ಗೋರಾಕ್ಪುರ ದಾಳಿ ಪ್ರಕರಣ: ಮೃತ ವ್ಯಾಪಾರಿಯ ಪತ್ನಿಗೆ ಸರ್ಕಾರಿ ಕೆಲಸ ಘೋಷಿಸಿದ ಸಿಎಂ
ಗೋರಾಕ್ಪುರ, ಸೆಪ್ಟೆಂಬರ್ 30: ಉತ್ತರ ಪ್ರದೇಶದ ಗೋರಾಕ್ಪುರದಲ್ಲಿ ಪೊಲೀಸರು ಸೋಮವಾರ ತಡರಾತ್ರಿ ಹೊಟೇಲ್ಗೆ ದಾಳಿ ನಡೆಸಿದ ಸಂದರ್ಭ ಸಾವನ್ನಪ್ಪಿದ ವ್ಯಾಪಾರಿಯನ್ನು ಕುಟುಂಬಸ್ಥರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾಗಿದ್ದು, ಮೃತ ವ್ಯಾಪಾರಿಯ ಪತ್ನಿಗೆ ಸರ್ಕಾರಿ ಉದ್ಯೋಗವನ್ನು ಘೋಷಣೆ ಮಾಡಿದ್ದಾರೆ.
ಗೋರಾಕ್ಪುರದಲ್ಲಿ ಪೊಲೀಸರು ಸೋಮವಾರ ತಡರಾತ್ರಿ ಹೊಟೇಲ್ಗೆ ದಾಳಿಗೆ ಬಲಿಯಾದ ಉತ್ತರ ಪ್ರದೇಶದ ಕಾನ್ಪುರ ನಿವಾಸಿ ಮನೀಶ್ ಕುಮಾರ್ ಗುಪ್ತಾರ ಪತ್ನಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗುವುದು ಎಂದು ಭರವಸೆ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜಿಲ್ಲಾಡಳಿತಕ್ಕೆ ಈ ಕುಟುಂಬಕ್ಕೆ ಪರಿಹಾರವಾಗಿ ಹತ್ತು ಲಕ್ಷ ರೂಪಾಯಿ ನೀಡುವಂತೆ ಸೂಚನೆ ನೀಡಿದ್ದಾರೆ.
ಗೋರಾಕ್ಪುರ ಹೊಟೇಲ್ಗೆ ಪೊಲೀಸ್ ದಾಳಿ ವೇಳೆ ವ್ಯಾಪಾರಿ ಸಾವು: ನಿಜಕ್ಕೂ ನಡೆದಿದ್ದು ಏನು?
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಪೊಲೀಸ್ ಸಿಬ್ಬಂದಿಗಳಿಂದ ಈ ರೀತಿಯಾಗಿ ಅನೈತಿಕ ಚಟುವಟಿಕೆಯನ್ನು ನಾವು ಸಹಿಸಲಾಗದು. ಈ ಕೃತ್ಯದಲ್ಲಿ ಯಾರೂ ಭಾಗಿಯಾಗಿದ್ದರೋ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಮಾನತು ಮಾಡಲಾಗುವುದು," ಎಂದು ತಿಳಿಸಿದ್ದಾರೆ.
ಗೋರಾಕ್ಪುರದಲ್ಲಿ ಹೊಟೇಲ್ ರೂಮ್ನಲ್ಲಿ ಉತ್ತರ ಪ್ರದೇಶದ ಕಾನ್ಪುರ ನಿವಾಸಿ, ವ್ಯಾಪಾರಿ ಮನೀಶ್ ಕುಮಾರ್ ಗುಪ್ತಾ ಹಾಗೂ ಇತರೆ ಇಬ್ಬರು ಇದ್ದ ಸಂದರ್ಭದಲ್ಲಿ ಪೊಲೀಸರು ತಡ ರಾತ್ರಿ ಹೊಟೇಲ್ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ವ್ಯಾಪಾರಿ ಮನೀಶ್ ಕುಮಾರ್ ಗುಪ್ತಾ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಹಲವಾರು ವಿರೋಧ ಪಕ್ಷದ ನಾಯಕರು ಈ ಪೊಲೀಸ್ ದೌರ್ಜನ್ಯದ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಮೃತ ವ್ಯಕ್ತಿಯ ಕುಟುಂಬವನ್ನು ಭೇಟಿಯಾಗಿದ್ದಾರೆ. ಹಾಗೆಯೇ ಮೃತ ವ್ಯಕ್ತಿಯ ಪತ್ನಿಗೆ ಉದ್ಯೋಗವನ್ನು ಘೋಷಣೆ ಮಾಡಿದ್ದಾರೆ.
