ಗುಂಡು ಹಾರಿಸಿ ಟಿವಿ ಪತ್ರಕರ್ತನ ಕೊಲೆ, ನಾಲ್ವರ ಬಂಧನ
ಲಕ್ನೋ, ಆ. 25: ಬಲಿಯಾ ಜಿಲ್ಲೆಯ ಸ್ಥಳೀಯ ಹಿಂದಿ ಸುದ್ದಿವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸೋಮವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು
ಪತ್ರಕರ್ತರನ್ನು ಬೆನ್ನಟ್ಟಿಕೊಂಡು ಗುಂಡು ಹಾರಿಸತೊಡಗಿದೆ. ಗುಂಡಿನ ದಾಳಿ ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲರಾದ ಪತ್ರಕರ್ತ ಗುಂಡೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ನಂತರ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Recommended Video
ಮೃತ ಪತ್ರಕರ್ತರನ್ನು 45 ವರ್ಷ ವಯಸ್ಸಿನ ರತನ್ ಸಿಂಗ್ ಎಂದು ಗುರುತಿಸಲಾಗಿದೆ. ಸ್ಥಳೀಯ ಹಿಂದಿ ಸುದ್ದಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೆಚ್ಚುವರಿ ಎಸ್ಪಿ ಸಂಜಯ್ ಯಾದವ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದಿನೇಶ್ ಸಿಂಗ್, ಅರವಿಂದ್ ಸಿಂಗ್, ಸುನೀಲ್ ಸಿಂಗ್ ಹಾಗೂ ಮೋತಿ ಸಿಂಗ್ ಎಂಬುವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಅವಾನಿಶ್ ಅವಸ್ಥಿ ಹೇಳಿದ್ದಾರೆ.

ಆಸ್ತಿ ವಿವಾದವೇ ರತನ್ ಸಿಂಗ್ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. 2019ರಲ್ಲಿ ಎಫ್ಐಆರ್ ಕೂಡಾ ದಾಖಲಾಗಿತ್ತು. ಸೋಮವಾರದಂದು ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ರಾತ್ರಿ ವೇಳೆಗೆ ರತನ್ ಸಿಂಗ್ ಅವರ ಪಾರ್ಟ್ನರ್ ದಿನೇಶ್ ಸಿಂಗ್ ಇತರೆ ಆರೋಪಿಗಳ ಜೊತೆಗೂಡಿ ರತನ್ ಕೊಲೆ ಮಾಡಿದ್ದಾರೆ ಎಂದು ಹೆಚ್ಚುವರಿ ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದರು.












Click it and Unblock the Notifications