ಬೇಕಿದ್ರೆ ಬಸ್ ಮೇಲೆ ಬಿಜೆಪಿ ಬಾವುಟ ಹಾಕೊಳ್ಳಿ, ಆದರೆ ಅನುಮತಿ ಕೊಡಿ - ಪ್ರಿಯಾಂಕಾ ಗಾಂಧಿ
ಲಕ್ನೌ, ಮೇ 20: ವಲಸೆ ಕಾರ್ಮಿಕರ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ಬಸ್ಗಳು ಯುಪಿ ಗಡಿಭಾಗದಲ್ಲಿ ಬಂದು ನಿಂತಿದ್ದರೂ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾನವೀಯತೆಗೆ ಬೆಲೆ ಕೊಡ್ತಿಲ್ಲ ಎಂದು ದೂರಿದ್ದಾರೆ.
ಕಾರ್ಮಿಕರನ್ನು ಕರೆದುಕೊಂಡು ಹೋಗಲು ಕಾಂಗ್ರೆಸ್ ನಿಯೋಜಿಸಿರುವ 1000 ಬಸ್ಗಳಿಗೆ ಅನುಮತಿ ನಿರಾಕರಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬುಧವಾರ ಪ್ರಿಯಾಂಕಾ ಗಾಂಧಿ 10 ನಿಮಿಷದ ವಿಡಿಯೋ ಹಂಚಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ಇದು ರಾಜಕೀಯ ಮಾಡುವ ಸಮಯವಲ್ಲ, ಬಸ್ ಸಂಚರಿಸಲು ಅನುಮತಿ ಕೊಡಿ, ಬೇಕಿದ್ರೆ ಬಸ್ಗಳು ನೀವೇ ನಿಯಂತ್ರಿಸಿ ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಓದಿ....

ದೇಶಕ್ಕಾಗಿ ಕಾರ್ಮಿಕರು ರಕ್ತ ಸುರಿಸಿದ್ದಾರೆ
''ನಾವು ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಅವರು ಕೇವಲ ಭಾರತೀಯರಲ್ಲ, ಭಾರತವನ್ನು ಕಟ್ಟಿದವರು. ದೇಶವೂ ಅವರ ರಕ್ತ ಮತ್ತು ಬೆವರಿನಿಂದ ಸಾಗುತ್ತಿದೆ. ಇದು ಎಲ್ಲರ ಜವಾಬ್ದಾರಿ. ಇದು ರಾಜಕೀಯ ಸಮಯವಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ಗಳನ್ನು ಬಳಸಿಕೊಳ್ಳಿ, ಇಲ್ಲ ಅನುಮತಿ ಕೊಡಿ
''ಕಳೆದ 24 ಗಂಟೆಯಿಂದ ಗಡಿಭಾಗದಲ್ಲಿ ಬಸ್ಗಳು ನಿಂತಿದೆ. ನಿಮಗೆ ಬೇಕು ಅಂದ್ರೆ ಬಳಸಿಕೊಳ್ಳಿ. ನಮಗೆ ಅನುಮತಿ ಕೊಡಿ. ನಿಮಗೆ ಅಗತ್ಯವೆನಿಸಿದರೆ ಬಸ್ಗಳ ಮೇಲೆ ಬಿಜೆಪಿ ಭಾವುಟ, ಸ್ಟಿಕ್ಕರ್ಗಳನ್ನು ಹಾಕಿಕೊಳ್ಳಿ, ಈ ಬಸ್ಗಳು ನೀವು ನಿಯೋಜಿಸಿದ್ದೀರಿ ಎಂದು ಹೇಳಲು ಬಯಸಿದರೆ ಅದನ್ನು ಮಾಡಿ. ಆದರೆ, ಬಸ್ಗಳು ಸಂಚರಿಸಲು ಅನುವು ಮಾಡಿಕೊಡಿ'' ಎಂದು ಪ್ರಿಯಾಂಕಾ ಯುಪಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

72 ಸಾವಿರ ಕಾರ್ಮಿಕರು ಮನೆಯಲ್ಲಿರುತ್ತಿದ್ದರು
''ನೀವು ಅನುಮತಿ ನೀಡಿದ್ದರೆ ಇಷ್ಟೊತ್ತಿಗಾಗಲೇ ಸುಮಾರು 72 ಸಾವಿರ ವಲಸೆ ಕಾರ್ಮಿಕರು ಮನೆಗಳಲ್ಲಿ ಇರುತ್ತಿದ್ದರು. ಆದರೆ, ಬಿಜೆಪಿ ಅವರು ರಾಜಕೀಯ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಕಳೆದ 24 ದಿನದಿಂದ ಬಸ್ಗಳು ರಾಜಸ್ಥಾನ-ಉತ್ತರಪ್ರದೇಶ ಗಡಿಭಾಗದಲ್ಲಿ ನಿಂತಿವೆ. ಇದರಿಂದ ಯಾವುದೇ ಸಹಾಯವಾಗುತ್ತಿಲ್ಲ'' ಎಂದು ಕಿಡಿಕಾರಿದ್ದಾರೆ.

ದಾಖಲೆ ಕೇಳಿದ ಯುಪಿ ಸರ್ಕಾರ
ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಕಾಂಗ್ರೆಸ್ ಪಕ್ಷವೂ ಬಸ್ಗಳು ನಿಯೋಜಿಸಿರುವ ಬಗ್ಗೆ ಶನಿವಾರ ಸರ್ಕಾರಕ್ಕೆ ಮನವಿ ಮಾಡಿತ್ತು. ಸೋಮವಾರ ಈ ಬಗ್ಗೆ ಸರ್ಕಾರ ಪ್ರತಿಕ್ರಿಯೆ ನೀಡಿತ್ತು. ಅಗತ್ಯ ದಾಖಲೆಗಳನ್ನು ನೀಡಿ ಎಂದು ಸೂಚಿಸಿತ್ತು. ಆದರೆ, ಬಸ್ ಸಂಚರಿಸುವುದಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ. ಹಾಗಾಗಿ, ಜಿಲ್ಲಾಡಳಿತ ಗಡಿಭಾಗದಲ್ಲಿ ಪೊಲೀಸರು ಬಸ್ ಪ್ರವೇಶಕ್ಕೆ ಅವಕಾಶ ಕೊಡ್ತಿಲ್ಲ.












Click it and Unblock the Notifications