವಾಗಿ ಅಮೇಥಿ ಮತ್ತು ರಾಯ್ ಬರೇಲಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ಪ್ರಿಯಾಂಕಾ ವಾದ್ರಾ ಬಂದರೂ ಬದಲಾಗದೆ ಕಾಂಗ್ರೆಸ್ ಲಕ್ಕು?

      ಬಿಜೆಪಿ ಮತಗಳಿಕೆ ಏರಿಸಿದ ಏರ್ ಸ್ಟ್ರೈಕ್

      ಬಿಜೆಪಿ ಮತಗಳಿಕೆ ಏರಿಸಿದ ಏರ್ ಸ್ಟ್ರೈಕ್

      ಏರ್ ಸ್ಟ್ರೈಕ್ ನಂತರ ಬಿಜೆಪಿ ನೇತೃತ್ವದ ಎನ್‌ಡಿಎನಲ್ಲಿ ಮತಗಳಿಕೆಯ ಶೇಕಡಾವಾರು ಪ್ರಮಾಣ ಕೂಡ ಏರಿಕೆಯಾಗಲಿದೆ. ಬಿಜೆಪಿ ಶೇ.49.95ರಷ್ಟು ಮತಗಳನ್ನು ಗಳಿಸಿದರೆ, ಸಮಾಜವಾದಿ ಪಕ್ಷ ಶೇ.17 ಮತ್ತು ಬಹುಜನ ಸಮಾಜ ಪಕ್ಷ ಶೇ.18.03ಯಷ್ಟು ಮತಗಳನ್ನು ಗಳಿಸಲಿವೆ. ನಾಲ್ಕನೇ ಸ್ಥಾನದಲ್ಲಿ ಕಾಂಗ್ರೆಸ್ ಕೇವಲ ಶೇ.11.37ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 71 ಸೀಟು ಗೆದ್ದಿದ್ದರೆ, ಸಮಾಜವಾದಿ ಪಕ್ಷ 5ರಲ್ಲಿ ಗೆದ್ದಿತ್ತು. ಕಾಂಗ್ರೆಸ್ ಕೇವಲ 2 ಸೀಟು ಗೆದ್ದಿದ್ದರೆ, ಈಬಾರಿ ಭಾರೀ ಹುಮ್ಮಸ್ಸಿನಲ್ಲಿರುವ ಮಾಯಾವತಿ ಅವರು ಕಳೆದ ಬಾರಿ ಗೆದ್ದಿದ್ದು ಶೂನ್ಯ.

      ಏರ್ ಸ್ಟ್ರೈಕ್ ಗೆ ಸಾಕ್ಷ್ಯ ಕೊಡಬೇಕಾ?

      ಏರ್ ಸ್ಟ್ರೈಕ್ ಗೆ ಸಾಕ್ಷ್ಯ ಕೊಡಬೇಕಾ?

      ಈ ರೀತಿ ಬದಲಾವಣೆಗಳಾಗಲು ಕಾರಣಗಳೂ ಇಲ್ಲದಿಲ್ಲ. ಪಾಕಿಸ್ತಾನ ಬೆಂಬಲಿಸುತ್ತಿರುವ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ತಾಣಗಳ ಮೇಲೆ ನಡೆಸಿದ ಏರ್ ಸ್ಟ್ರೈಕನ್ನು ನಡೆಸಿದ್ದಕ್ಕೆ ಕೇಂದ್ರ ಸರಕಾರ ಸಾಕ್ಷ್ಯ ಕೊಡಬೇಕು ಎಂದು ವಿರೋಧ ಪಕ್ಷದವರು ಆಗ್ರಹಿಸಿದ್ದನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, ಶೇ.56.91ರಷ್ಟು ಜನ 'ಇಲ್ಲ' ಎಂದು ಹೇಳಿದ್ದರು, ಶೇ.22ರಷ್ಟು 'ಹೌದು' ಎಂದಿದ್ದರೆ, ಶೇ.21.09ರಷ್ಟು ಜನ 'ಗೊತ್ತಿಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಹುಜನರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿರುವುದು ಇದರಿಂದ ನಿಚ್ಚಳವಾಗಿದೆ.

