'ಮೋದಿಜೀ ನೀವು ಲಖಿಂಪುರ ಖೇರಿಗೆ ಹೋಗುತ್ತೀರಾ?: ಪ್ರಿಯಾಂಕಾ ಗಾಂಧಿ ಪ್ರಶ್ನೆ
ಲಕ್ನೋ, ಅಕ್ಟೋಬರ್ 05: "ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಾರಾ," ಎಂದು ಸೋಮವಾರ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.
ತನ್ನನ್ನು ಪೊಲೀಸರು ವಶಕ್ಕೆ ಪಡೆದದ್ದು ಅಕ್ರಮ, ಹತ್ತತ್ತಿರ 24 ಗಂಟೆ ನನ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಹರಿದು ಹೋದ ವಾಹನದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾರ ಪುತ್ರ ಇದ್ದ ಎಂಬ ಆರೋಪದ ಬಗ್ಗೆ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
"ಯಾವುದೇ ಆದೇಶವಿಲ್ಲದೆ ವಿರೋಧ ಪಕ್ಷದ ನಾಯಕರನ್ನು ಬಂಧನ ಯಾಕೆ ಮಾಡಲಾಗಿದೆ. ಇಂತಹ ಹೇಯ ಕೃತ್ಯವನ್ನು ಮಾಡಿದ ವ್ಯಕ್ತಿಯನ್ನು ಈವರೆಗೂ ಬಂಧನ ಮಾಡಿಲ್ಲ. ಪ್ರಧಾನಿ ಮೋದಿ ಅವರೇ, ಆ ಆರೋಪಿಯನ್ನು ಬಂಧನ ಮಾಡಿಸಿ, ನಮ್ಮಂತಹ ಜನರ ಬಂಧನ ಮಾಡುವುದು ಅಲ್ಲ," ಎಂದು ಹೇಳಿದ್ದಾರೆ.

ಸೋಮವಾರ ಮುಂಜಾನೆಯಿಂದ ಸೀತಾಪುರ ಅತಿಥಿ ಗೃಹದಲ್ಲಿ ಪೊಲೀಸರ ವಶದಲ್ಲಿ ಇರುವ ಪ್ರಿಯಾಂಕಾ ಗಾಂಧಿ ಎನ್ಡಿ ಟಿವಿಗೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಕೇಂದ್ರ ಸರ್ಕಾರದ ವಿರುದ್ದ, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಹೌಹಾರಿದ್ದಾರೆ. ಸ್ವಾತ್ರಂತ್ಯ್ರ ದಿನಾಚರಣೆಯ ಹಿನ್ನೆಲೆ ಲಕ್ನೋದಲ್ಲಿ ನಡೆದ "ಅಜಾದಿ ಕ ಅಮೃತ ಮಹೋತ್ಸವ" ದಲ್ಲಿ ಭಾಗಿಯಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವಿರುದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
"ಸ್ವಾತಂತ್ಯ್ರವನ್ನು ಆಚರಿಸಲು ಮೋದಿ ಜಿ ಲಕ್ನೋಗೆ ಬರುತ್ತಾರೆ. ನಮಗೆ ಸ್ವಾತಂತ್ಯ್ರ ನೀಡಿದವರು ಯಾರು?. ರೈತರು ನಮಗೆ ಸ್ವಾತಂತ್ಯ್ರ ನೀಡಿದ್ದಾರೆ. ಲಕ್ನೋದಲ್ಲಿ ಸ್ವಾತಂತ್ಯ್ರ ದಿನಾಚರಣೆ ಮಾಡಲು ನಿಮಗೆ ಯಾವ ನೈತಿಕತೆ ಇದೆ. ನಿಮ್ಮ ಸಚಿವರನ್ನು ರಕ್ಷಿಸಿಕೊಳ್ಳಬೇಡಿ, ನಿಮ್ಮ ಸಚಿವರ ಪುತ್ರನ ಬಂಧನ ಮಾಡಿ," ಎಂದು ಆಗ್ರಹಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, "ಮೋದಿಜೀ ನೀವು ಲಖಿಂಪುರ ಖೇರಿಗೆ ಬರುತ್ತೀರಾ?," ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳು ರೈತರ ಮೇಲೆ ಹರಿದು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರನೂ ಇದ್ದರು ಎಂದು ಹೇಳಲಾಗಿದೆ. ಈ ನಡುವೆ ಕೇಂದ್ರ ಸಚಿವರ ಪುತ್ರ ಆಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ. ಆದರೆ ಈವರೆಗೂ ಬಂಧನವಾಗಿಲ್ಲ.
ಇನ್ನು ಈ ಘಟನೆಯದ್ದು ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಟ್ವೀಟ್ ಮಾಡಿರುವ ಪ್ರಿಯಾಂಕಾ, "ನರೇಂದ್ರ ಮೋದಿ ಜಿ ಅವರೇ, ನಿಮ್ಮ ಸರ್ಕಾರವು ಯಾವುದೇ ಆದೇಶ ಪತ್ರ ಹಾಗೂ ಎಫ್ಐಆರ್ ಇಲ್ಲದೆಯೇ ಕಳೆದ 28 ಗಂಟೆಗಳ ಕಾಲ ಬಂಧನದಲ್ಲಿ ಇರಿಸಿದೆ. ಆದರೆ ಅನ್ನದಾತನ ಮೇಲೆ ವಾಹನವನ್ನು ಕೊಂಡೊಯ್ದ ಈ ಆರೋಪಿಯನ್ನು ಮಾತ್ರ ಬಂಧನ ಮಾಡಿಲ್ಲ, ಯಾಕೆ," ಎಂದು ಪ್ರಶ್ನಿಸಿದ್ದಾರೆ.
"ನನ್ನ ಬಿಡುಗಡೆ ಆದ ಕೂಡಲೇ ನಾನು ಸಾವನ್ನಪ್ಪಿದ ರೈತರ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ. ಅದಕ್ಕಾಗಿಯೇ ನನ್ನನ್ನು ಬಿಡುಗಡೆ ಮಾಡುತ್ತಿಲ್ಲ," ಎಂದು ಹೇಳಿದ್ದಾರೆ. "15 ದಿನ, 20 ದಿನ, ಆರು ತಿಂಗಳು ಅಥವಾ ಆರು ವರ್ಷ ಎಷ್ಟೇ ಸಮಯ ಆದರೂ ನಾನು ಭೇಟಿಯಾಗುತ್ತೇನೆ," ಎಂದು ಕೂಡಾ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications