ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಪತ್ತೆಯಾಯ್ತು 3,350 ಟನ್ ಚಿನ್ನ!
ಲಕ್ನೋ, ಫೆಬ್ರವರಿ 22: ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ದೇಶದಲ್ಲಿಯೇ ಅತಿ ದೊಡ್ಡ ಚಿನ್ನದ ಗಣಿ ಪತ್ತೆಯಾಗಿದೆ. ಎರಡು ದಶಕಗಳ ಸತತ ಸಂಶೋಧನೆಯ ಬಳಿಕ ಉತ್ತರ ಪ್ರದೇಶದ ಭೂವಿಜ್ಞಾನ ನಿರ್ದೇಶನಾಲಯ ಮತ್ತು ಭಾರತೀಯ ಗಣಿ ಹಾಗೂ ಭೂವೈಜ್ಞಾನಿಕ ಸರ್ವೇಕ್ಷಣೆ ಈ ಹಳದಿ ಲೋಹದ ಭಂಡಾರವನ್ನು ಪತ್ತೆಹಚ್ಚಿದೆ.
ಉತ್ತರ ಪ್ರದೇಶದಲ್ಲಿ ಪತ್ತೆಯಾಗಿರುವ ಚಿನ್ನದ ಗಣಿಯಲ್ಲಿ ಸುಮಾರು 3,350 ಟನ್ ಬಂಗಾರ ಸಿಗಲಿದ್ದು, ಇದರ ಮೌಲ್ಯ 12 ಲಕ್ಷ ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದಲ್ಲಿನ ಪ್ರಸ್ತುತ ಚಿನ್ನದ ಗಣಿಗಳಿಗಿಂತ ಐದು ಪಟ್ಟು ಹೆಚ್ಚಿದೆ.
ನಕ್ಷಲ್ ಪೀಡಿತ ಜಿಲ್ಲೆಯಾದ ಸೋನಭದ್ರಾದ ಸೊನ್ ಪಹಾಡಿ ಮತ್ತು ಹರ್ಡಿ ಪ್ರದೇಶಗಳಲ್ಲಿ ಚಿನ್ನದ ಭಂಡಾರ ದೊರೆತಿವೆ ಎಂದು ಜಿಲ್ಲಾ ಗಣಿ ಅಧಿಕಾರಿ ಕೆ. ಕೆ . ರಾಯ್ ತಿಳಿಸಿದ್ದಾರೆ. ಈ ಚಿನ್ನದ ಗಣಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಭಾರಿ ಸಂಪತ್ತನ್ನು ಒದಗಿಸಲಿದೆ.

1992-93ರಿಂದಲೇ ಸಂಶೋಧನೆ
ಸೋನಭದ್ರಾದಲ್ಲಿ ಚಿನ್ನದ ಭಾರಿ ಗಣಿಯೇ ಇದೆ ಎಂಬ ಅಂದಾಜಿನಲ್ಲಿ ಎರಡು ದಶಕಗಳ ಹಿಂದೆಯೇ ಸಂಶೋಧನೆ ಪ್ರಾರಂಭವಾಗಿತ್ತು. 1992-93ರಲ್ಲಿ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ ಇಲ್ಲಿ ಹುಡುಕಾಟ ಆರಂಭಿಸಿತ್ತು. ಗಣಿಗಳಲ್ಲಿನ ಚಿನ್ನವನ್ನು ಹೊರತೆಗೆಯುವ ಗಣಿಗಾರಿಕೆಗೆ ಶೀಘ್ರದಲ್ಲಿಯೇ ಇ ಟೆಂಡರಿಂಗ್ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ರಾಯ್ ಹೇಳಿದ್ದಾರೆ.