      ಏರ್ ಸ್ಟ್ರೈಕ್ ನಡೆಸಿದ ನಂತರ ಆಯ್ಕೆ ಬದಲಾಗಿದೆಯೆ

      ಏರ್ ಸ್ಟ್ರೈಕ್ ನಡೆಸಿದ ನಂತರ ಆಯ್ಕೆ ಬದಲಾಗಿದೆಯೆ

      ಏರ್ ಸ್ಟ್ರೈಕ್ ನಡೆಸಿದ ನಂತರ ನಿಮ್ಮ ಆಯ್ಕೆ ಬದಲಾಗಿದೆಯೆ ಎಂದು ಕೇಳಿದ ಪ್ರಶ್ನೆಗೂ ಶೇ.32.05ರಷ್ಟು ಜನರು 'ಸಾಕಷ್ಟು ಬದಲಾವಣೆ' ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.40.65ರಷ್ಟು ಮತದಾರರು 'ಅಷ್ಟೇನೂ ಇಲ್ಲ' ಎಂದಿದ್ದಾರೆ, ಶೇ.27.30ರಷ್ಟು ಜನರು 'ಏನನ್ನೂ ಹೇಳಲಾರೆ' ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಪಾಕಿಸ್ತಾನದ ವಿರುದ್ಧ ಯುದ್ಧವೊಂದೇ ಎರಡೂ ದೇಶಗಳ ನಡುವಿನ ಸಮಸ್ಯೆಗಳಿಗೂ ಪರಿಹಾರವೇ ಎಂಬ ಪ್ರಶ್ನೆಗೆ ಶೇ.62.82ರಷ್ಟು ಜನರು 'ಹೌದು, ಯುದ್ಧ ಬೇಕು' ಎಂದು ಹೇಳಿದ್ದಾರೆ. ಶೇ.25.79ರಷ್ಟು ಜನರು 'ಯುದ್ಧ ಬೇಡವೇ ಬೇಡ' ಎಂದಿದ್ದರೆ, ಶೇ.11.39ರಷ್ಟು ಜನರು 'ನಮಗಿದರ ಬಗ್ಗೆ ಅಷ್ಟು ಗೊತ್ತಿಲ್ಲ' ಎಂದು ನುಡಿದಿದ್ದಾರೆ.

      ಉಗ್ರವಾದವನ್ನು ಪ್ರಾಮಾಣಿಕವಾಗಿ ಹತ್ತಿಕ್ಕಿದವರು

      ಉಗ್ರವಾದವನ್ನು ಪ್ರಾಮಾಣಿಕವಾಗಿ ಹತ್ತಿಕ್ಕಿದವರು

      ಈಗಿರುವ ಮತ್ತು ಹಿಂದಿರುವ ಯಾವ ಸರಕಾರ ಭಯೋತ್ಪಾದನೆಯನ್ನು ಅತ್ಯಂತ ಸಮರ್ಥವಾಗಿ ಮತ್ತು ಅತ್ಯಂತ ಪ್ರಾಮಾಣಿಕವಾಗಿ ಹತ್ತಿಕ್ಕಿವೆ ಎಂಬ ಪ್ರಶ್ನೆಗೆ, ಶೇ.48.99ರಷ್ಟು ಜನರು 'ಮೋದಿ ಸರಕಾರ' ಎಂದು ಒಕ್ಕೊರಲಿನಿಂದ ಕೂಗಿದ್ದಾರೆ. ಹಿಂದಿನ ಮನಮೋಹನ ಸಿಂಗ್ ಅವರು ಸರಕಾರಕ್ಕೆ ಸಿಕ್ಕಿದ್ದು ಶೇ.11.62 ಮತಗಳು, ಎರಡೂ ಸರಕಾರಕ್ಕೆ ಸಿಕ್ಕಿದ್ದು ಶೇ.10.48ರಷ್ಟು ಮತಗಳು. ಶೇ.20.81ರಷ್ಟು ಜನರು ಇಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದಿದ್ದರೆ, ಗೊತ್ತಿಲ್ಲ ಅಂದವರು ಶೇ.8.10ರಷ್ಟು ಜನರು ಮಾತ್ರ. ಇನ್ನು, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಬಿಗಿಮುಷ್ಠಿಯಿಂದ ಬಿಡಿಸಿಕೊಂಡು ಬಂದ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂದು ಕೇಳಿದ ಪ್ರಶ್ನೆಗೆ, ಶೇ.75.41ರಷ್ಟು ಜನರು ನರೇಂದ್ರ ಮೋದಿ ಸರಕಾರಕ್ಕೆ ನೀಡಿದ್ದಾರೆ. ಶೇ.10.12ರಷ್ಟು ಜನರು ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ್ದಾರೆ.

      ಯಡಿಯೂರಪ್ಪ ಕೂಡ ಇದೇ ಹೇಳಿದ್ದರು

      ಯಡಿಯೂರಪ್ಪ ಕೂಡ ಇದೇ ಹೇಳಿದ್ದರು

      ಕೆಲದಿನಗಳ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಆಡಿದ್ದ ಒಂದು ಮಾತು ಭಾರೀ ವಿವಾದ ಸೃಷ್ಟಿಸಿತ್ತು. ಅದೇನೆಂದರೆ, 'ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿಜೆಪಿ ಸರಕಾರ ಮಾಡಿದ ಏರ್ ಸ್ಟ್ರೈಕ್ ನಿಂದಾಗಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲಿದೆ' ಎಂದು. ವಿರೋಧ ಪಕ್ಷಗಳು ಯಡಿಯೂರಪ್ಪನವರು ಏರ್ ಸ್ಟ್ರೈಕನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹುಯಿಲೆಬ್ಬಿಸಿದ್ದರು. ಇದು ತುಸುಮಟ್ಟಿಗೆ ತಣ್ಣಗಾಗಿದ್ದರೂ ಏರ್ ಸ್ಟ್ರೈಕ್ ಕರ್ನಾಟಕದಲ್ಲಿ ಬಿಜೆಪಿಗೆ ಅಂತಹ ಲಾಭ ತಂದುಕೊಡುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಏಕೆಂದರೆ, ಬಿಜೆಪಿ ಈ ಬಾರಿ ಕೇವಲ 13 ಸೀಟುಗಳನ್ನು ಮಾತ್ರ ಗೆಲ್ಲಲಿದೆ. ಕಾಂಗ್ರೆಸ್ಸಿಗೆ 13 ಸೀಟುಗಳು ದಕ್ಕಿದರೆ ಉಳಿದೆರಡು ಜೆಡಿಎಸ್ ಪಾಲಾಗಲಿವೆ ಎಂದು ಇದೇ ಸಮೀಕ್ಷೆ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+