'ದೇಶವನ್ನು ತುಂಡು ಮಾಡುವ ಮಾತನಾಡುವವರು ಗೆಲ್ಲಲು ಸಾಧ್ಯವೇ ಇಲ್ಲ'
ಗೋರಖ್ ಪುರ್ (ಉತ್ತರಪ್ರದೇಶ), ಮೇ 24 : ದೇಶವನ್ನು ತುಂಡು ತುಂಡು ಮಾಡುವ ಮಾತನಾಡುವವರು ಎಂದಿಗೂ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವಿಲ್ಲ ಎಂದು ನಟ ಹಾಗೂ ಗೋರಖ್ ಪುರ್ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸಿರುವ ರವಿಕಿಶನ್ ಅವರು ಜೆಎನ್ ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧ ಕಿಡಿಯಾಗಿದ್ದಾರೆ.
ದೇಶ್ ಕೆ ತುಕ್ಡೆ ತುಕ್ದೆ ಅಂತ ನೀವು ಹೇಳಿದ ಮೇಲೆ ಜನರ ನಂಬಿಕೆಯನ್ನು ಪಡೆಯಲು ಸಾಧ್ಯವೇ ಇಲ್ಲ. ದೇಶವಿರೋಧಿಯಾಗಿ ಮತ್ತು ದೇಶದ ವಿರುದ್ಧ ಮಾತನಾಡಿ, ಆಡಳಿತಾರೂಢ ಸರಕಾರವನ್ನು ಬಯ್ದು ನೀವು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ. ಅಂದಹಾಗೆ ಕನ್ಹಯ್ಯಾ ಕುಮಾರ್ ಬೆಗುಸರಾಯ್ ನಲ್ಲಿ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಸ್ಪರ್ಧಿಸಿ, ಭಾರೀ ಅಂತರದಿಂದ ಸೋತಿದ್ದಾರೆ.
ಲೋಕ ಸಮರ: ನಿರುದ್ಯೋಗಿ ಕನ್ಹಯ್ಯಾ ಕುಮಾರ್ ಬಳಿ 6 ಲಕ್ಷ ರುಪಾಯಿ ಆಸ್ತಿ
ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕನ್ಹಯ್ಯಾ ಕೂಗಿದರು ಎಂಬ ಆರೋಪ ಬಂದ ಮೇಲೆ ಮೂರು ವರ್ಷದ ಹಿಂದೆ ಪ್ರಚಾರಕ್ಕೆ ಬಂದರು. ಕಳೆದ ಬಾರಿ ಜೌನ್ ಪುರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದ ರವಿಕಿಶನ್ ಸೋಲಪ್ಪಿದ್ದರು. ಎರಡು ವರ್ಷಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದರು.
ಉತ್ತರಪ್ರದೇಶದ ಗೋರಖ್ ಪುರ್ ಕ್ಷೇತ್ರದಲ್ಲಿ ಐದು ಬಾರಿ ಯೋಗಿ ಆದಿತ್ಯನಾಥ್ ಗೆದ್ದಿದ್ದರು. ಅವರು ಮುಖ್ಯಮಂತ್ರಿ ಆದ ನಂತರ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಷಾದ್ ವಿಜಯಿ ಆಗಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೋರಖ್ ಪುರ್ ನಲ್ಲಿ ರವಿಕಿಶನ್ ತಮ್ಮ ಪ್ರತಿಸ್ಪರ್ಧಿ- ಸಮಾಜವಾದಿ ಪಕ್ಷದ ರಂಭುವಲ್ ನಿಷಾದ್ ರನ್ನು ಮೂರು ಲಕ್ಷ ಮತದ ಅಂತರದಿಂದ ಸೋಲಿಸಿದ್ದಾರೆ.
ಇನ್ನು ಬೆಗುಸರಾಯ್ ನಲ್ಲಿ ಸಿಪಿಐನಿಂದ ಕನ್ಹಯ್ಯಾ ಕುಮಾರ್ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ನಾಲ್ಕು ಲಕ್ಷಕ್ಕೂ ಹೆಚ್ಚು ಮತದ ಅಂತರದಿಂದ ಸೋತಿದ್ದಾರೆ.