ಬುಲಂದ್ ಶಹರ್ ಹಿಂಸಾಚಾರ: ಆರೋಪಿ ಮನೆಯಲ್ಲಿ ಇನ್ ಸ್ಪೆಕ್ಟರ್ ಮೊಬೈಲ್
ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಹತ್ಯೆಗೀಡಾಗಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಮೊಬೈಲ್ ಫೋನ್ ಅನ್ನು ಮುಖ್ಯ ಆರೋಪಿ ಪ್ರಶಾಂತ್ ನತ್ತ್ ಮನೆಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮೊಬೈಲ್ ಫೋನ್ ಇರುವ ಸ್ಥಳದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ನಾವೀಗ ಇನ್ ಸ್ಪೆಕ್ಟರ್ ಸುಬೋಧ್ ಸಿಂಗ್ ರ ಪಿಸ್ತೂಲ್ ಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಎಸ್.ಪಿ.ಅತುಲ್ ಶ್ರೀವಾತ್ಸವ್ ಅವರು ತಿಳಿಸಿದ್ದಾರೆ ಎಂದು ಎಎನ್ ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ಬುಲಂದ್ ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಕೇಸ್: ಶಂಕಿತನ ಬಂಧನ
ಕಳೆದ ಡಿಸೆಂಬರ್ ನಲ್ಲಿ ಪ್ರಶಾಂತ್ ನನ್ನು ಬಂಧಿಸಲಾಗಿತ್ತು. ಬುಲಂದ್ ಶಹರ್ ನ ಮಹವ್ ಹಳ್ಳಿಯಲ್ಲಿ ಗೋ ಹತ್ಯೆ ವಿಚಾರವಾಗಿ ದೊಡ್ಡ ಮಟ್ಟದ ಹಿಂಸಾಚಾರ ನಡೆದಿತ್ತು. ಆಗ ಪ್ರತಿಭಟನೆ ನಡೆದಾಗ ಪೊಲೀಸ್ ಠಾಣೆ ಉಸ್ತುವಾರಿ ಸುಬೋಧ್ ಕುಮಾರ್ ಸಿಂಗ್ ನನ್ನು ಪ್ರತಿಭಟನಾನಿರತರ ಪೈಕಿ ಒಬ್ಬ ಗುಂಡು ಹಾರಿಸಿ, ಕೊಂದಿದ್ದ ಎನ್ನಲಾಗಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಉತ್ತರ ಪ್ರದೇಶದ ಸರಕಾರ ಕೂಡ ಆರೋಪಿಗಳ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿತ್ತು. ಬುಲಂದ್ ಶಹರ್ ನಲ್ಲಿ ಮೂವರು ಗೋ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ, ಶುರುವಾದ ಹಿಂಸಾಚಾರದಲ್ಲಿ ನಂತರ ಇಬ್ಬರು ಸಾವನ್ನಪ್ಪಿದ್ದರು.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈ ವರೆಗೆ ಮೂವತ್ತೈದು ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ ಇನ್ ಸ್ಪೆಕ್ಟರ್ ರ ಮೇಲೆ ಗುಂಡು ಹಾರಿಸಿದ ಆರೋಪ ಹೊತ್ತಿರುವ ಪ್ರಶಾಂತ್ ಹಾಗೂ ಯೋಗೇಶ್ ಕೂಡ ಒಳಗೊಂಡಿದ್ದಾರೆ.
ಶಂಕಿತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ದಾಖಲಿಸಲಾಗಿದೆ. ಕೋರ್ಟ್ ಗೆ ಅವರ ವಿರುದ್ಧ ಒಂದು ವರ್ಷದ ತನಕ ಆರೋಪ ಪಟ್ಟಿ ಸಲ್ಲಿಸದೆ ವಶದಲ್ಲಿ ಇರಿಸಿಕೊಳ್ಳಲು ಅವಕಾಶ ಇದೆ. ಬೇರೆ ಪ್ರಕರಣಗಳಲ್ಲಿ ತೊಂಬತ್ತು ದಿನಗಳೊಳಗೆ ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸದಿದ್ದರೆ ತಾನಾಗಿಯೇ ಜಾಮೀನು ಸಿಗುತ್ತದೆ.
ಕಳೆದ ಡಿಸೆಂಬರ್ ಮೂರನೇ ತಾರೀಕು ಮಹವ್ ಹಾಗೂ ಸಿಯಾನ ಹಳ್ಳಿಯ ಹೊರಭಾಗದಲ್ಲಿ ರಾಸುವಿನ ಮೃತ ದೇಹ ಪತ್ತೆಯಾಗಿತ್ತು. ಇನ್ನು ಗೋವು ಮಾರಾಟಗಾರರಾದ ಅಜರ್ ಖಾನ್, ನದೀಂ ಖಾನ್, ಮೆಹಬೂಬ್ ಖಾನ್ ವಿರುದ್ಧ ಕೂಡ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರತ್ಯೇಕವಾಗಿ ದೂರು ದಾಖಲಾಗಿದೆ.