ಮಾಡದ ತಪ್ಪಿಗೆ 20 ವರ್ಷ ಸೆರೆವಾಸ; ಸುಳ್ಳು ಆರೋಪದಿಂದ ಕೊನೆಗೂ ಮುಕ್ತಿ
ಆಗ್ರಾ, ಮಾರ್ಚ್ 02: ಮಾಡದ ತಪ್ಪಿಗೆ ಜೈಲು ಸೇರಿ ಇಪ್ಪತ್ತು ವರ್ಷ ಸೆರೆವಾಸ ಅನುಭವಿಸಿದ ನಂತರ ಆ ವ್ಯಕ್ತಿಯು ನಿರಪರಾಧಿ ಎಂದು ಅಲಹಾಬಾದ್ ಹೈಕೋರ್ಟ್ ಘೋಷಣೆ ಮಾಡಿದೆ.
2000ನೇ ಇಸವಿಯಲ್ಲಿ ವಿಷ್ಣು ತಿವಾರಿ ಎಂಬಾತನ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಲಲಿತಪುರ ಗ್ರಾಮದ ತಿವಾರಿ, ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೈಲು ಸೇರಬೇಕಾಯಿತು. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪದಲ್ಲಿ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಗ ತಿವಾರಿಗಿನ್ನೂ 23 ವಯಸ್ಸು.
ತನಗೆ ಉತ್ತಮ ವಕೀಲರ ಸಹಾಯ ದೊರಕದೇ ಇದ್ದ ಕಾರಣ ತಾನು ನಿರಪರಾಧಿ ಎಂದು ಸಾಬೀತುಪಡಿಸುವಲ್ಲಿ ತಿವಾರಿಗೆ ಪದೇ ಪದೇ ಸೋಲುಂಟಾಯಿತು.
2003ರಲ್ಲಿ ತಿವಾರಿಯನ್ನು ಆಗ್ರಾ ಜೈಲಿಗೆ ಸ್ಥಳಾಂತರಗೊಳಿಸಲಾಯಿತು. ಆಗಿನಿಂದಲೂ ತಿವಾರಿ ಜೈಲಿನಲ್ಲಿ ಅಡುಗೆ ಮಾಡುವ, ಜೈಲು ಶುದ್ಧಗೊಳಿಸುವ ಕಾರ್ಯ ಮಾಡುತ್ತಿದ್ದ.

ಕೊನೆ ಪ್ರಯತ್ನ ಎಂಬಂತೆ 2005ರಲ್ಲಿ ಅಲಹಾಬಾದ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದ. ಆದರೆ ಆ ಸಮಯಕ್ಕೆ ತನ್ನ ತಂದೆ ತೀರಿಹೋಗಿದ್ದು, ತಿವಾರಿಗೆ ದೊಡ್ಡ ಹೊಡೆತವನ್ನೇ ಕೊಟ್ಟಿತ್ತು. ಆನಂತರ ತಾನು ನಿರಪರಾಧಿ ಎಂದು ಸಾಬೀತುಪಡಿಸುವ ಪ್ರಯತ್ನವನ್ನೂ ನಿಲ್ಲಿಸಿದ್ದ.
ಆದರೆ ತಿವಾರಿ ಉತ್ತಮ ನಡತೆ ಕಂಡು 2020ರಲ್ಲಿ ಜೈಲು ಅಧಿಕಾರಿಗಳೇ ಈತನಿಗೆ ನ್ಯಾಯ ಒದಗಿಸಿಕೊಡುವಂತೆ ರಾಜ್ಯ ನ್ಯಾಯಾಂಗಕ್ಕೆ ಮೊರೆ ಹೋದರು. ಹೈಕೋರ್ಟ್ನಲ್ಲಿ ಈತನ ಪರ ಮೇಲ್ಮನವಿ ಸಲ್ಲಿಸಲಾಯಿತು. ಜನವರಿಯಲ್ಲಿ ನ್ಯಾಯಾಧೀಶ ಜಯೇಂದ್ರ ಠಾಕರ್ ಹಾಗೂ ಗೌತಮ್ ಚೌಧರಿ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ವಿಷ್ಣು ತಿವಾರಿ ನಿರಪರಾಧಿ ಎಂದು ತೀರ್ಪು ನೀಡಿದೆ.
ತಡವಾಗಿ ಎಫ್ಐಆರ್ ದಾಖಲಿಸಲಾಗಿದೆ ಹಾಗೂ ಮಹಿಳೆ ಮೇಲೆ ಹಲ್ಲೆ ಅಥವಾ ಅತ್ಯಾಚಾರ ನಡೆದಿರುವುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ದೊರೆತಿಲ್ಲ. ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆ ಪತಿ ಹಾಗೂ ಮಾವನೇ ಸೇರಿಕೊಂಡು ಈ ಸುಳ್ಳು ಘಟನೆ ಸೃಷ್ಟಿಸಿದ್ದಾರೆ. ಈ ಆರೋಪ ಸುಳ್ಳು ಎಂದು ತೀರ್ಪು ನೀಡಲಾಗಿದೆ.
ಕೊನೆಗೂ ವಿಷ್ಣು ತಿವಾರಿ ಬಿಡುಗಡೆಯಾಗಿದ್ದು, "ತಿವಾರಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ. ತಾನು ಮಾಡದ ಅಪರಾಧಕ್ಕೆ ಇಪ್ಪತ್ತು ವರ್ಷ ಶಿಕ್ಷೆ ಅನುಭವಿಸಿದ್ದಾನೆ. ಆತನ ಬಿಡುಗಡೆಯ ಅಧೀಕೃತ ಆದೇಶಕ್ಕೆ ಕಾಯುತ್ತಿದ್ದೇವೆ" ಎಂದು ಆಗ್ರಾ ಕೇಂದ್ರ ಕಾರಾಗ್ರಹದ ಹಿರಿಯ ಸೂಪರಿಂಟೆಂಡೆಂಟ್ ವಿ.ಕೆ. ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಆದರೆ ಈ ಇಪ್ಪತ್ತು ವರ್ಷಗಳಲ್ಲಿ ವಿಷ್ಣು ತಿವಾರಿ ತನ್ನ ಕುಟುಂಬದ ಸದಸ್ಯರನ್ನೆಲ್ಲಾ ಕಳೆದುಕೊಂಡಿದ್ದಾನೆಂದು ತಿಳಿದುಬಂದಿದೆ.












Click it and Unblock the Notifications