12 ಲಕ್ಷ ಕೋಟಿ ರೂ ಮೌಲ್ಯದ ಚಿನ್ನ
ಸೊನ್ ಪಹಾಡಿಯಲ್ಲಿ ಸುಮಾರು 2,943.26 ಟನ್ ಮತ್ತು ಹರ್ಡಿಯ ಗಣಿಯಲ್ಲಿ 646.16 ಕೆ.ಜಿ. ಚಿನ್ನ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ಚಿನ್ನವಲ್ಲದೆ ಇತರೆ ಖನಿಜಗಳೂ ಪತ್ತೆಯಾಗಿವೆ ಎಂದು ಅವರು ವಿವರಿಸಿದ್ದಾರೆ.
ವಿಶ್ವ ಚಿನ್ನದ ಸಮಿತಿ ಪ್ರಕಾರ, ಭಾರತದಲ್ಲಿ ಪ್ರಸ್ತುತ ಚಿನ್ನದ ಗಣಿಗಳಲ್ಲಿ 626 ಟನ್ ಚಿನ್ನ ಲಭ್ಯವಿದೆ. ಹೊಸದಾಗಿ ಪತ್ತೆಯಾಗಿರುವ ಚಿನ್ನದ ಗಣಿಯು ಈಗಿರುವ ಚಿನ್ನದ ಲಭ್ಯತೆಗಿಂತ ಐದು ಪಟ್ಟು ಹೆಚ್ಚಿದೆ. ಇದರ ಮೌಲ್ಯ ಸುಮಾರು 12 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಬ್ರಿಟಿಷರ ಕಾಲದಲ್ಲಿ ಆರಂಭ
ಸೋನಭದ್ರಾ ಪ್ರದೇಶದಲ್ಲಿ ಚಿನ್ನದ ಗಣಿಯನ್ನು ಪತ್ತೆಹಚ್ಚುವ ಪ್ರಕ್ರಿಯೆಯನ್ನು ಬ್ರಿಟಿಷರು ಆರಂಭಿಸಿದ್ದರು. ಆದರೆ ಈ ಪ್ರದೇಶವು ಬಳಿಕ ನಕ್ಸಲ್ ಪೀಡಿತವಾದ ಕಾರಣ ಹೆಚ್ಚು ಸುದ್ದಿಯಲ್ಲಿತ್ತು. ಆಸಕ್ತಿಕರ ಸಂಗತಿಯೆಂದರೆ ಉತ್ತರ ಪ್ರದೇಶದ ಎರಡನೆಯ ಅತಿ ದೊಡ್ಡ ಜಿಲ್ಲೆಯಾದ ಸೋನಭದ್ರಾ ನಾಲ್ಕು ರಾಜ್ಯಗಳ ಜತೆಗೆ ಗಡಿ ಹಂಚಿಕೊಂಡಿದೆ. ಪಶ್ಚಿಮದಲ್ಲಿ ಮಧ್ಯಪ್ರದೇಶ, ದಕ್ಷಿಣದಲ್ಲಿ ಛತ್ತೀಸಗಡ, ಈಶಾನ್ಯದಲ್ಲಿ ಜಾರ್ಖಂಡ್ ಮತ್ತು ಪೂರ್ವದಲ್ಲಿ ಬಿಹಾರ ಜಿಲ್ಲೆಗಳಿವೆ.

ಗಣಿಗಾರಿಕೆ ಸುಲಭ
ಚಿನ್ನದ ಗಣಿ ಪ್ರದೇಶದಲ್ಲಿ ನಕ್ಷೆ ಸಿದ್ಧಪಡಿಸುವ ಮತ್ತು ಭೌಗೋಳಿಕ ಅಧ್ಯಯನ ನಡೆಸುವ ಏಳು ಸದಸ್ಯರ ತಂಡ ಫೆ. 20ರಂದು ಸೋನಭದ್ರಾಕ್ಕೆ ಭೇಟಿ ನೀಡಿತ್ತು. ದಿಣ್ಣೆಗಳಿಂದ ಕೂಡಿರುವ ಪ್ರದೇಶದಲ್ಲಿ ಲೋಹದ ಭಂಡಾರ ಹುದುಗಿರುವುದರಿಂದ ಅದರ ಭೌಗೋಳಿಕ ವ್ಯವಸ್ಥೆ ಗಮನಿಸಿದರೆ ಗಣಿಗಾರಿಕೆ ಮಾಡುವುದು ಸುಲಭ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಯುರೇನಿಯಂಗೂ ಹುಡುಕಾಟ
ಚಿನ್ನವಲ್ಲದೆ ಈ ಪ್ರದೇಶದಲ್ಲಿ ಯುರೇನಿಯಂನಂತಹ ಅಪರೂಪದ ಖನಿಜವೂ ಇರುವ ಸಾಧ್ಯತೆ ಇದೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಎರಡು ಚಿನ್ನದ ಗಣಿಗಳ ಪತ್ತೆಯಿಂದಾಗಿ ಉತ್ತರ ಪ್ರದೇಶದ ಆದಾಯ ವೃದ್ಧಿಗೆ ಬೃಹತ್ ಬಲ ಬಂದಂತಾಗಿದೆ. ಸ್ಥಳೀಯ ಕೌಶಲ ಮತ್ತು ಕೌಶಲರಹಿತ ಕಾರ್ಮಿಕರಿಗೆ ಉದ್ಯೋಗ ದೊರಕುವುದಲ್ಲದೆ, ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಇದರಿಂದ ನೆರವಾಗಲಿದೆ.












Click it and Unblock the Notifications