ಮಾಯಾವತಿ ಸೋದರನಿಗೆ ಸೇರಿದ 400 ಕೋಟಿ ಮೌಲ್ಯದ 'ಬೇನಾಮಿ' ಆಸ್ತಿ ಜಪ್ತಿ
ಲಖನೌ, ಜುಲೈ 18: ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರ ಸೋದರ ಮತ್ತು ಆತನ ಪತ್ನಿಗೆ ಸೇರಿದ 400 ಕೋಟಿ ಮೌಲ್ಯದ ನೋಯ್ಡಾದಲ್ಲಿನ 'ಬೇನಾಮಿ' ಜಾಗವನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಏಳು ಎಕರೆ ಸ್ಥಳವನ್ನು ಮುಟ್ಟುಗೋಲು ಹಾಕಿಕೊಂಡ ಬಗ್ಗೆ ದೆಹಲಿ ಮೂಲದ ಬೇನಾಮಿ ನಿಷೇಧ ಘಟಕವು ಜುಲೈ 16ನೇ ತಾರೀಕು ಆದೇಶ ನೀಡಿದೆ.
ಈ ಸ್ಥಳವು ಮಾಯಾವತಿ ಅವರ ಸೋದರ ಆನಂದ್ ಕುಮಾರ್ ಮತ್ತು ಆತನ ಪತ್ನಿ ವಿಚಿತೆರ್ ಲತಾ ಹೆಸರಲ್ಲಿ ಇತ್ತು. ಈಚೆಗಷ್ಟೇ ಮಾಯಾವತಿ ಅವರು ಆನಂದ್ ಕುಮಾರ್ ರನ್ನು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದರು.
ಬೇನಾಮಿ ಆಸ್ತಿ ವ್ಯವಹಾರ ನಿಷೇಧ ಕಾಯ್ದೆ 1988ರ ಅಡಿಯಲ್ಲಿ ಆದೇಶ ನೀಡಲಾಗಿದೆ. ಈಗ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯನ್ನು ಆನಂದ್ ಕುಮಾರ್ ಮತ್ತು ಅವರ ಪತ್ನಿಗೆ ಸೇರಿದ 'ಬೇನಾಮಿ' ಆಸ್ತಿ ಎಂದು ಪರಿಗಣಿಸಲಾಗಿದೆ. ಈ ಆಸ್ತಿಯ ಪುಸ್ತಕದ ಮೌಲ್ಯ 400 ಕೋಟಿ ರುಪಾಯಿ ಎನ್ನಲಾಗಿದೆ.

ಬೇನಾಮಿ ಕಾಯ್ದೆ ಉಲ್ಲಂಘನೆ ಮಾಡುವವರಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ ಬೇನಾಮಿ ಆಸ್ತಿಯ ಮಾರುಕಟ್ಟೆ ಮೌಲ್ಯದ 25 ಪರ್ಸೆಂಟ್ ತನಕ ದಂಡ ಪಾವತಿಸ ಬೇಕಾಗುತ್ತದೆ. ಬೇನಾಮಿ ವ್ಯವಹಾರ (ನಿಷೇಧ) ತಿದ್ದುಪಡಿ ಕಾಯ್ದೆ 2016 ಅನ್ನು ನವೆಂಬರ್ 1, 2016ರಿಂದ ನರೇಂದ್ರ ಮೋದಿ ನೇತೃತ್ವದ ಸರಕಾರ ಜಾರಿಗೆ ತಂದಿದೆ.
ದೇಶದಲ್ಲಿ ಬೇನಾಮಿ ಕಾಯ್ದೆ ಜಾರಿಗೆ ತರುವ ನೋಡಲ್ ಇಲಾಖೆಯಾಗಿ ಆದಾಯ ತೆರಿಗೆ ಇಲಾಖೆ ಇದೆ.












Click it and Unblock the Notifications