60 ಮಕ್ಕಳ ಸಾವು ಪ್ರಕರಣ: ಡಾ. ಕಫೀಲ್ ಖಾನ್ ನಿರ್ದೋಷಿ
ಲಕ್ನೋ, ಸೆಪ್ಟೆಂಬರ್ 27: ಗೋರಖ್ಪುರದ ಆಸ್ಪತ್ರೆಯೊಂದರಲ್ಲಿ ಎರಡು ವರ್ಷದ ಹಿಂದೆ 60 ಮಕ್ಕಳು ಮೃತಪಟ್ಟ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಡಾ. ಕಫೀಲ್ ಖಾನ್ ಅವರನ್ನು ಖುಲಾಸೆಗೊಳಿಸಲಾಗಿದೆ.
2017ರಲ್ಲಿ ಗೋರಖ್ಪುರ ಮಕ್ಕಳ ಸಾವಿನ ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ತಮ್ಮ ಕರ್ತವ್ಯ ನಿರ್ವಹಿಸದ ಆರೋಪಗಳಡಿಯಲ್ಲಿ ಕಫೀಲ್ ಖಾನ್ ಅವರನ್ನು ಅಮಾನತುಗೊಳಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ 60 ಮಕ್ಕಳು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದರು.
ಈ ಬಗ್ಗೆ ನಡೆದ ಇಲಾಖಾ ತನಿಖೆಯ ವರದಿಯನ್ನು ವೈದ್ಯಕೀಯ ಕಾಲೇಜು ಆಡಳಿತವು ಗುರುವಾರ ಕಫೀಲ್ ಅವರಿಗೆ ನೀಡಿದೆ. 'ಆರೋಪಿಯ ವಿರುದ್ಧದ ಆರೋಪಗಳು ಪ್ರಬಲವಾಗಿಲ್ಲ. ಹೀಗಾಗಿ ಆರೋಪಿ ಅಧಿಕಾರಿಯು ತಪ್ಪಿತಸ್ಥರಲ್ಲ ಎಂಬುದು ಕಂಡುಬಂದಿದೆ' ಎಂದು ವರದಿ ಹೇಳಿದೆ.
ಉತ್ತರ ಪ್ರದೇಶ: ಡಾ. ಕಫೀಲ್ ಖಾನ್ ಸಹೋದರನ ಮೇಲೆ ಗುಂಡಿನ ದಾಳಿ
ಕಫೀಲ್ ಖಾನ್ ಅವರು ಶಿಶು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಸ್ಪತ್ರೆಯು ಬಾಕಿ ಮೊತ್ತ ಪಾವತಿಸದ ಕಾರಣ ಎಲ್ಲ ಆಮ್ಲಜನಕ ಪೂರೈಕೆದಾರ ಸಂಸ್ಥೆಗಳು ಸರಬರಾಜು ಸ್ಥಗಿತಗೊಳಿಸಿದ್ದವು. ಇದರಿಂದಾಗಿ ಆಸ್ಪತ್ರೆಯಲ್ಲಿದ್ದ 60 ಮಕ್ಕಳು ಜೀವ ಕಳೆದುಕೊಂಡಿದ್ದವು. ಇದಕ್ಕೆ ಖಾನ್ ಅವರೇ ಹೊಣೆಗಾರರು ಎಂದು 2017ರ ಆಗಸ್ಟ್ 22ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ನಾಲ್ಕು ಆರೋಪಗಳಿಂದ ಮುಕ್ತಿ
ತಮ್ಮ ಕರ್ತವ್ಯದ ಸಮಯದಲ್ಲಿ ನಿರ್ಲಕ್ಷ್ಯದಿಂದ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಲು, ಖಂಡನೀಯ ನರಮೇಧ ನಡೆಯಲು, ನಂಬಿಕೆಯ ಉಲ್ಲಂಘನೆಯ ಅಪರಾಧ ಮತ್ತು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಆರೋಪಗಳಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು. ಖಾನ್ ಅವರು 9 ತಿಂಗಳು ಜೈಲಿನಲ್ಲಿ ಕಳೆದಿದ್ದರು. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತಾದರೂ ವೈದ್ಯಕೀಯ ಕಾಲೇಜಿನಿಂದ ಅಮಾನತು ಮಾಡಲಾಗಿತ್ತು.
