ಯುಪಿ ನದಿಯಲ್ಲಿ ಹೆಣಗಳು ತೇಲುತ್ತಿದ್ದರೆ, ಜಾಹೀರಾತಿಗೆ ಕೋಟಿ ಕೋಟಿ ಖರ್ಚು: ಕೇಜ್ರಿವಾಲ್
ಲಕ್ನೋ, ಫೆಬ್ರವರಿ 8: ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿ ನದಿಗಳಲ್ಲಿ ಜನರ ಹೆಣಗಳು ತೇಲುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾಹೀರಾತು ನೀಡುವುದರಲ್ಲೇ ಬ್ಯುಸಿ ಆಗಿದ್ದರು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೂಷಿಸಿದ್ದಾರೆ.
ಕೊರೊನಾವೈರಸ್ ಅತಿಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ದೆಹಲಿ ಸರ್ಕಾರವು ಉತ್ತರ ಪ್ರದೇಶದ ಕಾರ್ಮಿಕರನ್ನು ಒತ್ತಾಯಪೂರ್ವಕವಾಗಿ ದೆಹಲಿ ತೊರೆದು ಹೋಗುವಂತೆ ಒತ್ತಡ ಹೇರಿತ್ತು ಎಂಬ ಸಿಎಂ ಯೋಗಿ ಆದಿತ್ಯನಾಥ್ ಆರೋಪಕ್ಕೆ ಸಿಎಂ ಕೇಜ್ರಿವಾಲ್ ಪ್ರತ್ಯುತ್ತರ ನೀಡಿದ್ದಾರೆ.
"ಇಲ್ಲಿ ಕೇಳು ಯೋಗಿ, ನೀವು ಸುಮ್ಮನೆ ಬಿಡಿ. ಯುಪಿ ಜನರ ಮೃತದೇಹಗಳು ನದಿಯಲ್ಲಿ ತೇಲುತ್ತಿದ್ದ ಕಾಲದಲ್ಲಿ ನೀವು, ಚೆಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಟೈಮ್ಸ್ ಮ್ಯಾಗ್ಸಿನ್ ನಲ್ಲಿ ಜಾಹೀರಾತು ನೀಡುವುದಕ್ಕಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ್ದೀರಿ. ನಿಮ್ಮಂತಹ ಕೆಟ್ಟ ಮತ್ತು ಕ್ರೂರ ನಾಯಕರನ್ನು ನಾನೆಲ್ಲಿಯೂ ನೋಡಿಲ್ಲ," ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಸಿಎಂ ಕೇಜ್ರಿವಾಲ್ ವಿರುದ್ಧ ಯೋಗಿ ಟ್ವೀಟ್:
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರ ಆರೋಪ ಮಾಡಿದ್ದರು. ಇಬ್ಬರು ನಾಯಕರ ನಡುವಿನ ಸಮರಕ್ಕೆ ಟ್ವಿಟರ್ ವೇದಿಕೆ ಆಗಿತ್ತು. ಸೋಮವಾರ ಮೊದಲು ಟ್ವೀಟ್ ಮಾಡಿದ ಸಿಎಂ ಯೋಗಿ, ದೆಹಲಿ ಸರ್ಕಾರವು ಕೊರೊನಾವೈರಸ್ ಕಾಲದಲ್ಲಿ ಅಮಾನವೀಯವಾಗಿ ವರ್ತಿಸಿತು ಎಂದು ಆರೋಪಿಸಿದ್ದರು.
"ಕೇಳಿ ಕೇಜ್ರಿವಾಲ್, ಕೊರೊನಾದಿಂದ ಜನರು ನರಳುತ್ತಿದ್ದ ಸಂದರ್ಭದಲ್ಲಿ ಯುಪಿ ಕಾರ್ಮಿಕರನ್ನು ನೀವು ಅಮಾನವೀಯವಾಗಿ ದೆಹಲಿಯಿಂದ ಹೊರಹೋಗುವಂತೆ ಒತ್ತಡ ಹೇರಿದ್ದೀರಿ. ನಿಮ್ಮ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಮಾನವೀಯವಾಗಿ ವರ್ತಿಸಿದೆ. ನಿಮ್ಮ ಸರ್ಕಾರದಿಂದಾಗಿ ಮಧ್ಯರಾತ್ರಿ ವೇಳೆ ಅಸಹಾಯಕರಾದ ಮಧ್ಯಮ ವರ್ಗದ ಮಹಿಳೆಯರು ಮತ್ತು ಪುಟ್ಟ ಮಕ್ಕಳು ಉತ್ತರ ಪ್ರದೇಶದ ಗಡಿಯಲ್ಲಿ ನಿಂತಿದ್ದರು," ಎಂದು ಸಿಎಂ ಯೋಗಿ ಆದಿತ್ಯನಾಥ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.