ಇನ್ನು ಈ ವಿಚಾರದಲ್ಲಿ ಪೊಲೀಸರು ಒಂದು ಹೇಳಿಕೆಯನ್ನು ನೀಡಿದರೆ, ಮೃತರೊಂದಿಗೆ ಇದ್ದ ಇಬ್ಬರು ಸ್ನೇಹಿತರು ಇನ್ನೊಂದು ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಹಾಗೆಯೇ ಮೃತ ವ್ಯಕ್ತಿಯ ಪತ್ನಿ ಕೂಡಾ ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರು ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ಹೇಳುತ್ತಿದ್ದು, ಆದರೆ ಮೃತ ವ್ಯಾಪಾರಿಯ ಪತ್ನಿಯು ತನ್ನ ಪತಿಯ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ. ಪೊಲೀಸರು ವ್ಯಾಪಾರಿ ಹೊಟೇಲ್ ರೂಮ್ ಒಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಹಾಗೆಯೇ "ಹೊಟೇಲ್ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ತಂಗಿದ್ದಾರೆ ಎಂದು ಮಾಹಿತಿ ದೊರೆತ ಹಿನ್ನೆಲೆ ನಾವು ದಾಳಿ ನಡೆಸಿದ್ದೇವೆ," ಎಂದು ಕೂಡಾ ಪೊಲೀಸರು ಹೇಳಿದ್ದಾರೆ. ಸೋಮವಾರ ತಡ ರಾತ್ರಿ ಪೊಲೀಸರು ಹೊಟೇಲ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮೃತ ವ್ಯಾಪಾರಿ ಮನೀಶ್ ಕುಮಾರ್ ಗುಪ್ತಾ ಹಾಗೂ ಬೇರೆ ಜಿಲ್ಲೆಗಳಿಗೆ ಸೇರಿದ ಇನ್ನಿಬ್ಬರು ಹೊಟೇಲ್ ರೂಮ್ನಲ್ಲಿ ತಂಗಿದ್ದರು. ಹೊಟೇಲ್ನಲ್ಲಿ ಜೊತೆಗಿದ್ದವರು, "ನಾವು ವ್ಯಾಪಾರ ಜೊತೆಯಾಗಿ ನಡೆಸುತ್ತೇವೆ. ನಮ್ಮ ಸ್ನೇಹಿತರೊಬ್ಬರನ್ನು ಭೇಟಿಯಾಗಲು ನಾವು ಗೋರಾಕ್ಪುರಕ್ಕೆ ಬಂದಿದ್ದೇವೆ," ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಗೋರಾಕ್ಪುರ ಪೊಲೀಸ್ ಮುಖ್ಯಸ್ಥ ವಿಪಿನ್ ಟಾಡಾ, "ಈ ವ್ಯಕ್ತಿಗಳು ಬೇರೆ ಬೇರೆ ನಗರಕ್ಕೆ ಸೇರಿದವರು ಆಗಿದ್ದರು. ಆದ್ದರಿಂದ ಪೊಲೀಸರ ತಂಡಕ್ಕೆ ಅನುಮಾನ ಉಂಟಾಗಿದೆ. ಆದ್ದರಿಂದ ಹೊಟೇಲ್ನ ಮ್ಯಾನೆಜರ್ ಜೊತೆಗೆ ಪೊಲೀಸರು ಆ ರೂಮ್ ಪರಿಶೀಲನೆಗೆ ತೆರಳಿದರು. ಆದರೆ ಈ ಸಂದರ್ಭದಲ್ಲಿ ಓರ್ವ ದುರದೃಷ್ಟಕರವಾಗಿ ರೂಮ್ನ ಒಳಗೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ನಮ್ಮ ತಂಡವು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದೆ," ಎಂದು ಹೇಳಿದ್ದಾರೆ.
"ಪೊಲೀಸರು ಕುಡಿದಂತೆ ಕಾಣಿಸುತ್ತಿದ್ದರು. ನನಗೆ ಓರ್ವ ಪೊಲೀಸ್ ಸಿಬ್ಬಂದಿ ಕೆನ್ನೆಗೆ ಬಾರಿಸಿದರು. ಕೆಲವು ಪೊಲೀಸರ ಬಳಿ ಗನ್ ಕೂಡಾ ಇತ್ತು. ನನ್ನನ್ನು ಪೊಲೀಸರು ಹೊರಗೆ ಕರೆದೊಯ್ದರು. ಬಳಿಕ ಮನೀಶ್ ಅನ್ನು ಕೂಡಾ ಪೊಲೀಸರು ಕೋಣೆಯಿಂದ ಹೊರಗೆ ಎಳೆದುಕೊಂಡು ಬರುವುದು ನನ್ನ ಗಮನಕ್ಕೆ ಬಂದಿದೆ. ಆತನ ಮುಖ ಪೂರ್ತಿ ರಕ್ತ ಕಾಣಿಸುತ್ತಿತ್ತು," ಎಂದು ಮನೀಶ್ ಜೊತೆಗಿದ್ದ ಹರ್ವಿಂತ್ ಸಿಂಗ್ ಮಾಹಿತಿ ನೀಡಿದ್ದಾರೆ.
"ನನ್ನ ಪತಿ ಸಾವನ್ನಪ್ಪುವ ಹತ್ತು ನಿಮಿಷ ಮುಂದಷ್ಟೇ ಕರೆ ಮಾಡಿ ಮಾತನಾಡಿದ್ದರು. ಪೊಲೀಸರು ಬಂದಿದ್ದಾರೆ ಎಂದು ಹೇಳಿ ಅವರು ನನ್ನ ಪೋನ್ ಕಟ್ ಮಾಡಿದರು. ಬಳಿಕ ನನ್ನ ಸಂಬಂಧಿಕರಿಗೆ ಕರೆ ಮಾಡಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಬೆದರಿಕೆಯನ್ನು ಹಾಕುತ್ತಿದ್ದಾರೆ. ಪೊಲೀಸ್ ಠಾಣೆಗೆ ಹೋಗುವಂತೆ ಹೇಳುತ್ತಿದ್ದಾರೆ ಎಂದಿದ್ದಾರೆ. ಈಗ ನನಗೆ ನನ್ನ ಪತಿ ಹೇಗೆ ಮೃತಪಟ್ಟರು ಎಂದು ಸ್ಪಷ್ಟಣೆ ಬೇಕು," ಎಂದು ಮೃತ ವ್ಯಾಪಾರಿಯ ಪತ್ನಿ ಮೀನಾಕ್ಷಿ ಗುಪ್ತಾ ಆಗ್ರಹಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)