ವಾರಣಾಸಿಯಲ್ಲಿ ಪ್ರಧಾನಿ: ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂ ಜೊತೆ ಮೋದಿ ಸಭೆ
ವಾರಣಾಸಿ, ಡಿಸೆಂಬರ್ 14: ಸೋಮವಾರ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ದಿನವೂ ವಾರಣಾಸಿಯಲ್ಲಿ ಹಲವು ಕಾರ್ಯಕ್ರಮ ಮತ್ತು ಸಭೆ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ.
ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ತ್ರಿಪುರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಹಾರ ಮತ್ತು ನಾಗಾಲ್ಯಾಂಡ್ ಉಪ ಮುಖ್ಯಮಂತ್ರಿಗಳು ಸಹ ಸಭೆಗೆ ಹಾಜರಾಗಲಿದ್ದಾರೆ.
ಸಿಎಂಗಳ ಜೊತೆಗಿನ ಸಭೆಯ ನಂತರ ವಾರಣಾಸಿತ್ನ ಸ್ವರ್ವೇದ್ ಮಹಾಮಂದಿರದಲ್ಲಿ ಮಧ್ಯಾಹ್ನ 3:30ಕ್ಕೆ ಸದ್ಗುರು ಸದಾಫಲ್ದಿಯೋ ವಿಹಂಗಮ ಯೋಗ ಸಂಸ್ಥಾನದ 98ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ ಮೋದಿ:
ಸೋಮವಾರ ಉತ್ತರ ಪ್ರದೇಶದ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, 339 ಕೋಟಿ ವೆಚ್ಚದ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದರು. ಈ ಯೋಜನೆ ಮೂಲಕ ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾ ಘಾಟ್ಗಳ ನಡುವೆ ಸಂಪರ್ಕ ಕಲ್ಪಿಸಲಾಗಿದೆ.
ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಕರ್ಯ ಕೇಂದ್ರಗಳು, ವೈದಿಕ ಕೇಂದ್ರ, ಮುಮುಕ್ಷು ಭವನ, , ಭೋಗಶಾಲಾ, ಸಿಟಿ ಮ್ಯೂಸಿಯಂ, ವ್ಯೂಯಿಂಗ್ ಗ್ಯಾಲರಿ, ಫುಡ್ ಕೋರ್ಟ್, ಇತ್ಯಾದಿ ಸೇರಿದಂತೆ ಪ್ರವಾಸಿಗರಿಗೆ ಅಸಂಖ್ಯಾತ ಸೌಲಭ್ಯಗಳನ್ನು ಒದಗಿಸುವ ಕಾಶಿ ವಿಶ್ವನಾಥ ಯೋಜನೆಯ ಮೊದಲ ಹಂತದಲ್ಲಿ ಒಟ್ಟು 23 ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. * ಯೋಜನಾ ಪ್ರದೇಶದ ವಿಸ್ತಾರವು 5 ಲಕ್ಷ ಚದರ ಅಡಿಗಳಷ್ಟು ದೊಡ್ಡದಾಗಿದೆ, ಹಿಂದಿನ ಆವರಣವು ಕೇವಲ 3,000 ಚದರ ಅಡಿಗಳಿಗೆ ಸೀಮಿತವಾಗಿತ್ತು.
ಕಾಶಿ ವಿಶ್ವನಾಥ ಮತ್ತು ಕಾಲಭೈರವನಿಗೆ ಪ್ರಧಾನಿ ಪೂಜೆ:
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೂ ಮೊದಲು ಪವಿತ್ರ ಗಂಗೆಯಲ್ಲಿ ಮಿಂದೆದ್ದ ಪ್ರಧಾನಿ ಮೋದಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಗರ್ಭಗುಡಿಯ ಒಳಗೆ, ಅವರು ಕಾಶಿ ವಿಶ್ವನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕಾಂತ್ ಮಿಶ್ರಾ ಸಹಾಯದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಗಂಗೆಯಲ್ಲಿ ಪವಿತ್ರ ಸ್ನಾನ, ಕಾಲ ಭೈರವ ದೇವಾಲಯದಲ್ಲಿ ಕ್ಷೀರಾಭಿಷೇಕ, ಮಹಾ ಮಂಗಳಾರತಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಾರ್ಥನೆ ಸಲ್ಲಿಸಿದರು.