ದೆಹಲಿಯಿಂದ ಜನರನ್ನು ಹೊರಗಟ್ಟಿದ ಆರೋಪ:
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೊಂದು ಟ್ವೀಟ್ ಸಂದೇಶದಲ್ಲಿ, "ಕೇಜ್ರಿವಾಲ್ ಸುಳ್ಳು ಹೇಳುವ ಕಲೆಯನ್ನು ಹೊಂದಿದ್ದಾರೆ, ಜಾಗತಿಕವಾಗಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಬಾಧಿಸುತ್ತಿದ್ದ ಸಂದರ್ಭದಲ್ಲಿ ದೇಶವು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ರೋಗವನ್ನು ಸಮರ್ಥವಾಗಿ ಎದುರಿಸುತ್ತಿತ್ತು, ಇನ್ನೊಂದು ದಿಕ್ಕಿನಲ್ಲಿ ಕೇಜ್ರಿವಾಲ್ ದೆಹಲಿಯಲ್ಲಿನ ವಲಸೆ ಕಾರ್ಮಿಕರಿಗೆ ರಾಜ್ಯ ತೊರೆಯುವ ದಾರಿ ತೋರಿಸುತ್ತಿದ್ದರು," ಎಂದು ಬರೆದುಕೊಂಡಿದ್ದಾರೆ.
ಮಲಗಿದ್ದ ಕಾರ್ಮಿಕರನ್ನು ಯುಪಿ ಗಡಿಗೆ ಕಳುಹಿಸಿದರು:
"ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಮಲಗಿದ್ದ ವಲಸೆ ಕಾರ್ಮಿಕರನ್ನು ರಾತ್ರೋರಾತ್ರಿ ಬಸ್ಸುಗಳಲ್ಲಿ ಯುಪಿ ಗಡಿಗೆ ಕಳುಹಿಸಲಾಯಿತು. ಆನಂದ್ ವಿಹಾರಕ್ಕೆ ಬಸ್ಸುಗಳು ಹೊರಡುತ್ತಿವೆ, ಯುಪಿ ಮತ್ತು ಬಿಹಾರಕ್ಕೆ ಬಸ್ಸುಗಳು ಹೋಗುತ್ತಿವೆ ಎಂದು ಘೋಷಣೆಗಳನ್ನು ಹೊರಡಿಸಲಾಯಿತು. ಯುಪಿ ಸರ್ಕಾರ ವಲಸೆ ಹೋಗಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆ ತರಲು ಬಸ್ ವ್ಯವಸ್ಥೆಯನ್ನು ಕಲ್ಪಿಸಿತ್ತು," ಎಂದು ಯೋಗಿ ಬರೆದುಕೊಂಡಿದ್ದಾರೆ.
ಕೊರೊನಾವೈರಸ್ ಹರಡಲು ಮುಂಬೈ, ದೆಹಲಿ ಕಾರಣ:
ಸಂಸತ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಜ್ಯಗಳಿಗೆ ಹರಡಲು ಮುಂಬೈ ಮತ್ತು ದೆಹಲಿ ಕಾರಣ ಎಂದು ಆರೋಪಿಸಿದ್ದರು. ಮುಂಬೈ ತೊರೆಯುವುದಕ್ಕಾಗಿ ಕಾಂಗ್ರೆಸ್ ಸರ್ಕಾರವು ವಲಸೆ ಕಾರ್ಮಿಕರಿಗೆ ಉಚಿತ ಟಿಕೆಟ್ ನೀಡಿತು. ಇದೇ ವೇಳೆ ದೆಹಲಿಯ ಕೊಳಚೆ ಪ್ರದೇಶಗಳಲ್ಲಿ ವಾಸವಿದ್ದ ವಲಸೆ ಕಾರ್ಮಿಕರು ದೆಹಲಿಯಿಂದ ಸ್ವಂತ ಊರುಗಳಿಗೆ ತೆರಳುವುದಕ್ಕೆ ಬಸ್ ವ್ಯವಸ್ಥೆಯನ್ನು ಮಾಡಿದವು. ಇದರಿಂದಾಗಿಯೇ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಕೊವಿಡ್-19 ಪ್ರಕರಣಗಳು ಹರಡುವುದಕ್ಕೆ ಕಾರಣವಾಯಿತು," ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಟ್ವೀಟ್ ಸಮರ ಶುರುವಾಗಿದೆ.












Click it and Unblock the Notifications