ಅಯೋಧ್ಯೆ: 3ದಶಕದಲ್ಲಿ ಇದೇ ಮೊದಲ ಬಾರಿಗೆ ಶಿಲ್ಪಕೆತ್ತನೆ ನಿಲ್ಲಿಸಿದ VHP
ಲಕ್ನೋ, ನ 7: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಶಿಲ್ಪಕೆತ್ತನೆಯಲ್ಲಿ ತೊಡಗಿದ್ದ ವಿಶ್ವ ಹಿಂದೂ ಪರಿಷತ್, ಸದ್ಯಕ್ಕೆ ಆ ಕೆಲಸಕ್ಕೆ ವಿರಾಮ ನೀಡಿದೆ.
1990ರಿಂದ ಅಯೋಧ್ಯೆಯ 'ನಿರ್ಮಾಣ ಕಾರ್ಯಶಾಲ'ದಲ್ಲಿ ಶಿಲ್ಪಕೆತ್ತನೆಯ ಕೆಲಸ ನಿರಂತರವಾಗಿ ಸಾಗುತ್ತಿತ್ತು. ಈಗ, ಅಯೋಧ್ಯೆಯ ಐತಿಹಾಸಿಕ ತೀರ್ಪು ಹೊರಬೀಳಲು ಕ್ಷಣಗಣನೆ ಆರಂಭವಾಗಿರುವುದರಿಂದ, ಈ ಕೆಲಸಕ್ಕೆ ಬ್ರೇಕ್ ಹಾಕಲು ವಿಎಚ್ಪಿ ನಿರ್ಧರಿಸಿದೆ.
"ಶಿಲ್ಪಕೆತ್ತನೆಯ ಕೆಲಸವನ್ನು ಸದ್ಯದ ಮಟ್ಟಿಗೆ ತಡೆಹಿಡಿಯಲಾಗಿದೆ. ಈ ಕೆಲಸವನ್ನು ಮತ್ತೆ ಯಾವಾಗ ಮುಂದುವರಿಸಬೇಕು ಎನ್ನುವುದನ್ನು ರಾಮಜನ್ಮಭೂಮಿ ನ್ಯಾಸ್ ನಿರ್ಧರಿಸಲಿದೆ" ಎಂದು ವಿಎಚ್ಪಿ ವಕ್ತಾರ ಶರದ್ ಶರ್ಮಾ ತಿಳಿಸಿದ್ದಾರೆ.

ಮುಲಾಯಂ ಸಿಂಗ್, ಉತ್ತರಪ್ರದೇಶದ ಸಿಎಂ ಆಗಿದ್ದ ವೇಳೆ, ಶಿಲ್ಪಕೆತ್ತನೆಯ ಕೆಲಸವನ್ನು ವಿಎಚ್ಪಿ ಆರಂಭಿಸಿತ್ತು. "ಇದುವರೆಗೆ 1.25 ಲಕ್ಷ ಘನ ಅಡಿ ಕೆತ್ತನೆಯ ಕೆಲಸ ಮುಗಿದಿದೆ" ಎಂದು ವಿಎಚ್ಪಿ ಹೇಳಿಕೊಂಡಿದೆ.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ, ಸಂಘ ಪರಿವಾರದ ಹಲವು ಸಂಘಟನೆಗಳನ್ನು ಆರು ತಿಂಗಳ ಅವಧಿಗೆ ನಿಷೇಧಿಸಲಾಗಿತ್ತು. ಆದರೆ, ಅಖಿಲೇಶ್ ಯಾದವ್, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ, ರಾಜಸ್ಥಾನ ಮತ್ತು ಗುಜರಾತ್ ನಿಂದ ಕೆತ್ತನೆಗೆ ಶಿಲೆ/ಕಲ್ಲುಗಳು ನಿರಂತರವಾಗಿ ಹರಿದು ಬರುತ್ತಲೇ ಇದ್ದವು.
ಸುಪ್ರೀಂ ಕೋರ್ಟ್ ನಿಂದ ಸದ್ಯದಲ್ಲೇ ಹೊರಬೀಳಲಿರುವ ಅಯೋಧ್ಯೆ ವಿವಾದ ತೀರ್ಪಿಗೆ ಸಂಬಂಧಿಸಿದಂತೆ ಹಲವು ರಾಜ್ಯಗಳ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.












Click it and Unblock the Notifications