ಯೋಗಿ ಆದಿತ್ಯನಾಥ್ಗೆ ಸವಾಲೆಸೆದಿದ್ದ ಯುಪಿ ಮಾಜಿ ಪೊಲೀಸ್ ಆತ್ಮಹತ್ಯಗೆ ಪ್ರಚೋದನೆ ಆರೋಪದಲ್ಲಿ ಬಂಧನ
ಲಕ್ನೋ, ಆಗಸ್ಟ್ 28: ಉತ್ತರ ಪ್ರದೇಶದಲ್ಲಿ 2022 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿ ಹಾಗೂ ತನ್ನ ಉದ್ದೇಶಿತ ರಾಜಕೀಯ ಪಕ್ಷದ ಹೆಸರನ್ನು ಪ್ರಸ್ತಾಪಿಸಿದ ಸ್ವಲ್ಪ ಸಮಯದ ನಂತರ ಉತ್ತರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯನ್ನು ಲಕ್ನೋದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶುಕ್ರವಾರ ಬಂಧನ ಮಾಡಲಾಗಿದೆ.
ಈ ವರ್ಷ ಮಾರ್ಚ್ನಲ್ಲಿ ಕೇಂದ್ರ ಗೃಹ ಸಚಿವಾಲಯವು ಕಾರ್ಯಕ್ಷಮತೆ ಇಲ್ಲದಿರುವ ಕಾರಣದಿಂದಾಗಿ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ರನ್ನು ನಿವೃತ್ತಿ ಮಾಡಲಾಗಿತ್ತು. ಅಮಿತಾಬ್ ಠಾಕೂರ್ರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದ್ದು ಈ ಸಂದರ್ಭದಲ್ಲಿ ಅಮಿತಾಬ್ ಠಾಕೂರ್ ಪ್ರತಿಭಟಿಸಿರುವ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ. ಈ ವೇಳೆ ಪೊಲೀಸರು ಬಲವಂತವಾಗಿ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ರನ್ನು ನಿವಾಸದ ಬಳಿ ಪೊಲೀಸ್ ಜೀಪ್ಗೆ ಏರಿಸಿರುವುದು ಕೂಡಾ ವಿಡಿಯೋದಲ್ಲಿ ಕಾಣಬಹುದು.
ಪ್ರಾಥಮಿಕ ತನಿಖೆಯ ಸಮಯದಲ್ಲಿ ದೊರೆತ ಪುರಾವೆಗಳಲ್ಲಿ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಓರ್ವ ಹಿರಿಯ ಪೊಲೀಸ್ ಅಧಿಕಾರಿಯನ್ನು ಎಳೆದೊಯ್ಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ. "ನನಗೆ ಎಫ್ಐಆರ್ ತೋರಿಸುವವರೆಗೂ ನಾನು ಬರುವುದಿಲ್ಲ," ಎಂದು ಅಮಿತಾಬ್ ಠಾಕೂರ್ ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಅಮಿತಾಬ್ ಠಾಕೂರ್ ಈ ಹಿಂದೆ 2015 ರ ಜುಲೈ ತಿಂಗಳಿನಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸರ್ಕಾರದಿಂದ ಅಮಾನತ್ತಿಗೆ ಒಳಗಾಗಿದ್ದರು. ಇದಕ್ಕೂ ಕೆಲ ದಿನದ ಹಿಂದೆ ಅಮಿತಾಬ್ ಠಾಕೂರ್ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ 2016 ರ ಏಪ್ರಿಲ್ ತಿಂಗಳಿನಲ್ಲಿ ಈ ಅಮಾನತನ್ನು ರದ್ದು ಮಾಡಲಾಗಿತ್ತು ಹಾಗೂ ಮತ್ತೆ ಅಮಿತಾಬ್ ಠಾಕೂರ್ರನ್ನು ನೇಮಕ ಮಾಡಲಾಗಿತ್ತು.
ಬಹುಜನ ಸಮಾಜವಾದಿ ಪಕ್ಷದ ಸಂಸದ ಅತುಲ್ ರಾಯ್ ತನ್ನ ಮೇಲೆ 2019 ರಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೇಶದ ಉನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ನ ಗೇಟ್ನ ಮುಂಭಾಗದಲ್ಲಿ ತನ್ನ ಸ್ನೇಹಿತನ ಜೊತೆಯಲ್ಲಿ ಮೈ ಮೇಲೆ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ 24 ವರ್ಷದ ಯುವತಿ ದೆಹಲಿ ಆಸ್ಪತ್ರೆಯಲ್ಲಿ ತಾನು ಸಾವನ್ನಪ್ಪುವ ಮುನ್ನ ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮಾಜಿ ಪೊಲೀಸ್ ಅಧಿಕಾರಿಗಳ ಹೆಸರನ್ನು ಹೇಳಿದ್ದರು.
Retired IPS officer Amitabh Thakur has been arrested by Lucknow Police.#AmitabhThakur has been charged with several charges including abetment to suicide, criminal conspiracy.#UttarPradesh #Lucknow pic.twitter.com/xl86ul2fkb
— #जयश्रीराधे 🚩🙏 (@gayatrigkhurana) August 27, 2021
ಒಂದು ವಾರದ ಹಿಂದೆ 24 ವರ್ಷದ ಯುವತಿ ಹಾಗೂ ಆಕೆಯ ಸ್ನೇಹಿತನೋರ್ವ 2019 ರಲ್ಲಿ ಯುವತಿಯ ಮೇಲೆ ಬಹುಜನ ಸಮಾಜವಾದಿ ಪಕ್ಷದ ಸಂಸದ ಅತುಲ್ ರಾಯ್ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿ ಸುಪ್ರೀಂ ಕೋರ್ಟ್ ಗೇಟ್ನ ಹೊರ ಭಾಗದಲ್ಲಿ ತಮ್ಮ ಮೇಲೆ ತಾವೇ ಬೆಂಕಿ ಹಾಕಿಕೊಂಡಿದ್ದರು. ಈ ಪೈಕಿ ಒಂದು ವಾರದ ಚಿಕಿತ್ಸೆ ಬಳಿಕ ಯುವತಿಯು ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ, ಇನ್ನು ಯುವತಿಯು ಸ್ನೇಹಿತನು ಶನಿವಾರವೇ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮಗಳು ತಿಳಿಸಿದೆ.
ಆಗಸ್ಟ್ 16 ರಂದು ಮಹಿಳೆ ಹಾಗೂ ಆಕೆಯ ಸ್ನೇಹಿತ ದೆಹಲಿಗೆ ಬಂದಿದ್ದು ಫೇಸ್ ಬುಕ್ ಲೈವ್ ಮಾಡಿ ತಮ್ಮ ಮೇಲೆ ಬೆಂಕಿ ಹಾಕಿಕೊಂಡಿದ್ದರು. ಈ ವಿಡಿಯೋದಲ್ಲಿ ಪೊಲೀಸರು ಸಂಸದರು ಹಾಗೂ ಆತನ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.
(ಒನ್ ಇಂಡಿಯಾ ಸುದ್ದಿ)












Click it and Unblock the Notifications