ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಮುಖಂಡನ ಮೇಲೆ ಎಫ್ಐಆರ್
ಬಾರಾಬಂಕಿ, ಏಪ್ರಿಲ್ 22: ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶದ ಬಾರಾಬಂಕಿಯ ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ರಂಜಿತ್ ಬಹದ್ದೂರ್ ಶ್ರೀವಾಸ್ತವ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
'ನೀತಿ ಸಂಹಿತೆ ಉಲ್ಲಂಘನೆಯ ಆರೋಪದಡಿ ಬಿಜೆಪಿ ನಾಯಕ ರಂಜಿತ್ ಬಹದ್ದೂರ್ ಶ್ರೀವಾಸ್ತವ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಸಂಬಂಧ ವಿಚಾರಣೆ ಪ್ರಗತಿಯಲ್ಲಿದೆ' ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್ ಎಸ್ ಗೌತಮ್ ತಿಳಿಸಿದ್ದಾರೆ.

ಬಾರಾಬಂಕಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಉಪೇಂದ್ರ ರಾವತ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನೆರೆದಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ನಗರ ಪಾಲಿಕೆ ಮಾಜಿ ಅಧ್ಯಕ್ಷ ರಂಜಿತ್ ಬಹದ್ದೂರ್, ಮುಸ್ಲಿಮರ ಸ್ಥೈರ್ಯವನ್ನು ಉಡುಗಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ನೀಡಬೇಕು ಎಂದು ಕರೆ ನೀಡಿದ್ದರು.
'ಮುಸ್ಲಿಮರು ತಮ್ಮ ಮತಗಳ ಮೂಲಕ ಅಧಿಕಾರ ಹಿಡಿಯಲು ಬಯಸಿದ್ದಾರೆ. ಆದರೆ, ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ. ಇದು ಹಿಂದೂಗಳು ಒಂದಾಗಲು ಸೂಕ್ತವಾದ ಸಮಯ' ಎಂದು ಹೇಳಿಕೆ ನೀಡಿದ್ದರು.
ರಂಜಿತ್ ಬಹದ್ದೂರ್ ಅವರ ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.












Click it and Unblock the Notifications