4 ವರ್ಷದ ಮಗಳನ್ನು ಬಿಟ್ಟುಹೋದ ಯೋಧ: ಕಣ್ಣೀರ ಕಡಲಲ್ಲಿ ಕುಟುಂಬ
ಮೀರತ್, ಜೂನ್ 18: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಸೋಮವಾರ ನಡೆದ ಉಗ್ರರೊಂದಿಗಿನ ಎನ್ಕೌಂಟರ್ ಸಂದರ್ಭದಲ್ಲಿ ಹುತಾತ್ಮರಾದ ಮೇಜರ್ ಕೇತನ್ ಶರ್ಮಾ ಅವರ ಕುಟುಂಬ ಮಂಗಳವಾರ ಅಂತ್ಯಕ್ರಿಯೆ ಸಂದರ್ಭದಲ್ಲಿಯೂ ಆಘಾತದಿಂದ ಹೊರಬಂದಿರಲಿಲ್ಲ.
ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದ ಸೇನಾ ಸಿಬ್ಬಂದಿ, ಬಂಧುಗಳು ಮತ್ತು ಸ್ನೇಹಿತರು ಕಣ್ಣೀರ ಕಡಲಲ್ಲಿ ಮುಳುಗಿದ್ದ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನದಲ್ಲಿ ಸೋತುಹೋದರು. ಕೇತನ್ ಅವರಿಗೆ ತೀವ್ರ ಗಾಯವಾಗಿದೆ ಎಂದು ಅವರ ವೃದ್ಧ ತಾಯಿ ಉಷಾ ಅವರಿಂದ ಮಗನ ಸಾವಿನ ಸುದ್ದಿಯನ್ನು ಮುಚ್ಚಿಡಲಾಗಿತ್ತು. ತಮ್ಮ ಮಗ ಎಲ್ಲಿದ್ದಾನೆ ಎಂದು ಕಣ್ಣೀರಿಡುತ್ತಾ ಕೇಳುತ್ತಿದ್ದ ದೃಶ್ಯ ಹೃದಯ ಹಿಂಡುವಂತಿತ್ತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯೋಧನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗದ ಜತೆಗೆ 25 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮೀರತ್ನಲ್ಲಿರುವ ಒಂದು ರಸ್ತೆಗೆ ಕೇತನ್ ಶರ್ಮಾ ಅವರ ಹೆಸರಿಡುವುದಾಗಿ ಪ್ರಕಟಿಸಿದ್ದಾರೆ.
ಉತ್ತರ ಪ್ರದೇಶದ ನಿವಾಸಕ್ಕೆ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ಮುನ್ನ ನವದೆಹಲಿಯ ಎಎಫ್ಎಸ್ ಪಾಲಂನಲ್ಲಿ ಕೆಲ ಕಾಲ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಂತಿಮ ನಮನ ಸಲ್ಲಿಸಿದರು.

ಉಗ್ರರೊಂದಿಗೆ ಗುಂಡಿನ ಕಾಳಗ
31 ವರ್ಷದ ಮೇಜರ್ ಕೇತನ್ ಶರ್ಮಾ ಅವರು ಹುತಾತ್ಮರಾಗಿದ್ದರೆ, ಅವರೊಂದಿಗಿದ್ದ ಇಬ್ಬರು ಯೋಧರು ಗಾಯಗೊಂಡಿದ್ದರು. ಉಗ್ರರ ಹಾಜರಿಯ ಮಾಹಿತಿ ತಿಳಿಸಿದ ಕೇತನ್ ಮತ್ತು ಅವರ ತಂಡ ಆ ಸ್ಥಳವನ್ನು ಸುತ್ತುವರಿದಿತ್ತು. ಅವರು ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

ತಲೆಯೊಳಗೆ ಹೊಕ್ಕಿತ್ತು ಬುಲೆಟ್
ಗುಂಡಿನ ಚಕಮಕಿಯಲ್ಲಿ ಕೇತನ್ ಹಾಗೂ ಇಬ್ಬರು ಗುಂಡೇಟಿನಿಂದ ಗಾಯಗೊಂಡರು. ಒಬ್ಬ ಉಗ್ರ ಸಹ ಬಲಿಯಾದ. ಮೂವರೂ ಯೋಧರನ್ನು ಕೂಡಲೇ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ತೀವ್ರ ಗಾಯಗೊಂಡಿದ್ದ ಕೇತನ್ ಬದುಕುಳಿಯಲಿಲ್ಲ. ಒಂದು ಬುಲೆಟ್ ಅವರ ತಲೆಯೊಳಗೆ ಹೊಕ್ಕಿತ್ತು ಎಂದು ಕೇತನ್ ಚಿಕ್ಕಪ್ಪ ತಿಳಿಸಿದ್ದಾರೆ.

ಆರು ವರ್ಷದ ಹಿಂದೆ ಮದುವೆ
1987ರ ಅಕ್ಟೋಬರ್ 4ರಂದು ಉತ್ತರ ಪ್ರದೇಶದ ಮೀರತ್ನಲ್ಲಿ ಕೇತನ್ ಜನಿಸಿದ್ದರು. ಆರು ವರ್ಷದ ಹಿಂದೆ ಇರಾ ಮಂದಾರ್ ಶರ್ಮಾ ಅವರನ್ನು ಮದುವೆಯಾಗಿದ್ದರು. ಅವರಿಗೆ ನಾಲ್ಕು ವರ್ಷದ ಮುದ್ದಾದ ಮಗಳು ಕಿಯಾರಾ ಇದ್ದಾಳೆ. ಕೆಲವು ದಿನಗಳ ರಜೆ ಪಡೆದು ನಾಲ್ಕು ವರ್ಷದ ಮಗಳು ಹಾಗೂ ಕುಟುಂಬದ ಇತರೆ ಸದಸ್ಯರ ಜತೆ ಸಮಯ ಕಳೆದು ಮೇ 26ರಂದು ಕರ್ತವ್ಯಕ್ಕೆ ಮರಳಿದ್ದರು.

2012ರಲ್ಲಿ ಸೇನೆಗೆ ಸೇರ್ಪಡೆ
ಡೆಹರಾಡೂನ್ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ಉತ್ತೀರ್ಣರಾಗಿ 2012ರ ಡಿಸೆಂಬರ್ನಲ್ಲಿ ಭಾರತೀಯ ಸೇನೆಯ ಸಿಖ್ ಲೈಟ್ ಇನ್ಫೆಂಟ್ರಿಗೆ ಲೆಫ್ಟಿನೆಂಟ್ ಸೇರಿದ್ದ ಅವರು, ಮೊದಲು ಪುಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಅನಂತ್ ನಾಗ್ ಜಿಲ್ಲೆಗೆ ವರ್ಗಾವಣೆಯಾಗಿದ್ದರು. ಬಳಿಕ 19ನೇ ರಾಷ್ಟ್ರೀಯ ರೈಫಲ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಕುಟುಂಬಕ್ಕೆ ಒಬ್ಬರೇ ಮಗನಾಗಿದ್ದರು.












Click it and Unblock the Notifications