ಹರ್ ಘರ್ ಭಾಜಪ: ಉತ್ತರ ಪ್ರದೇಶದ 4 ಕೋಟಿ ಮನೆಗಳಿಗೆ 'ಕಮಲ'ದ ಸ್ಟಿಕ್ಕರ್
ಪ್ರಯಾಗ್ ರಾಜ್, ಜನವರಿ 24: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಈ ಮಧ್ಯೆ ಕೈರಾನಾ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಚಾರ ನಡೆಸಿರುವ ಬಿಜೆಪಿ, ಭರ್ಜರಿ ಯೋಜನೆ ಹಾಕಿಕೊಂಡಿದೆ.
ಹರ್ ಘರ್ ಭಾಜಪ (ಪ್ರತಿ ಮನೆಯಲ್ಲೂ ಬಿಜೆಪಿ) ಎಂಬ ಕಾರ್ಯಕ್ರಮದ ಅಡಿಯಲ್ಲಿ 4 ಕೋಟಿ ಮನೆಗಳಿಗೆ ಬಿಜೆಪಿಯ ಸ್ಟಿಕ್ಕರ್ಗಳನ್ನು ಅಂಟಿಸಲು ಭಾರತೀಯ ಜನತಾ ಪಕ್ಷ ಯೋಜನೆ ರೂಪಿಸಿದೆ. ಬಿಜೆಪಿ ಸ್ಟಿಕ್ಕರ್ ಅಂಟಿಸುವ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಮೂವರು ಮತದಾರರು ಇರುವುದನ್ನು ಗುರುತಿಸಿಕೊಳ್ಳಲಾಗುತ್ತಿದ್ದು, ಆ ಮೂಲಕ 12 ಕೋಟಿ ಮತದಾರರನ್ನು ತಲುಪಲು ಉದ್ದೇಶಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಪಡೆದುಕೊಂಡ ಫಲಾನುಭವಿಗಳನ್ನು ಗುರುತಿಸುವುದಕ್ಕೂ ಈ ಯೋಜನೆ ಸಹಕಾರಿ ಆಗಲಿದೆ. ಆ ಮೂಲಕ ಸರ್ಕಾರದ ಯೋಜನೆಗಳ ಲಾಭ ಪಡೆದವರ ಮನೆ ಬಾಗಿಲಿಗೆ ಬಿಜೆಪಿ ತನ್ನ ಪಕ್ಷದ ಸ್ಟಿಕ್ಕರ್ ಅಂಟಿಸುವುದಕ್ಕೆ ಮುಂದಾಗಿದೆ.

ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ಬಿಜೆಪಿ ಪ್ರಚಾರ:
ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ 12 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಮನೆ ಮನೆ ಪ್ರಚಾರ ನಡೆಸಿದರು. ಈ ವೇಳೆ ಸರ್ಕಾರದ ಯೋಜನೆಗಳ ಲಾಭ ಪಡೆದಿರುವ ಜನರನ್ನು ಗುರುತಿಸಿ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿಕೊಂಡರು. ಇದೇ ವೇಳೆ ಮನೆ ಮನೆಗೆ ಬಿಜೆಪಿಯ ಕಮಲದ ಚಿಹ್ನೆಯುಳ್ಳ ಸ್ಟಿಕ್ಕರ್ ಅನ್ನು ಮನೆ ಬಾಗಿಲಿಗೆ ಅಂಟಿಸಲಾಗುತ್ತಿದೆ.
ಪ್ರಯಾಗ್ ರಾಜ್ ಜಿಲ್ಲೆಯ 12 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹರ್ ಘರ್ ಭಾಜಪ ಕಾರ್ಯಕ್ರಮ ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಸ್ಥಳೀಯ ನಾಯಕರಿಗೆ ವಹಿಸಲಾಗಿದೆ. ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ಮೆಜಾ, ಕರ್ಚನಾ, ಅಲಹಾಬಾದ್ ಪಶ್ಚಿಮ, ಅಲಹಾಬಾದ್ ಉತ್ತರ, ಅಲಹಾಬಾದ್ ದಕ್ಷಿಣ, ಫುಲ್ಪುರ್, ಫಾಫಾಮೌ, ಪ್ರತಾಪ್ಪುರ್, ಹಾಂದಿಯಾ, ಬಾರಾ, ಸೊರೊನ್ ಮತ್ತು ಕೊರೊನ್ ಕ್ಷೇತ್ರಗಳು ಸೇರಿವೆ. ಈ ಜಿಲ್ಲೆಯ 60 ಮಂಡಲಗಳಲ್ಲಿ ಪ್ರಚಾರ ಕಾರ್ಯವನ್ನು ನಡೆಸಲಾಗುತ್ತಿದ್ದು, ಪ್ರತಿಯೊಂದು ಮನೆಗಳಿಗೂ ತೆರಳಿ ಪ್ರಚಾರ ನಡೆಸುವಂತೆ ಸೂಚನೆ ನೀಡಲಾಗಿದೆ. ಆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಲು ಬಿಜೆಪಿ ಮುಂದಾಗಿದೆ.
ಕೊಳಚೆ, ಹಿಂದುಳಿದ ಜನರುಳ್ಳ ಪ್ರದೇಶಗಳೇ ಟಾರ್ಗೆಟ್:
"ಉತ್ತರ ಪ್ರದೇಶ ಪ್ರಯಾಗ್ ರಾಜ್ ಜಿಲ್ಲೆಯ 12 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹರ್ ಘರ್ ಭಾಜಪ ಅಭಿಯಾನವನ್ನು ಸಮರ್ಪಕವಾಗಿ ಜಾರಿಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಕ್ಷೇತ್ರದ ಸ್ಲಂ ಹಾಗೂ ಹಿಂದುಳಿದ ಜನರು ವಾಸವಾಗಿರುವ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿಕೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಲಾಭ ಪಡೆದಿರುವ ಪ್ರತಿಯೊಬ್ಬರ ಮನೆಗೆ ಕಮಲದ ಚಿಹ್ನೆಯುಳ್ಳ ಸ್ಟಿಕ್ಕರ್ ಅಂಟಿಸಲಾಗುವುದು," ಎಂದು ಮುಖಂಡ ಆಶಿಶ್ ಗುಪ್ತಾ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.












Click it and Unblock the Notifications