ಭಾರತದ ಅಭಿವೃದ್ಧಿಗೆ ಪ್ರಧಾನಿ 3 ಸಂಕಲ್ಪ:
ಭಾರತದ ಅಭಿವೃದ್ಧಿಗೆ ನಾವು ಮೂರು ಸಂಕಲ್ಪಗಳನ್ನು ಮಾಡಬೇಕಾಗಿದ್ದು, ಸ್ವಚ್ಛತೆ, ಸೃಜಲಶೀಲತೆ ಮತ್ತು ಆತ್ಮನಿರ್ಭರ್ ಭಾರತ ಎಂಬ ಸಂಕಲ್ಪಕ್ಕೆ ಪ್ರಧಾನಿ ಮೋದಿ ಕರೆ ನೀಡಿದರು. ಸ್ವಚ್ಛತೆಯು ಜೀವನಶೈಲಿ ಆಗಿರುತ್ತದೆ. ಸ್ವಚ್ಛತೆ ಇಲ್ಲದಿದ್ದರೆ ನಾವು ಮುಂದುವರಿಯುವುದು ನಮಗೆ ಕಷ್ಟಸಾಧ್ಯವಾಗುತ್ತದೆ. ಇಂದು ಬನಾರಸ್ ನಲ್ಲೂ ಕೂಡಾ ಸ್ವಚ್ಛತೆಗಾಗಿ ನಾವು ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಶಿ ವಿಶ್ವನಾಥನ ಸನ್ನಿಧಿ ಸಂಸ್ಕೃತಿ, ಸಂಪ್ರದಾಯದ ಸಂಕೇತ:
ಕಾಶಿ ವಿಶ್ವನಾಥನ ಸನ್ನಿಧಿಯು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರಗತಿಯ ಪ್ರತಿಬಿಂಬವಾಗಿದೆ. ನೀವು ಇಲ್ಲಿಗೆ ಬಂದಾಗ ನಿಮ್ಮಲ್ಲಿ ವಿಶ್ವಾಸವನ್ನು ಮೂಡಿಸುವುದು ಮಾತ್ರವಲ್ಲ, ಗತಕಾಲದ ಬಗ್ಗೆ ಹೆಮ್ಮೆ ಪಡುವಂತಹ ಸ್ಥಳವಾಗಿದೆ. ಪ್ರಾಚೀನ ಮತ್ತು ವರ್ತಮಾನವು ಇಲ್ಲಿ ಹೇಗೆ ಬೆರೆಯುತ್ತಿದೆ ಎಂಬುದನ್ನು ನೋಡಬಹುದಾಗಿದೆ. ವಿಶ್ವನಾಥ ಧಾಮವು ಇಂದು ಶಕ್ತಿ ಕೇಂದ್ರವಾಗಿದ್ದು, ಅದರ ಮಹತ್ವ ಸ್ಪಷ್ಟವಾಗಿದೆ. ಆಸುಪಾಸಿನಲ್ಲಿ ಕಳೆದು ಹೋಗಿದ್ದ ಹಲವು ಪುರಾತನ ದೇವಾಲಯಗಳನ್ನು ಮತ್ತೆ ಜೀರ್ಣೋದ್ಧಾರ ಮಾಡಲಾಗಿದೆ. ಬಾಬಾರವರು ತಮ್ಮ ಭಕ್ತರ ಸೇವೆಯಿಂದ ಸಂತೋಷಗೊಂಡಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಇಂದು ನಮ್ಮನ್ನು ಆಶೀರ್ವದಿಸಿದ್ದಾರೆ ಎಂದು ಮೋದಿ ಹೇಳಿದ್ದರು.












Click it and Unblock the Notifications