48 ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್ ತವರಲ್ಲಿ 30 ಮಕ್ಕಳ ದಾರುಣ ಬಲಿ
ಸಿಬಿಐ ತನಿಖೆಗೆ ಆಗ್ರಹ
ಇದರ ಜತೆಗೆ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಖಾಸಗಿ ವೈದ್ಯಕೀಯ ಚಟುವಟಿಕೆ ನಡೆಸುತ್ತಿರುವ ಹೆಚ್ಚುವರಿ ಆರೋಪಗಳನ್ನು ಕೂಡ ಹೊರಿಸಲಾಗಿತ್ತು. ಆದರೆ ಅವುಗಳಿಗೆ ಪುರಾವೆಯ ಕೊರತೆಯಿಂದಾಗಿ ಪ್ರಕರಣಗಳನ್ನು ಕೈಬಿಡಲಾಗಿತ್ತು. ಈ ಪ್ರಕರಣದಲ್ಲಿ ತಮ್ಮನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದ ಖಾನ್, ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದರು.
ತಪ್ಪು ಮರೆಮಾಚಲು ಖಾನ್ ಮೇಲೆ ಆರೋಪ
ಕಫೀಲ್ ಖಾನ್ ಅವರು ವಾಸ್ತವವಾಗಿ ಈ ಮುಗ್ಧ ಮಕ್ಕಳ ಪ್ರಾಣ ಉಳಿಸಲು ಪ್ರಯತ್ನಿಸಿದ್ದರು. ಆದರೆ ಆಡಳಿತ ಮಂಡಳಿ ಮತ್ತು ಸರ್ಕಾರ ಅವರಿಗೆ ಸ್ಪಂದಿಸಿರಲಿಲ್ಲ. ಕೊನೆಗೆ ಪ್ರಕರಣದಲ್ಲಿ ಅವರೇ ತಪ್ಪಿತಸ್ಥರು ಎಂದು ಆಪಾದನೆ ಹೊರಿಸಲಾಗಿತ್ತು. ಈ ಮೂಲಕ ಉತ್ತರ ಪ್ರದೇಶ ಸರ್ಕಾರ ತನ್ನ ತಪ್ಪನ್ನು ಮರೆಮಾಚಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಗೋರಖ್ ಪುರ ದುರಂತ: ಯೋಗಿ ರಾಜಿನಾಮೆಗೆ ಪಟ್ಟು ಸೇರಿ 6 ಬೆಳವಣಿಗೆ
ಭಾರತದಲ್ಲಿ ಎಲ್ಲವೂ ಚೆನ್ನಾಗಿಲ್ಲ
ತಾವು ಕಳಂಕರಹಿತರು ಎಂಬ ವರದಿ ಬರುತ್ತಲೇ ಕಫೀಲ್ ಖಾನ್ ಅವರು ಎರಡು ವರ್ಷಗಳಿಂದ ಅನುಭವಿಸಿದ್ದ ಅವಮಾನ, ಹಿಂಸೆಗಳಿಂದ ಮುಕ್ತರಾಗಿದ್ದಕ್ಕೆ ನಿರಾಳರಾಗಿದ್ದಾರೆ. ಜತೆಗೆ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
''ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಅಮೆರಿಕದಲ್ಲಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ' ಎಂದಿದ್ದರು. ಇಲ್ಲ ಸರ್. ಭಾರತದಲ್ಲಿ ಎಲ್ಲವೂ ಚೆನ್ನಾಗಿಲ್ಲ. 2017ರ ಆಗಸ್ಟ್ 10ರ ರಾತ್ರಿ ಬಿಆರ್ಡಿ ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಶಿಶುಗಳು ಜೀವ ಕಳೆದುಕೊಂಡಿದ್ದವು. ಅವರ ಪೋಷಕರಿಗೆ ನ್ಯಾಯ ಸಿಗುತ್ತದೆಯೇ? ನೇಷನ್ ವಾಂಟ್ಸ್ ಟು ನೌ!'' ಎಂದು ಕಫೀಲ್ ಖಾನ್ ಟ್ವೀಟ್ ಮಾಡಿದ್ದಾರೆ.