ಕೊರೊನಾ ಓಡಿಸಲು ಉತ್ತರ ಪ್ರದೇಶದಲ್ಲಿ ಲಕ್ಷಾಂತರ ಮಂದಿಯಿಂದ ಹನುಮಾನ್ ಚಾಲೀಸ ಪಠಣ
ಪ್ರಯಾಗರಾಜ್, ಮೇ 17: ಕೊರೊನಾ ಸೋಂಕಿನ ಎರಡನೇ ಅಲೆಯ ಮುಷ್ಟಿಯಲ್ಲಿ ಇಡೀ ದೇಶವೇ ನಲುಗುತ್ತಿದೆ. ಉಲ್ಬಣಗೊಂಡಿರುವ ಸೋಂಕಿನ ಜೊತೆ ವೈದ್ಯಕೀಯ ಆಮ್ಲಜನಕ ಕೊರತೆಯೂ ಹಲವು ರಾಜ್ಯಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ.
ಇದೀಗ ಕೊರೊನಾ ಸೋಂಕಿನ ನಿವಾರಣೆಗೆ ಉತ್ತರ ಪ್ರದೇಶದಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಣಕ್ಕೆ ಮುಂದಾಗಿದ್ದಾರೆ. ಕೊರೊನಾ ಸೋಂಕನ್ನು ದೂರವಿಡಲು ಹನುಮಾನ್ ಚಾಲೀಸ ಪಠಿಸಲು ಜನರಿಗಾಗಿ ಕಾರ್ಯಕ್ರಮ ರೂಪಿಸಿದ್ದಾರೆ.
ಹಳ್ಳಿಹಳ್ಳಿಗೂ ಕೊರೊನಾವೈರಸ್: ಮಹಾಮಾರಿ ನಿಯಂತ್ರಣಕ್ಕೆ ಉಪಾಯಗಳೇನು?
ನೂರಾರು ಸಾಧು ಸಂತರು, ಆರ್ಎಸ್ಎಸ್ನ ಕಾರ್ಯಕರ್ತರು ಹಾಗೂ ಹಿಂದೂ ಸಂಸ್ಥೆಗಳು ಸೇರಿ ಮಂಗಳವಾರ ಹನುಮಾನ್ ಚಾಲೀಸ್ ಅನ್ನು ಹನ್ನೊಂದು ಬಾರಿ ಪಠಿಸುವ ಕಾರ್ಯಕ್ರಮವನ್ನು ಉತ್ತರ ಪ್ರದೇಶದಲ್ಲಿ ಹಮ್ಮಿಕೊಂಡಿದ್ದಾರೆ. ಕಾಶಿ ಪ್ರಾಂತ್ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಹನುಮಾನ್ ಚಾಲೀಸ ಪಠಣ ಆರಂಭವಾಗಲಿದೆ. ಹಲವು ಸಂತ ಸನ್ಯಾಸಿಗಳು, ಪ್ರಮುಖರು, ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಆರ್ ಎಸ್ಎಸ್ ಸಂಘಟನೆಯ ಮುರಾರ್ ಜಿ ತ್ರಿಪಾಠಿ ತಿಳಿಸಿದ್ದಾರೆ.
ಹನುಮಾನ್ ಚಾಲೀಸ ಪಠಣ ಈ ಮಾರಣಾಂತಿಕ ಸೋಂಕನ್ನು ನಿವಾರಿಸಲು ಸಹಕಾರಿ ಎಂದು ಸಾಧು ಸಂತರು ನಂಬಿದ್ದು, ಆರ್ಎಸ್ಎಸ್ನ ಕುಟುಂಬ ಪ್ರಭೋದನಾ ಯೋಜನೆಯಡಿ ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಸೇರಿ ಚಾಲೀಸ ಪಠಣ ಮಾಡುವರು. ಆರ್ಎಸ್ಎಸ್ ಆರು ಯುಟ್ಯೂಬ್ ಕೊಂಡಿಗಳನ್ನು ಹಂಚಿಕೊಂಡಿದೆ.